ಕೊನೆಗೂ ಬೆಂಗಳೂರಿಗೆ ಸಿಕ್ಕಿತು ಎನ್ಎಸ್ಜಿ
ಬೆಂಗಳೂರು, ಡಿ. 30: ಕರ್ನಾಟಕದಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ಕೇಂದ್ರ ಸ್ಥಾಪಿಸಬೇಕೆಂದು ರಾಜ್ಯ ಸರ್ಕಾರ ಹಲವು ವರ್ಷಗಳಿಂದ ಕೋರುತ್ತಿತ್ತು. ಆದರೆ, ಕೇಂದ್ರ ಸರ್ಕಾರ ಸೊಪ್ಪು ಹಾಕಿರಲಿಲ್ಲ. ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ನಂತರ ಬೆಂಗಳೂರಿನಲ್ಲೂ ಎನ್ಎಸ್ಜಿ ಕೇಂದ್ರ ಸ್ಥಾಪಿಸಲು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ನಿರ್ಧರಿಸಿದೆ.
ಅಷ್ಟಕ್ಕೂ ಈಗ ಮನವಿ ಕೊಟ್ಟಿದ್ದು ರಾಜ್ಯ ಸರ್ಕಾರವಲ್ಲ. ಕೇಂದ್ರ ಸಚಿವರಾದ ಅನಂತ್ಕುಮಾರ್ ಮತ್ತು ಡಿ.ವಿ. ಸದಾನಂದಗೌಡ. ಇಬ್ಬರೂ ಸೋಮವಾರ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಎನ್ಎಸ್ಜಿ ಕೇಂದ್ರ ಪ್ರಾರಂಭಿಸಬೇಕೆಂದು ಕೋರಿದ್ದರು. ಈ ಮನವಿಗೆ ಕೇಂದ್ರ ಗೃಹ ಸಚಿವರು ತಕ್ಷಣ ಸ್ಪಂದಿಸಿದ್ದಾರೆ. [ಎನ್ಎಸ್ ಜಿ ಘಟಕ ಸ್ಥಾಪಿಸಲು ಸಿಎಂ ಮೊರೆ]
ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಉಗ್ರರ ಸಂಭಾವ್ಯ ಆಕ್ರಮಣಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಪ್ರಸ್ತಾವನೆ ಕಳುಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚನೆ ಕೊಟ್ಟಿದ್ದಾರೆ.
ಅನೇಕ ನಗರಗಳಲ್ಲಿ ಸ್ಥಾಪನೆ : ಹಿಂದಿನ ಯುಪಿಎ ಸರ್ಕಾರವೇ ಬೆಂಗಳೂರಿನಲ್ಲಿ ಎನ್ಎಸ್ಜಿ ಕೇಂದ್ರ ತೆರೆಯುವುದಾಗಿ ಭರವಸೆ ನೀಡಿದ್ದರೂ ಈಡೇರಿಸಿರಲಿಲ್ಲ. ಈಗ ಬೆಂಗಳೂರಿನ ಜೊತೆಗೆ ಜೋಧ್ಪುರ್, ಗುರ್ಗಾಂವ್, ಪುಣೆ, ಬೆಂಗಳೂರು, ಲಕ್ನೋ ಮುಂತಾದ ನಗರಗಳಲ್ಲೂ ಎನ್ಎಸ್ಜಿ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. [ಮೈಸೂರು ಅರಮನೆಗೆ ಎನ್ಎಸ್ ಜಿ ತಂಡ ಭೇಟಿ]
ಪ್ರಸ್ತುತ ಚೆನ್ನೈ ಹಾಗೂ ಹೈದರಾಬಾದ್ನಲ್ಲಿ ಎನ್ಎಸ್ಜಿ ಕೇಂದ್ರಗಳಿವೆ. ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನ ಮೇಲೆ ಉಗ್ರರ ಕಾಕದೃಷ್ಟಿ ಬಿದ್ದಿರುವುದು ಎಂದೋ ದೃಢಪಟ್ಟಿದೆ. ಬೆಂಗಳೂರಿನಲ್ಲಿ ಹಲವು ಬಾರಿ ಬಾಂಬ್ ಸ್ಫೋಟಗಳು ಸಂಭವಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಸಾಫ್ಟ್ವೇರ್ ಕಂಪನಿ ಉಗ್ರರ ಟಾರ್ಗೆಟ್ : ಐಟಿ ಹಬ್ ಎನ್ನಿಸಿಕೊಂಡಿರುವ ಬೆಂಗಳೂರಿನಲ್ಲಿ ದೇಶ ಹಾಗೂ ವಿದೇಶ ಮೂಲದ ಹಲವು ಸಾಫ್ಟ್ವೇರ್ ಕಂಪನಿಗಳು ಕೆಲಸ ಮಾಡುತ್ತಿವೆ. ಭಾರತ ಹಾಗೂ ಅಮೆರಿಕ ಉಗ್ರರ ಪ್ರಮುಖ ಗುರಿಯಲ್ಲಿರುವ ದೇಶಗಳು. ಬೆಂಗಳೂರಿನಲ್ಲಿರುವ ಅಮೆರಿಕ ಮೂಲದ ಸಾಫ್ಟ್ವೇರ್ ಕಂಪನಿಗಳ ಮೇಲೆ ಉಗ್ರರು ದಾಳಿ ನಡೆಸುವ ಸಂಭವನೀಯತೆ ದಟ್ಟವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ನಿರ್ಧಾರ ತಳೆದಿದೆ.
ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ತಕ್ಷಣ ಸ್ಪಂದಿಸಿರುವ ಕರ್ನಾಟಕ ಸರ್ಕಾರ ಎನ್ಎಸ್ಜಿ ಕೇಂದ್ರ ತೆರೆಯಲು ಬೆಂಗಳೂರಿನ ಹೊರವಲಯದಲ್ಲಿ 100 ಎಕರೆ ಜಾಗವನ್ನು ಗುರುತಿಸಿದೆ ಎಂದು ಮೂಲಗಳು ತಿಳಿಸಿವೆ. [ಮೋದಿ ರಕ್ಷಣೆಗೆ ಪೊಸಿಷನ್ ತೆಗೆದುಕೊಂಡ ಎಸ್ ಪಿಜಿ]
ಎನ್ಎಸ್ಜಿ ಕಾರ್ಯವೇನು? : ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಎಂಟು ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಎನ್ಎಸ್ಜಿ (ರಾಷ್ಟ್ರೀಯ ಭದ್ರತಾ ಪಡೆ) ಕೂಡ ಒಂದು. 1984ರಲ್ಲಿ ಕೇಂದ್ರ ಸರ್ಕಾರ ಈ ಪಡೆಯನ್ನು ಸ್ಥಾಪಿಸಿತು. ವಿವಿಧ ರಾಜ್ಯಗಳಲ್ಲಿ ಉಗ್ರರ ಚಟುವಟಿಕೆ ಮಟ್ಟ ಹಾಕುವುದೇ ಎನ್ಎಸ್ಜಿ ಸ್ಥಾಪನೆಯ ಉದ್ದೇಶ.
ಇದರಲ್ಲಿ ಎರಡು ಘಟಕಗಳಿವೆ. ಒಂದು ಎಸ್ಎಜಿ (ಸ್ಪೆಷಲ್ ಆಕ್ಷನ್ ಗ್ರುಪ್) ಇದರಲ್ಲಿ ಸಂಪೂರ್ಣ ಸೈನಿಕ ಸಿಬ್ಬಂದಿ ಇರುತ್ತಾರೆ. ಮತ್ತೊಂದು ಎಸ್ಆರ್ಜಿ (ಸ್ಪೆಷಲ್ ರೇಂಜರ್ ಗ್ರುಪ್). ಇದರಲ್ಲಿ ಕೆಲವರು ರಾಜ್ಯ ಪೊಲೀಸ್ನಿಂದ ನೇಮಕಗೊಂಡವರು, ಇನ್ನು ಕೆಲವರು ವಿವಿಧ ಸಶಸ್ತ್ರ ಪೊಲೀಸ್ ಪಡೆಗಳಿಂದ ಆರಿಸಲ್ಪಟ್ಟವರು.
ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಇದರ ಮುಖ್ಯಸ್ಥರಾಗಿರುತ್ತಾರೆ. ಅವರಿಗೆ 'ಡೈರೆಕ್ಟರ್ ಜನರಲ್' ಎಂದು ಕರೆಯುತ್ತಾರೆ. ಇದು ಭಾರತೀಯ ಭೂ ಸೇನೆಯ ಲೆಫ್ಟಿನೆಂಟ್ ಜನರಲ್ಗೆ ಸಮಾನ ಹುದ್ದೆಯಾಗಿದೆ.
ಹೆಗ್ಗಳಿಕೆಗಳು : ಎನ್ಎಸ್ಜಿ ಈ ಹಿಂದೆ ನಡೆಸಿರುವ ವಿವಿಧ ಕಾರ್ಯನಿರ್ವಹಣೆಗಳು ಶ್ಲಾಘನೆಗೆ ಒಳಗಾಗಿವೆ. ಅಮೃತ ಸರದಲ್ಲಿರುವ ಸ್ವರ್ಣ ಮಂದಿರ, ರಾಜೀವ್ ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ, ಮುಂಬಯಿ ಮೇಲೆ ನಡೆದ ಉಗ್ರರ ದಾಳಿ ಮುಂತಾದ ಸಂದರ್ಭದಲ್ಲಿ ಎನ್ಎಸ್ಜಿ ಪಡೆಗಳ ಕಾರ್ಯನಿರ್ವಹಣೆ ಸಾಕಷ್ಟು ಶ್ಲಾಘನೆಗೊಳಗಾಗಿದೆ.