ಲಾಲ್ಬಾಗ್ನಲ್ಲಿ ಅಕ್ರಮ ಚಟುವಟಿಕೆಗಳಿಗೆ 'ಮಣ್ಣು'
ಬೆಂಗಳೂರು, ನ. 11ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಬೃಹತ್ ಬಂಡೆಗಳ ಹಿಂದೆ ಏನೇನು ಚಟುವಟಿಕೆಗಳು ನಡೆಯುತ್ತಿವೆ ಎಂಬುದು ಇಲ್ಲಿ ದಿನನಿತ್ಯ ಅಡ್ಡಾಡುವವರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಜನಸಾಮಾನ್ಯರಿಗೆ ಮಾತ್ರವಲ್ಲ ಅಲ್ಲಿನ ಅಧಿಕಾರಿಗಳೂ ಇದು ಗೊತ್ತಿರುವ ವಿಚಾರ. ಈಗ ಆ ಅಕ್ರಮ ಚಟುವಟಿಕೆಗಳಿಗೆಲ್ಲ ತೋಟಗಾರಿಕೆ ಇಲಾಖೆ 'ಮಣ್ಣು' ಹಾಕಿದೆ.
ಅರ್ಥಾತ್ ಅಲ್ಲಿ ಮಣ್ಣು ಸುರಿದು, ಅದರ ಮೇಲೆ ಗಿಡಗಳನ್ನು ನೆಡಲಿದೆ.
ಈ ಕುರಿತು ಒನ್ಇಂಡಿಯಾ ಕನ್ನಡಕ್ಕೆ ಮಾಹಿತಿ ನೀಡಿದ ಖ್ಯಾತ ಪರಿಸರವಾದಿ ಹಾಗೂ ನಿವೃತ್ತ ಐಎಫ್ಎಸ್ ಅಧಿಕಾರಿ ಡಾ. ಯಲ್ಲಪ್ಪ ರೆಡ್ಡಿ, ಲಾಲ್ಬಾಗ್ ಸಸ್ಯತೋಟದಲ್ಲಿರುವ ಬೃಹತ್ ಬಂಡೆಯ ಹಿಂಭಾಗದಲ್ಲಿನ ನಿರುಪಯುಕ್ತ ಆಳ ಪ್ರದೇಶವನ್ನು ಪೊಲೀಸ್ ಇಲಾಖೆಯ ಕೋರಿಕೆಯ ಮೇರೆಗೆ ಮಣ್ಣು ಹಾಕಿ ಮುಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ.
ನಿರುಪಯುಕ್ತವಾಗಿದ್ದ ಈ ಆಳ ಪ್ರದೇಶ ಸಮಾಜ ವಿರೋಧಿ ಕೃತ್ಯ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ನಿರತರಾಗುವವರಿಗೆ ಅಡಗುತಾಣವಾಗಿತ್ತು. ಅನೇಕರು ಇಲ್ಲಿ ರಾತ್ರಿ ಬೆಂಕಿ ಹಾಕಿದ್ದ ಚಟುವಟಿಕೆಗಳು ನಡೆದಿವೆ. ಆದ್ದರಿಂದ ಪೊಲೀಸರಿಗೆ ಇದು ತಲೆನೋವಿನ ಪ್ರದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಕೋರಿಕೆಯ ಮೇರೆಗೆ ಮಣ್ಣು ಹಾಕಿ ಮುಚ್ಚಲಾಗುತ್ತಿದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಬೇರ್ಪಡಿಸಬೇಕಿಲ್ಲ: ಮಣ್ಣಿನ ಜತೆಗೆ ಅಲ್ಪ ಪ್ರಮಾಣದ ಕಸವನ್ನೂ ಸುರಿಯಲಾಗಿದೆ. ಕಸದ ಜತೆ ಸೇರಿಕೊಂಡಿರುವ ಪ್ರಾಸ್ಟಿಕ್ಗಳನ್ನು ಬೇರ್ಪಡಿಸುವ ಅಗತ್ಯ ಕಂಡುಬರಲಿಲ್ಲ. ಅದರ ಮೇಲೆ ಬೆಳೆಸುವ ಗಿಡ ಮರವಾಗಿ ಬೆಳೆದಾಗ ಅದರ ಬೇರು ಸುಲಭವಾಗಿ ಪ್ಲಾಸ್ಟಿಕ್ ಅನ್ನು ಛೇದಿಸಿಕೊಂಡು ಹೋಗುತ್ತದೆ. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಯಲ್ಲಪ್ಪ ರೆಡ್ಡಿ ಸ್ಪಷ್ಟಪಡಿಸಿದರು.
ಬಂಡೆಗೆ ಸಮಸ್ಯೆ ಇಲ್ಲ: ಬಂಡೆಯ ಸುತ್ತಲಿನ ಹಳ್ಳದ ಪ್ರದೇಶ ಮುಚ್ಚಿ ಸಸ್ಯ ಬೆಳೆಸುವುದೇ ಇಲಾಖೆಯ ಉದ್ದೇಶ. ಇದರಿಂದ ಲಾಲ್ಬಾಗ್ನ ಆಕರ್ಷಣೆಗಳಲ್ಲಿ ಒಂದಾದ ಬೃಹತ್ ಬಂಡೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಇದರ ಪಕ್ಕದಲ್ಲಿಯೇ ಇರುವ ಜಲ ಸಂಗ್ರಹಣೆ ಸ್ಥಳವನ್ನು ಶೀಘ್ರ ಸ್ವಚ್ಛಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಗುಣವಂತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.