ಭಾಷೆ, ದ್ವೇಷ ಮರೆಯೋಣ: ನಿರ್ದೇಶಕ ಲಿಂಗದೇವರು
ಬೆಂಗಳೂರು, ಸೆಪ್ಟೆಂಬರ್ 16: ಭಾಷೆ, ದ್ವೇಷ, ಪ್ರದೇಶ ಹಾಗೂ ಲಿಂಗ ತಾರತಮ್ಯವನ್ನು ಮರೆತು ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ನಿರ್ದೇಶಕ ಲಿಂಗದೇವರು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ಕೆ.ಆರ್.ಪುರಂನ ಗಾರ್ಡನ್ ಸಿಟಿ ಕಾಲೇಜಿನಲ್ಲಿ ಗುರುವಾರ ಕನ್ನಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಮಹಾನಗರಗಳಲ್ಲಿ ಕನ್ನಡ ಮಾತನಾಡುವ ಮಂದಿ ಕಡಿಮೆಯಾಗಿದ್ದಾರೆ. ಕೇವಲ ಗ್ರಾಮೀಣ ಭಾಗಗಳಲ್ಲಿ ಮಾತ್ರ ಕನ್ನಡ ಮಾತನಾಡುವ ಜನರು ಕಾಣುತ್ತಾರೆ. ಕನ್ನಡದ ಉಳಿವಿಗೆ ನಾವೆಲ್ಲರೂ ಶ್ರಮಿಸಬೇಕು ಎಂದರು.[ಗಾರ್ಡೇನಿಯಾ ಉತ್ಸವದಲ್ಲಿ ಬಗೆ ಬಗೆಯ ಸ್ಪರ್ಧೆಗಳು]
ಗಾರ್ಡನ್ ಸಿಟಿ ಕಾಲೇಜಿಗೆ ರಾಜ್ಯವಷ್ಟೆ ಅಲ್ಲ, ವಿವಿಧ ರಾಜ್ಯ, ಹೊರ ದೇಶದ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಅಧ್ಯಕ್ಷ ವಿ.ಜಿ.ಜೋಸೆಫ್ ಹೇಳಿದರು.
ಕನ್ನಡ ಕಾರ್ಯಕ್ರಮ ನವೆಂಬರ್ ಗೆ ಮಾತ್ರ ಸೀಮಿತವಾಗದೆ ವರ್ಷಪೂರ್ತಿ ಆಚರಿಸಬೇಕು. ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಅನ್ಯ ಭಾಷೆಯವರಿಗೂ ನಾಡ-ನುಡಿಯ ಸಂಸ್ಕೃತಿ, ಆಚಾರ-ವಿಚಾರ, ನೆಲ- ಜಲದ ಗೌರವ ಹಾಗೂ ಭಾಷೆಗೆ ಇರುವ ಮಹತ್ವ ಬಗ್ಗೆ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದರು.[ಸನ್ನಿ ಲಿಯೋನ್ ಸ್ವಾಗತ, ಕೇರಳ ವಿದ್ಯಾರ್ಥಿಗಳಲ್ಲಿ ಪುಳಕ]
ಕನ್ನಡ ಅನುಭವ ಮಂಟಪವಿದ್ದಂತೆ. ಇಲ್ಲಿ ಎಲ್ಲ ಕಸುಬುದಾರರು ತಮ್ಮ ಚೌಕಟ್ಟಿನ ಅನುಭವ ಹಂಚಿಕೊಂಡು, ಜೀವನ ನಡೆಸುತ್ತಾರೆ. ಚೌಕಟ್ಟಿನಿಂದ ಹೊರಬಂದು ಹೊಸ ಪ್ರಯೋಗಗಳನ್ನು ಮಾಡಬೇಕು. ಆಗ ಕನ್ನಡದ ಪರಂಪರೆ ಉಳಿಸಿಕೊಳ್ಳಲು ಸಾಧ್ಯ. ಭಾಷೆಯನ್ನು ಶಿಖರಕ್ಕೆ ಏರಿಸಲು ಸಾಧ್ಯ ಎಂದು ನಟ ಅರವಿಂದ ರಾವ್ ಹೇಳಿದರು.
ಪುರಂದರದಾಸರು, ಕನಕದಾಸರು ಭಕ್ತಿಪಂಥದ ತಮ್ಮ ಕೀರ್ತನೆಗಳ ಮೂಲಕ ಅದ್ಭುತವಾದ ಕ್ರಾಂತಿ ಮಾಡಿದವರು. ನಾಡು-ನುಡಿಯನ್ನು ಶ್ರೀಮಂತಹೊಳಿಸಿದರು. ಏಳು ಬಾರಿ ಜ್ಞಾನಪೀಠ ಪ್ರಶಸ್ತಿ ಪಡೆದ ಹೆಮ್ಮೆ ನಮ್ಮ ಕನ್ನಡಕ್ಕಿದೆ. ಬೇರೆ ಯಾವ ಭಾಷೆಗೂ ಇಂತಹ ಹೆಮ್ಮೆ ಕಿರೀಟ ಇರಲು ಸಾಧ್ಯವಿಲ್ಲ. ಲೇಖಕ ಎಸ್.ಎಲ್.ಭೈರಪ್ಪ ಅವರ ಅದೆಷ್ಟೋ ಕಾದಂಬರಿಗಳು 13 ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಜನಪ್ರಿಯತೆ ತಂದುಕೊಟ್ಟಿದೆ ಎಂದು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಎಂ.ಮಂಜುನಾಥ್ ತಿಳಿಸಿದರು.[ಸಂತ ಅಲೋಶಿಯಸ್ ಕಾಲೇಜು ವಿವಾದ, ಕಿಡಿಗೇಡಿಗಳ ಕೃತ್ಯವೇ?]
ಲೇಖಕ ಜೋಗಿ, ಪತ್ರಕರ್ತ ರಾಜಶೇಖರ್ ಹೆಗ್ಗಡೆ, ಕಾಲೇಜಿನ ಪ್ರಾಂಶುಪಾಲ ಹಿಂಚಿಗೇರಿ, ಉಪನ್ಯಾಸಕರಾದ ಮಮತಾ, ರೇವತಿ, ಹೇಮಂತ್ ಇತರರು ಪಾಲ್ಗೊಂಡಿದ್ದರು.