ಫೆ. 7 ರಿಂದ ರಾಜ್ಯದ ಮಕ್ಕಳಿಗೆ ದಡಾರ, ರುಬೆಲ್ಲಾ ಲಸಿಕೆ
ಬೆಂಗಳೂರು, ಜನವರಿ 25: ಫೆಬ್ರವರಿ 7 ರಿಂದ 28 ರವರೆಗೆ ರಾಜ್ಯಾದ್ಯಂತ 9 ತಿಂಗಳಿಂದ 15 ನೇ ವರ್ಷದವರೆಗಿನ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಕಾಯಿಲೆಗಳನ್ನು ತಡೆಗಟ್ಟುವ ಲಸಿಕೆಗಳನ್ನು ಹಾಕಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರಕಟಿಸಿದ್ದಾರೆ.
ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ತನ್ವೀರ್ ಸೇಠ್ ಮಾತನಾಡಿ ಫೆಬ್ರವರಿ 7 ರಿಂದ 28 ರವರೆಗೆ ರಾಜ್ಯಾದ್ಯಂತ 9 ತಿಂಗಳಿಂದ 15 ನೇ ವರ್ಷದವರೆಗಿನ ಮಕ್ಕಳಿಗೆ ಪ್ರಥಮ ಮತ್ತು ದ್ವಿತೀಯ ಹಂತದಲ್ಲಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು. ಅಲ್ಲದೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದರು.[ಎಲ್ಲರ ಕಾಡುತ್ತಿರುವ ಸಕ್ಕರೆ ರೋಗ ಒದ್ದೋಡಿಸುವುದು ಹೇಗೆ?]
ಒಮ್ಮೆ ಲಸಿಕೆ ಹಾಕಿಸಿಕೊಂಡ ಮಕ್ಕಳಿಗೂ ಮತ್ತೊಮ್ಮೆ ಲಸಿಕೆ ಹಾಕಿಸಬಹುದು ಲಸಿಕೆ ಹಾಕಿಸಿಕೊಂಡ ಮೇಲೆ ಮಕ್ಕಳಲ್ಲಿ ಸ್ವಲ್ಪ ಜ್ವರ ಹಾಗೂ ವಾಂತಿ ಕಾಣಿಸಿಕೊಳ್ಳಬಹುದು. ಆದರೆ ಅದಕ್ಕೆ ಹೆದರುವ ಅಗತ್ಯ ಇಲ್ಲ ಎಂದು ಸಚಿವರು ತಿಳಿಸಿದರು.
1.65ಕೋಟಿ ಮಕ್ಕಳಿಗೆ ಲಸಿಕೆ:
ತನ್ವೀರ್ ಸೇಠ್ ಅವರು ನಮ್ಮ ರಾಜ್ಯದಲ್ಲಿ 9 ತಿಂಗಳಿಂದ 15 ವರ್ಷದ ಒಳಗಿನ ಮಕ್ಕಳ ಸಂಖ್ಯೆ 1.65 ಕೋಟಿ ಇದ್ದು ಈ ಎಲ್ಲಾ ಮಕ್ಕಳಿಗೂ ಪ್ರಥಮ ಹಾಗೂ ದ್ವಿತೀಯ ಹಂತಗಳಲ್ಲಿ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.
ದಡಾರ ಲಸಿಕೆ:
ವಿಶ್ವಸಂಸ್ಥೆಯು ಎಲ್ಲಾ ದೇಶಗಳಲ್ಲೂ ಆರೋಗ್ಯ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ರೂಪಿಸುತ್ತಿದ್ದು ದಡಾರ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಅದರಂತೆ ರಾಜ್ಯದಲ್ಲಿ ಈ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ತಿಳಿಸಿದರು.
ಆರೋಗ್ಯ ಸಂಸ್ಥೆಯಲ್ಲಿ ಕರ್ನಾಟಕಕ್ಕೂ ಸ್ಥಾನ
ವಿಶ್ವ ಆರೋಗ್ಯ ಸಂಸ್ಥೆ ಭಾರತದ ಐದು ರಾಜ್ಯಗಳನ್ನು ಆಯ್ಕೆ ಮಾಡಿದ್ದು ನಮ್ಮ ಕರ್ನಾಟಕವು ಅದರಲ್ಲಿ ಸೇರಿದೆ, ರಾಜ್ಯ ಸರ್ಕಾರ, ವಿಶ್ವ ಆರೋಗ್ಯ ಸಂಸ್ಥೆ, ರಾಷ್ಟ್ರೀಯ ಆರೋಗ್ಯ ಮಿಷನ್ ಹಾಗೂ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಲಸಿಕಾ ಅಭಿಯಾನ ನಡೆಯಲಿದೆ ಎಂದು ಶಿಕ್ಷಣ ಸಚಿವ ತನ್ವೀರ್ ಸೇಟ್ ಅವರು ಹೇಳಿದರು.
ಪೊಲಿಯೋ ನಿರ್ಮೂಲನೆ ಒತ್ತು
ಪ್ರತಿ ಶಾಲೆಗಳಲ್ಲಿ, ಅಂಗನವಾಗಿ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಲಸಿಕಾ ಕೇಂದ್ರಗಳನ್ನು ಪ್ರಾರಂಭಿಸಿ ಲಸಿಕೆ ಹಾಕಲಾಗುವುದು ಎಂದ ಸಚಿವರು ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ದೇಶದಲ್ಲಿ ಪೊಲಿಯೋ ನಿರ್ಮೂಲನೆ ಮಾಡಿದಂತೆ ಈ ಕಾಯಿಲೆಗಳನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಸಚಿವ ತನ್ವೀರ್ ಸೇಠ್ ಅವರು ಮನವಿ ಮಾಡಿದರು.