ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ:ಆತಂಕದಲ್ಲಿ ದಿನ ಕಳೆದ ನಾಗರಿಕರು
ಬೆಂಗಳೂರು, ಫೆಬ್ರವರಿ 2 : ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು ನಾಗರಿಕರು ಆತಂಕಕ್ಕೀಡಾಗಿದ್ದಾರೆ. ಜನವರಿ 19ರಂದು ಬೆಂಕಿ ಕಾಣಿಸಿಕೊಂಡಿತ್ತು ಅದನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ನಾಗರಿಕರು ಹರಸಾಹಸ ಪಟ್ಟಿದ್ದರು. ಈಗ ಈ ಸ್ಥಳದಿಂದ ಸುಮಾರು 10-15 ಮೀಟರ್ ದೂರದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿ ನಂದಿಸಲು 12 ಅಗ್ನಿಶಾಮಕ ವಾಹನಗಳು ಸಂಜೆ 5ರ ವೇಳೆಗೆ ಸ್ಥಳಕ್ಕೆ ಬಂದವು. ಆದರೆ, ಬೆಂಕಿ ಬಿದ್ದ ಸ್ಥಳಕ್ಕೆ ತ್ವರಿತಗತಿಯಲ್ಲಿ ಹೋಗಲು ಸಾಧ್ಯವಾಗಲಿಲ್ಲ. ಈ ಪ್ರದೇಶವು ರಕ್ಷಣಾ ಇಲಾಖೆಗೆ ಸೇರಿದ್ದರಿಂದ ಅನುಮತಿ ಪಡೆಯುವುದು ಅಗತ್ಯವಿತ್ತು. ಸಂಜೆ 6ಕ್ಕೆ ಬೆಂಕಿಯನ್ನು ನಂದಿಸಲಾಯಿತು.
ಬೆಳ್ಳಂದೂರು ಕೆರೆಗೆ ಬಿದ್ದ ಬೆಂಕಿ ತಹಬದಿಗೆ
ಕೆಲವು ದಿನಗಳಿಂದ ಗಾಳಿಯ ತೀವ್ರತೆ ಕಡಿಮೆಯಾಗಿದೆ. ಹೀಗಾಗಿ ಬೇಗನೇ ಬೆಂಕಿ ನಂದಿಸಲು ಸಾಧ್ಯವಾಯಿತು. ಯಂತ್ರಗಳ ಕೊರತೆಯಿಂದಾಗಿ ಕಳೆ ಮತ್ತು ಹುಲ್ಲನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. ಕಳೆ ಕೀಳುವ ಯಂತ್ರದ ಮೂಲಕ ಕೆಲಸ ಮಾಡಿಸಲು ಉದ್ದೇಶಿಸಲಾಗಿದೆ. ಆದರೆ, ಯಂತ್ರದ ಮಾಲೀಕರು ಕಾಲಾವಕಾಶ ಕೋರಿದ್ದಾರೆ ಎಂದು ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಎನ್ ಜಿಟಿಯಲ್ಲಿ ವಿಚಾರಣೆ: ವರ್ತೂರು ಕೆರೆಯ ಅತಿಕ್ರಮ ಹಾಗೂ ಮಾಲಿನ್ಯಕ್ಕೆ ಸಂಬಂಧಿಸಿದ ವಿಚಾರಣೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಶುಕ್ರವಾರ ವಿಚಾರಣೆ ನಡೆಸಲಿದೆ. ಸ್ಥಳೀಯರು ಸ್ಥಾಪಿಸಿಕೊಂಡ ವರ್ತೂರು ಕೆರೆ ತಂಡ ಮತ್ತು ವೈಟ್ ಫೀಲ್ಡ್ ರೈಸಿಂಗ್ ಸಂಘಟನೆಯು ರಾಜ್ಯ ಸರ್ಕಾರ ಮತ್ತು ಸ್ಥಳೀಯ ಪ್ರಾಧಿಕಾರದ ವಿರುದ್ಧ 2017ರ ಡಿಸೆಂಬರ್ ನಲ್ಲಿ ದಾವೆ ಹೂಡಿದ್ದರು.
'ಬೆಳ್ಳಂದೂರು ಕೆರೆ ರಕ್ಷಣೆಗೆ ಕಾಂಕ್ರೀಟ್ ಕಾಮಗಾರಿ ನಿಲ್ಲಿಸಿ'
ಹುಲ್ಲುಕತ್ತರಿಸುವುದಕ್ಕೆ ನಿಷೇಧ: ಈ ಹಿಂದಿನ ಬೆಂಕಿ ಅವಘಡದ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒಣ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದೆಯೇ ಅಥವಾ ಯಾರಾದರೂ ಬೆಂಕಿ ಹಚ್ಚುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಬೇಕಿದೆ.
ಇದು ಮತ್ತೊಮ್ಮೆ ಪುನರಾವರ್ತನೆಯಾದರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಕೆರೆ ಬಳಿಯ ಹುಲ್ಲು ಕತ್ತರಿಸುವುದನ್ನು ನಿಷೇಧಿಸುತ್ತೇವೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದ್ದಾರೆ.