ಫೋನ್ ತಂದವನ ಕುತ್ತಿಗೆ ಸೀಳಿದ್ದ ಜಿಮ್ ಟ್ರೈನರ್ ಬಂಧನ
ಬೆಂಗಳೂರು, ಡಿಸೆಂಬರ್ 15: ಫ್ಲಿಪ್ ಕಾರ್ಟ್ ಡೆಲಿವರಿ ವ್ಯಕ್ತಿಯನ್ನು ಕೊಂದಿದ್ದ ಜಿಮ್ ತರಬೇತುದಾರನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಡಿಸೆಂಬರ್ 09ರಂದು ಜಿಮ್ ತರಬೇತುದಾರ ವರುಣ್ ಕುಮಾರ್ (22) ಅವರು ನಂಜುಂಡಸ್ವಾಮಿ (29) ಅವರ ಕೊರಳನ್ನು ಸೀಳಿ, ಕೊಂದಿದ್ದರು. ಗೆಳೆಯರ ಒತ್ತಾಯದ ಮೇರೆಗೆ ಫ್ಲಿಪ್ ಕಾರ್ಟಿನಿಂದ ಸ್ಮಾರ್ಟ್ ಫೋನ್ ಬುಕ್ ಮಾಡಿದ್ದ ವರುಣ್, ಫೋನ್ ಪಡೆದುಕೊಂಡ ನಂತರ ಕಬ್ಬಿಣದ ರಾಡ್ ಹಾಗೂ ಹೂವಿನ ಕುಂಡ ಬಳಸಿ ನಂಜುಂಡ ಸ್ವಾಮಿಯನ್ನು ಕೊಂದು ಹಾಕಿದ್ದಾರೆ.
ನಂತರ ಮೃತದೇಹವನ್ನು ಜಿಮ್ ನಲ್ಲೇ ಬಚ್ಚಿಟ್ಟಿದ್ದ ವರುಣ್, ಎಲ್ಲರೂ ಮನೆಗೆ ತೆರಳಿದ ಮೇಲೆ ಶವವನ್ನು ಬೇಸ್ಮೆಂಟ್ ಸೆಲ್ಲಾರ್ ನಲ್ಲಿ ಹಾಕಿದ್ದಾನೆ. 12 ಸಾವಿರ ರು ಬೆಲೆಯ ಸ್ಮಾರ್ಟ್ ಫೋನ್ ಸೇರಿದಂತೆ ನಂಜುಂಡಸ್ವಾಮಿ ಬ್ಯಾಗಿನಲ್ಲಿದ್ದ ನಗದು ಹಾಗೂ ಇನ್ನಿತರ ಬೆಲೆಬಾಳುವ ಫೋನ್ ಗಳನ್ನು ವರುಣ್ ತೆಗೆದುಕೊಂಡಿದ್ದಾನೆ. ನಂತರ ಜಿಮ್ ಬಂದ್ ಮಾಡಿ ಪರಾರಿಯಾಗಿದ್ದಾನೆ.
ಇತ್ತ ನಂಜುಂಡಸ್ವಾಮಿ ನಾಪತ್ತೆಯಾಗಿದ್ದಾನೆ ಎಂದು ಅವರ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಜಿಮ್ ನಲ್ಲಿ ನಂಜುಂಡಸ್ವಾಮಿ ಶವ ಸಿಕ್ಕಿದೆ.(ಒನ್ಇಂಡಿಯಾ ಸುದ್ದಿ)