ರಾಜ್ಯ ಅಗ್ನಿಶಾಮಕ ಇಲಾಖೆಗೆ ಆಧುನಿಕ ಸ್ಪರ್ಶ
ಬೆಂಗಳೂರು, ಮಾರ್ಚ್ 22: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಆಧುನಿಕ ಸ್ಪರ್ಶ ನೀಡುವುದರೊಂದಿಗೆ ಹೊಸ ತಂತ್ರಾಂಶಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸರ್ಕಾರ ಅಗತ್ಯಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕರ್ನಾಟಕ ರಾಜ್ಯ ಅಗ್ನಿಶಾಮಕ ಅಧಿಕಾರಿಗಳ ನೂತನ ವಸತಿ ನಿಲಯದ ಉದ್ಫಾಟನೆ, ಆನ್ಲೈನ್ ಅಗ್ನಿ-2 ತಂತ್ರಾಂಶ ವ್ಯವಸ್ಥೆಯ ಲೋಕಾರ್ಪಣೆ ಹಾಗೂ ತುರ್ತು ಸೇವಾ ನಿರ್ವಹಣಾ ಕೇಂದ್ರ ಕಟ್ಟಡದ ಶಂಕುಸ್ಥಾಪನೆ ನಂತರ ಮಾತನಾಡಿದ ಅವರು, ವಸತಿ ನಿಲಯಕ್ಕಾಗಿ ಈಗಾಗಲೇ ಒಂದು ಕೋಟಿ 40 ಲಕ್ಷ ರೂ. ಗಳನ್ನು ಬಿಡುಗಡೆಮಾಡಲಾಗಿದ್ದು, ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಈ ಯೋಜನೆಯನ್ನು ಪೂರ್ಣಗೊಳಿಸಿದೆ ಎಂದರು.
ಇನ್ನುಮುಂದೆ ಆನ್ಲೈನ್ನಲ್ಲೇ ಅಗ್ನಿಶಾಮಕ ಎನ್ಒಸಿ ಪಡೆಯಿರಿ
ಕಟ್ಟಡದಲ್ಲಿ ಒಂದು ಕಾನ್ಫರೆನ್ಸ್ ಹಾಲ್, ಅಧಿಕಾರಿಗಳ ಊಟದ ಕೋಣೆ, ಜಿಮ್, ವಿಶ್ರಾಂತಿ ಕೋಣೆ, ಲೈಬ್ರರಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಹೊಂದಿದೆ. ಅಗ್ನಿ-2 ತಂತ್ರಾಂಶ ಕಟ್ಟಡಗಳ ನಿರ್ಮಾಣ ಹಂತದಲ್ಲಿ ಪಡೆಯಬೇಕಾದ ನಿರಾಪೇಕ್ಷಣಾ ಪತ್ರದ ವಿಳಂಬವನ್ನು ತಡೆದು ಅತ್ಯಂತ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಲು ಹಾಗೂ ನಿರಾಪೇಕ್ಷಣಾ ಪತ್ರ ನೀಡಲು ಸಹಾಯಕವಾಗಲಿದೆ ಎಂದು ಹೇಳಿದರು.
ತ್ವರಿತವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ತುರ್ತು ಸೇವಾ ನಿರ್ವಹಣಾ ಕೇಂದ್ರದ ಅಗತ್ಯವಿದ್ದು ಅದಕ್ಕಾಗಿ ನಗರದ ಕೇಂದ್ರ ಬಿಂದು ಎಂ.ಜಿ. ರಸ್ತೆಯ ಹತ್ತಿರವಿರುವ ಮೆಯೋಹಾಲ್ ಬಳಿಯ ಅಗ್ನಿಶಾಮಕ ಕಚೇರಿ ಆವರಣದಲ್ಲಿ ನೂತನ ಕಟ್ಟಡದ ಶಂಕುಸ್ಥಾಪನೆ ಸಹ ಇಂದು ಮಾಡಲಾಗಿದೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಸಮಯದಲ್ಲಿ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕ ಎಂ.ಎನ್. ರೆಡ್ಡಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.