ಒಂದು ಮರ ಕಡಿದಲ್ಲಿ ಹತ್ತು ಗಿಡ ನೆಡುತ್ತೇವೆ
ಬೆಂಗಳೂರು, ಜು.25: ಬೆಂಗಳೂರು ಮಹಾನಗರದಲ್ಲಿ ನಗರೀಕರಣಕ್ಕಾಗಿ ಕಡಿಯಲಾಗುವ ಒಂದು ಮರದ ಬದಲಿಗೆ 10 ಗಿಡಗಳನ್ನು ನೆಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾದ ವಿ. ಸೋಮಣ್ಣ ಅವರು ಮರಗಳ ರಕ್ಷಣೆಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬೆಂಗಳೂರು ಮಹಾನಗರದಲ್ಲಿ ರಸ್ತೆ ಅಗಲೀಕರಣ, ಮೆಟ್ರೋ ಕಾಮಗಾರಿ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ತೆರವುಗೊಳಿಸಬೇಕಾಗುತ್ತದೆ ಎಂದರು.[ಬೆಂಗಳೂರಿನಲ್ಲಿರುವುದು 14 ಲಕ್ಷ ಮರಗಳು ಮಾತ್ರ]
2010 ನೇ ಸಾಲಿನಿಂದ ಇಲ್ಲಿಯವರೆಗೆ ಪಾಲಿಕೆಯ ವತಿಯಿಂದ 7853 ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮದ ವತಿಯಿಂದ ವಿವಿಧ ಜಾತಿಯ1428 ಮರಗಳನ್ನು ಕಡಿಯಲಾಗಿದೆ. ಹೀಗೆ ತೆರವುಗೊಳಿಸಿದ ಮರಗಳ ಮಾರಾಟದಿಂದ ಪಾಲಿಕೆಗೆ 54,81,344 ರೂ. ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ 2,29,082 ರೂ. ಆದಾಯ ಬಂದಿದೆ. ಹಾಗೆಯೇ 2012-13 ನೇ ಸಾಲಿಗೆ 1,77,324 ಗಿಡಗಳನ್ನು ಪರ್ಯಾಯವಾಗಿ ನೆಡಲಾಗಿದೆ ಎಂದು ತಿಳಿಸಿದರು.[ಎಸಿ ಸಿಟಿ ಬೆಂಗಳೂರು ಆಗಲಿದೆ ಬೆಂಗಾಡು!]
ಅಭಿವೃದ್ಧಿ ಕಾರ್ಯಗಳಿಗಾಗಿ ಮರಗಳನ್ನು ತೆಗೆಯಬೇಕಾಗುತ್ತದೆ. ಆದರೆ ಒಂದು ಮರದ ಬದಲಿಗೆ 10 ಗಿಡಗಳನ್ನು ನೆಡಲಾಗುತ್ತಿದೆ. ರಸ್ತೆಗಳಲ್ಲಿ ನೆಡಲಾಗುವ ಗಿಡಗಳಿಗೆ ರಕ್ಷಣೆಯಿಲ್ಲದೆ ನೆಟ್ಟ ಗಿಡಗಳಲ್ಲಿ ಶೇಕಡಾ 40 ರಷ್ಟು ಮಾತ್ರ ಉಳಿದುಕೊಳ್ಳುತ್ತವೆ. ಹಸಿರು ಇದ್ದರೆ ಆರೋಗ್ಯ ಕೂಡ ಹೆಚ್ಚುತ್ತದೆ. ಆದ್ದರಿಂದ ನೆಟ್ಟ ಗಿಡಗಳ ರಕ್ಷಣೆಗೆ ಹೆಚ್ಚು ಗಮನ ಹರಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೇ ಬಿಬಿಎಂಪಿ ಯಲ್ಲಿ ಕೆಲಸವಿಲ್ಲದಿದ್ದರೂ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.[ಬಿಬಿಎಂಪಿಯಲ್ಲಿ ಅಲಿಬಾಬಾ ಮತ್ತು 40 ಕಳ್ಳರು]