ಗಾಂಧಿಯ ಜೀವನ ಗಾಥೆ ಸಾರುವ ಲಾಲ್ಬಾಗ್ ಪುಷ್ಪ ಪ್ರದರ್ಶನ
ಬೆಂಗಳೂರು, ಜನವರಿ 18: ಲಾಲ್ಬಾಗ್ನ 2019ರ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯಿಂದ ಶುಕ್ರವಾರ ಅದ್ಧೂರಿ ಚಾಲನೆ ದೊರೆಯಿತು.
ಪ್ರತಿ ವರ್ಷವು ಒಂದೊಂದು ಥೀಮ್ ಇಟ್ಟುಕೊಂಡು ತೋಟಗಾರಿಕೆ ಇಲಾಖೆಯು ಫಲಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತಿದೆ. ಈ ಬಾರಿ ಗಾಂಧಿ ಸ್ಮರಣೆ ಎನ್ನುವ ಶೀರ್ಷಿಕೆಯಲ್ಲಿ ಆಯೋಜನೆಗೊಂಡಿದೆ.
ಗಣರಾಜ್ಯೋತ್ಸವ ಪುಷ್ಪ ಪ್ರದರ್ಶನ: ಗಾಂಧಿ, ಚರಕ, 3 ಕೋತಿಗಳು
ಗಾಜಿನ ಮನೆಗೆ ಪ್ರವೇಶಿಸುವ ಮುನ್ನ ಇರುವ ಕಾರಂಜಿಯ ಬಳಿ ಗಾಂಧಿ ಕುರಿತ ಪೇಂಟಿಂಗ್ಗಳು, ಹಾಗೆಯೇ ಗಾಜಿನ ಮನೆಗೆ ಪ್ರವೇಶಿಸುತ್ತಿದ್ದಂತೆ ಗಾಂಧಿ ಪ್ರತಿಮೆ, ಗಾಂಧಿಯನ್ನೇ ಹೋಲುವಂತಿರುವ ಗಾಂಧಿಯನ್ನು ಪದೇ ಪದೇ ನೆನಪಿಸುವ ವ್ಯಕ್ತಿ ಅವರ ಬಳಿ ಚರಕ ಹಾಗೆಯೇ ಅವರ ಹಿಂಬದಿ ಲಕ್ಷಾಂತರ ಹೂವುಗಳಿಂದ ನಿರ್ಮಿಸಲಾಗಿರುವ ಸಬರಮತಿ ಆಶ್ರಮ.
ಹೀಗೆ ಎಲ್ಲಿ ಕಣ್ಣರಳಿಸಿದರೂ ಹೂವುಗಳೇ ಕಣ್ತುಂಬಿಕೊಳ್ಳುತ್ತವೆ ಅದರ ಮಧ್ಯೆ ಗಾಂಧೀಜಿ ಜೀವನ, ಅವರ ಹೋರಾಟಗಳನ್ನು ನೆನಪು ಮಾಡುತ್ತವೆ. ದಂಡಿ ಸತ್ಯಾಗ್ರಹ, ಗಾಂಧಿ ಕುಟೀರ ಹೀಗೆ ಹತ್ತು ಹಲವು ವಿಷಯವಸ್ತುಗಳು ನಮಗೆ ಗೋಚರಿಸುತ್ತವೆ.
ಬಾಷ್ ನಿಂದ ಲಾಲ್ ಬಾಗ್ ನಲ್ಲಿ 'ಕ್ಲೀನ್ ಅಂಡ್ ಗ್ರೀನ್' ಅಭಿಯಾನ
ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ 150ನೇ ಜನ್ಮ ವರ್ಷದ ಅಂಗವಾಗಿ ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು ಗಾಂಧೀಜಿಗೆ ಮೀಸಲಿಡಲಾಗಿದೆ. ಇದು 209ನೇ ಫಲಪುಷ್ಪ ಪ್ರದರ್ಶನವಾಗಿದೆ.
ಎಲ್ಲೆಲ್ಲೂ ಹೂಗಳ ಪರಿಮಳ, ಒಂದೆಡೆ ಗಾಂಧಿ ಪ್ರತಿಮೆ, ಇನ್ನೊಂದೆಡೆ ಸಬರಮತಿ ಆಶ್ರಮ, ಇನ್ನೊಂದೆಡೆ ಚರಕ, ಮತ್ತೊಂದೆಡೆ ಕಟ್ಟದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡಬೇಡ, ಕೆಟ್ಟದ್ದನ್ನು ನೋಡಬೇಡ ಎಂದು ಸೂಚಿಸುವ ಮೂರು ಕೋತಿಗಳು ಕಂಡು ಬರುತ್ತದೆ.
6.4 ಲಕ್ಷ ಹೂವುಗಳಿಂದ ಸಿದ್ಧಗೊಂಡಿದೆ ಸಬರಮತಿ ಆಶ್ರಮ
ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ಅನೇಕ ವರ್ಣದ ಪುಷ್ಪ ಜೋಡಣೆಯ ನಡುವೆ ಧ್ಯಾನಸ್ಥ ಗಾಂಧಿ ಸರ್ವರನ್ನು ಸ್ವಾಗತಿಸುತ್ತಿದ್ದಾರೆ. ಗಾಜಿನ ಮನೆಯ ಮಧ್ಯಭಾಗದಲ್ಲಿ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಪುಷ್ಪಗಳಿಂದ ಅಲಂಕೃತವಾದ ಸಬರಮತಿ ಆಶ್ರಮ ಗೋಚರಿಸುತ್ತದೆ. 2.4 ಲಕ್ಷ ಗುಲಾಬಿ, 1.6 ಲಕ್ಷ ಸೇವಂತಿಗೆ, 1.6 ಲಕ್ಷ ಬಿಳಿ ಸೇವಂತಿಗೆ 80 ಸಾವಿರ ಕಿತ್ತಳೆ ಬಣ್ಣದ ಗುಲಾಬಿ ಹೂವುಗಳನ್ನು ಬಳಸಲಾಗಿದೆ.
ಚಿತ್ರಸಂತೆಯ ಗಾಂಧಿ, ಚರಕ, ಕನ್ನಡಕ
ಲಾಲ್ಬಾಗ್ಗೆ, ಚಿತ್ರಸಂತೆಯಲ್ಲಿ ಈ ಬಾರಿ ಬೃಹತ್ ಗಾಂಧಿ ಕನ್ನಡಕ ಪ್ರದರ್ಶಿಸಲಾಯಿತು. ಅದೇ ಕನ್ನಡಕ ಇದೀಗ ಲಾಲ್ಬಾಗ್ ಪುಷ್ಪ ಪ್ರದರ್ಶನಕ್ಕೂ ಬಂದಿದೆ. ಜೊತೆಗೆ ಗಾಂಧಿ ಚರಕದ ಮಾದರಿಯೂ ಇರಲಿದೆ.
ಸ್ವಾತಂತ್ರ್ಯೋತ್ಸವ ಪುಷ್ಪಪ್ರದರ್ಶನಕ್ಕೆ ಮನಸೋತವರು 5 ಲಕ್ಷ ಮಂದಿ
ಪಾರ್ಕಿಂಗ್ ಎಲ್ಲೆಲ್ಲಿ?
ಲಾಲ್ಬಾಗ್ ಒಳಗೆ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಡಬ್ಬಲ್ ರೋಡ್ ಗೇಟ್ಗಳಲ್ಲಿ ಕೇವಲ ಶಾಲಾ ಮಕ್ಕಳ ವಾಹನ, ವಿಕಲಚೇತನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಉಳಿದವರು ಶಾಂತಿನಗರ ಬಸ್ ನಿಲ್ದಾಣ, ಜೆಸಿ ರಸ್ತೆಯ ಮೈಯೂರ ರೆಸ್ಟೋರೆಂಟ್ ಬಳಿಯ ಬಿಬಿಎಂಪಿ ಬಹುಮಹಡಿ ವಾಹನ ನಿಲುಗೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಶೀಘ್ರವೇ ಏರಲಿದೆ ಲಾಲ್ಬಾಗ್ ಪ್ರವೇಶ, ಪಾರ್ಕಿಂಗ್ ಶುಲ್ಕ
ಲಾಲ್ಬಾಗ್ನಲ್ಲಿ ಗಾಂಧಿ
ಗಾಂಧಿಯನ್ನೇ ಹೋಲುವಂತಿರುವ ವ್ಯಕ್ತಿಯೊಬ್ಬರು ಲಾಲ್ಬಾಗ್ನಲ್ಲಿದ್ದರು. ಗಾಂಧಿಯೇ ನಮ್ಮೆದುರು ಬಂದು ನಿಂತಂತೆ ಅನುಭವವಾಗುತ್ತಿತ್ತು, ಬಹುಪಾಲು ಹೋಲುವ ಮುಖ, ಅವರ ಹಾವ ಭಾವ ಎಲ್ಲವೂ ಗಾಂಧೀಜಿಯನ್ನು ಮತ್ತೆ ನೆನಪು ಮಾಡುವಂತಿತ್ತು. ಅವರು ಗಾಂಧಿ ಬೆಂಗಳೂರಿಗೆ ಬಂದಿದ್ದ ಸಂದರ್ಭಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದರು.
ಸಿರಿಧಾನ್ಯಗಳಲ್ಲಿ ಗಾಂಧಿ ಮತ್ತು ಮೊಮ್ಮಗ
ಸಬರಮತಿ ಆಶ್ರಮದ ಪುಷ್ಪ ಮಾದರಿಯ ಎಡಬದಿಗೆ ಹುಬ್ಬಳ್ಳಿಯ ಶಿವಲಿಂಗಪ್ಪ ಬಡಿಗೇರ್ ಅವರು ಸಿರಿಧಾನ್ಯಗಳಲ್ಲಿ ಮೊಮ್ಮಗ ಕನು ಗಾಂಧಿ ಕೂಲು ಹಿಡಿದು ಗಾಂಧಿಯನ್ನು ಕರೆದೊಯ್ಯುವ ಸಿರಿಧಾನ್ಯ ಪ್ರತಿಮೆ ಗಾಜಿನ ಮನೆಯಲ್ಲಿ ಅನಾವರಣಗೊಂಡಿದೆ.
ಲಾಲ್ಬಾಗ್ ಪ್ರವೇಶ ಶುಲ್ಕವೆಷ್ಟು
ರಜೆ ಹಾಗೂ ಸಾಮಾನ್ಯ ದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲಿ ವಯಸ್ಕರಿಗೆ 70 ಹಾಗೂ ಮಕ್ಕಳಿಗೆ 20 ರೂ ಶುಲ್ಕವಿರುತ್ತದೆ. ಜ.19 ಹಾಗೂ 25ರಂದು ಮಕ್ಕಳಿಗೆ ಪ್ರವೇಶ ಉಚಿತವಾಗಿರುತ್ತದೆ.
ಲಾಲ್ಬಾಗ್ ಪ್ರದರ್ಶನ ಕುಮಾರಸ್ವಾಮಿ ಹೇಳಿದ್ದೇನು?
ಗಾಂಧೀಜಿಯ ಕೊಡುಗೆ, ಅವರ ಜೀವನವನ್ನು ಪುಷ್ಪಗಳ ಮಾದರಿಯ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ತೋಟಗಾರಿಕೆ ಇಲಾಖೆ ಮಾಡುತ್ತಿದೆ ಇದು ಅಭಿನಂದನಾರ್ಹ, ದೇಶದಲ್ಲಿ ಪ್ರತಿ ರಾಜ್ಯಗಳಲ್ಲೂ ಗಾಂಧಿ ಸ್ಮರಣೆ ನಡೆಯುತ್ತಿದೆ ಎಂದರು.
ಇನ್ನು ಸಿದ್ದಗಂಗಾ ಶ್ರೀಗಳ ಆರೋಗ್ಯದ ಕುರಿತು ಮಾತನಾಡಿದ ಅವರು, ಶ್ರೀಗಳು ಚೇತರಿಸಿಕೊಳ್ಳುತ್ತಿದ್ದಾರೆ. 2006ರಲ್ಲಿಯೇ ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡಲು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಗೆ ಮನವಿ ಮಾಡಿದ್ದೆ, ಈಗಲೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.