ಆತ್ಮಹತ್ಯೆ: ಪುತ್ರಿ, ಅಪ್ಪನೂ ಸಾವು: ಅಮ್ಮ, ಮಗ ಗಂಭೀರ
ಬೆಂಗಳೂರು, ಜೂ. 24: ಸಾಲದ ಬಾಧೆ ತಾಳಲಾರದೆ ನಿನ್ನೆ ಆತ್ಮಹತ್ಯೆಗೆ ಯತ್ನಿಸಿದ್ದ ಕುಮಾರಪ್ಪ ಕುಟುಂಬಸ್ಥರ ಪೈಕಿ ಕೊನೆಯ ಮಗು ಶ್ರೀದೇವಿ ನಿನ್ನೆಯೇ ಮೃತಪಟ್ಟಿದ್ದಳು. ಉಳಿದ ಮೂವರ ಸ್ಥಿತಿ ಗಂಭಿರವಾಗಿತ್ತು. ಅವರ ಪೈಕಿ ಮನೆಯ ಯಜಮಾನ ಕುಮಾರಪ್ಪ (40) ಇಂದು ಬೆಳಗ್ಗೆ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಮ್ಮ ಮತ್ತು ಮಗನ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಸೋಮವಾರದ ಸುದ್ದಿ: ನಗರದಲ್ಲಿ ಮತ್ತೊಂದು ದಾರುಣ ಆತ್ಮಹತ್ಯೆ ಪ್ರಕರಣ ನಡೆದಿದೆ. ಸಾಲಬಾಧೆ ತಾಳಲಾರದೆ ಕುಟುಂಬವೊಂದರ ನಾಲ್ಕೂ ಮಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರ ಪೈಕಿ ಹದಿಹರಯದ ಬಾಲಕಿಗೆ ಡೋಸೇಜ್ ಹೆಚ್ಚಾಗಿ ಸಾವನ್ನಪ್ಪಿದ್ದಾಳೆ.
ಆರ್ ಟಿ ನಗರದಲ್ಲಿ ಸೋಮವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಆರ್ ಟಿ ನಗರದ ಚಾಮುಂಡಿನಗರ ನಿವಾಸಿ, ಹಾಲಿನ ವ್ಯಾಪಾರಿ ಕುಮಾರಪ್ಪ (40). ಆತನ ಪತ್ನಿ ಕುಸುಮ (35), ಮಗ ಪ್ರಜ್ವಲ್ (14) ಮತ್ತು ಮಗಳು ಶ್ರೀದೇವಿ (10) ಆತ್ಮಹತ್ಯೆಗೆ ಯತ್ನಿಸಿದವರು. ಶ್ರೀದೇವಿ ಸಾವನ್ನಪ್ಪಿದ್ದಾಳೆ. ವಿಷ ಸೇವಿಸಿರುವ ದಂಪತಿ ಹಾಗೂ ಮಗನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ರಾಜಾಜಿನಗರ ನಂಜುಂಡ ಕುಟುಂಬದ 4 ಮಂದಿ ಆತ್ಮಹತ್ಯೆ)
ಕುಮಾರಪ್ಪ ಕುಟುಂಬವು ಆರ್ಥಿಕವಾಗಿ ಸುಸ್ಥಿತಿಯಲ್ಲಿಯೇ ಇತ್ತು. ಆದರೆ ವ್ಯವಹಾರದಲ್ಲಿ ನಷ್ಟವುಂಟಾಗಿ ಇತ್ತೀಚೆಗೆ ಹಣಕಾಸು ತೊಂದರೆ ಕಾಣಿಸಿಕೊಂಡಿತ್ತು. ಕುಮಾರಪ್ಪ ತಮ್ಮ ಮನೆ, ಕಾರು ಮಾರಾಟ ಮಾಡಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹಾಲಿನ ವ್ಯಾಪಾರ ಮಾಡುತ್ತಿದ್ದ ಇವರು ಅಧಿಕ ಸಾಲ ಮಾಡಿಕೊಂಡಿದ್ದರು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. (ಆಮ್ಲೆಟ್ ಜತೆ ಇಲಿ ಪಾಷಾಣ ತಿಂದ ಬಾಲಕನ ಸಾವು)
ಸಾಲಬಾಧೆ ತಾಳದೆ ಭಾನುವಾರ ರಾತ್ರಿ ಇಡೀ ಕುಟುಂಬ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದೆ. ಇಂದು ಮುಂಜಾನೆ ಹಾಲಿನ ಲಾರಿ ಬಂದಾಗ ಹಾಲು ಇಳಿಸಿಕೊಳ್ಳಲು ಕುಮಾರಪ್ಪ ಬಂದಿಲ್ಲ. ಆಗ ಲಾರಿಯವರು ಮನೆ ಬಳಿ ಹೋಗಿ ಎಬ್ಬಿಸಲು ಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಿಟಕಿಯಿಂದ ನೋಡಿದಾಗ ದಂಪತಿ ಹಾಗೂ ಮಕ್ಕಳಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ.
ತಕ್ಷಣ ಅಕ್ಕಪಕ್ಕದ ಮನೆಯವರಿಗೆ ತಿಳಿಸಿ ನಾಲ್ವರನ್ನೂ ಸಂಜಯನಗರದ ಸಾಯಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಮಗಳು ಶ್ರೀದೇವಿ ಮೃತಪಟ್ಟಿದ್ದಾಳೆ. ದಂಪತಿ ಹಾಗೂ ಮಗನನ್ನು ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಆರ್ ಟಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.