ರೈತರು ಬಂದರು ದಾರಿ ಬಿಡಿ, ಅವರ ಮನವಿಗೆ ಕಿವಿಗೊಡಿ
ಬೆಂಗಳೂರು, ನವೆಂಬರ್ 19: ಬೆಳೆಯುತ್ತಿರುವ ಬೆಳೆಯನ್ನು ನೋಡುತ್ತಾ ಹಿಂಗಾರಿಗೆ ಕಾಯಬೇಕಿದ್ದ ರೈತರು ಹೊಲ, ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದಾರೆ. ಬಹಳ ವರ್ಷಗಳ ನಂತರ ರೈತರು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆ ಇಂದು ಬೆಂಗಳೂರನ್ನು ಬಿಟ್ಟುಕೊಡಬೇಕಿದೆ.
ಸರ್ಕಾರದ ಕೇಂದ್ರ ಸ್ಥಾನ ಬೆಂಗಳೂರು. ಆಡಳಿತ ಆಪರೇಟ್ ಆಗುವುದು ಇಲ್ಲಿಂದಲೇ. ಆಡಳಿತ ತಮ್ಮನ್ನು ನಿರ್ಲಕ್ಷಿಸಿದೆ, ಕೇವಲ ಬಡಕಲು ದೇಹದ ಕಾರ್ಮಿಕರಂತೆ ನೋಡಿದೆ ಎಂದು ರೈತರಿಗೆ ಅನಿಸಿದೆ, ಸರ್ಕಾರ ನಮಗೆ ನ್ಯಾಯ ಮಾಡುತ್ತಿಲ್ಲ ಎಂದು ಅವರಿಗೆ ಅನಿಸಿದೆ ಹಾಗಾಗಿ ರೈತರು ಬೆಂಗಳೂರಿಗೆ ಬಂದಿದ್ದಾರೆ. ನೇರವಾಗಿ ಸರ್ಕಾರಕ್ಕೆ ತಮ್ಮ ನೋವು ಹೇಳಿಕೊಳ್ಳಬೇಕು ಎಂಬುದು ಅವರ ಬಯಕೆ.
ವಿಧಾನಸೌಧಕ್ಕೆ ಅನ್ನದಾತರ ಮುತ್ತಿಗೆ: LIVE:ರೈತರ ಕ್ಷಮೆ ಕೇಳದ ಕುಮಾರಸ್ವಾಮಿ
ರೈತರ ಆಗಮನದಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್ ಆಗಿದೆ ಅದು ಸಹಜವೂ ಹೌದು. ಟ್ರಾಫಿಕ್ ಬೆಂಗಳೂರಿಗೆ ಹೊಸದಲ್ಲ. ಆದರೆ ರೈತರು ಬೆಂಗಳೂರಿಗೆ ಪ್ರತಿದಿನವೂ ಬರುವುದಿಲ್ಲ. ಹೊಲಗಳಲ್ಲಿ ಇದ್ದ ರೈತರು ಬೆಂಗಳೂರಿಗೆ ಬಂದಿದ್ದಾರೆ ಎಂದರೆ ಅವರಿಗೆ ನೋವಾಗಿದೆ. ನೋವು ಹೇಳಿಕೊಳ್ಳಲು ನಗರವಾಸಿಗಳು ಅವರಿಗೆ ಸಹಕರಿಸಬೇಕಾಗಿದೆ.
ರಾಜ್ಯದ ಹಲವೆಡೆ ಪ್ರತಿಭಟನೆ
ರೈತರ ಪಕ್ಷವೆಂದೇ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದ ಜೆಡಿಎಸ್ ಅಧಿಕಾರದಲ್ಲಿ ಇರುವಾಗಲೇ ಹೀಗೆ ರೈತರು ಸರ್ಕಾರದ ವಿರುದ್ಧ ಧಂಗೆ ಎದ್ದಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಕಬ್ಬು ಬೆಳೆಗಾರರು ಪ್ರತಿಭಟನೆಯ ಕೇಂದ್ರ ಸ್ಥಾನದಲ್ಲಿದ್ದಾರೆ.
ಕಬ್ಬಿನ ಬಾಕಿ ಹಣವೇ 100 ಕೋಟಿ
ಬೆಳೆದ ಕಬ್ಬಿಗೆ ಬೆಂಬಲ ಬೆಲೆ ಕೊಡಬೇಕು ಎನ್ನುವುದು ರೈತರ ಒತ್ತಾಯ. ಅದಕ್ಕಿಂತ ಮುಖ್ಯವಾದುದೆಂದರೆ ರೈತರ ಕಬ್ಬನ್ನು ಅರೆದು ಸಕ್ಕರೆ ತಯಾರಿಸಿ ಮಾರಿ ಹಣ ಮಾಡಿದ ಕಾರ್ಖಾನೆಗಳು ರೈತರಿಗೆ ಸಿಗಬೇಕಾದ ಹಣವನ್ನು ನೀಡಿಲ್ಲ. ಈ ಹಣದ ಮೊತ್ತ 100 ಕೋಟಿ ದಾಟಿದೆಯಂತೆ! ರೈತ ಬೆಳೆದು ಮಾರಿದ ಬೆಳೆಗೆ ಹಣವನ್ನೇ ಪಾವತಿಸದಿರುವುದು ಅನ್ಯಾಯದ ಪರಮಾವಧಿ. ರೈತರ ಸಿಟ್ಟು ಸಕಾರಣವೇ ಆಗಿದೆ.
ರೈತ ಮಹಿಳೆ ಕುರಿತು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ
ಪಕ್ಷದ ಚಿಹ್ನೆಯನ್ನೇ ಮರೆತರಾ ಎಚ್ಡಿಕೆ
ರೈತ ಮಹಿಳೆಯನ್ನು ಚಿಹ್ನೆಯಾಗಿ ಹೊಂದಿರುವ ಜೆಡಿಎಸ್ ಪಕ್ಷದ ಸಿಎಂ ಕುಮಾರಸ್ವಾಮಿ ಅವರು ಅದೇ ರೈತ ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡಿರುವುದು ರೈತರ ಸ್ವಾಭಿಮಾನ ಕೆರಳಿಸಿದೆ. ಭೂಮಿತಾಯಿ ಬಿಟ್ಟು ಬೇರೆಯವರ ಮುಂದೆ ಬಾಗದೆ ಕಾದುಕೊಂಡಿದ್ದ ರೈತರ ಸ್ವಾಭಿಮಾನಕ್ಕೆ ಸಿಎಂ ಬೇಜವಾಬ್ದಾರಿಯಿಂದ ಪೆಟ್ಟು ಕೊಟ್ಟಿದ್ದಾರೆ. ಸಿಎಂ ಮಾತು ರೈತರ ಸಿಟ್ಟನ್ನು ನೆತ್ತಿಗೆ ಮುಟ್ಟಿಸಿದೆ. ಸಿಟ್ಟು ತೀರಿಸಿಕೊಳ್ಳಲು ಅವರು ಬೆಂಗಳೂರಿಗೆ ಬಂದಿದ್ದಾರೆ.
ಕಬ್ಬಿನ ಬಾಕಿ ಹಣ ಕೊಡಿಸಲು ಸರ್ಕಾರ ಬದ್ಧ: ಪರಮೇಶ್ವರ್
ಮಾತನ್ನು ಕೃತಿಗೆ ಇಳಿಸುವ ಸಮಯ ಬಂದಿದೆ
ಆರಂಭದಲ್ಲಿ ಶೂರತ್ವ ಮೆರೆದ ಕುಮಾರಸ್ವಾಮಿ ಅವರು ರೈತರ ಬಗೆಗೆ ತಮ್ಮ ನಿಷ್ಠೆಯ ಬಗ್ಗೆ ಉದ್ದುದ್ದದ ಭಾವನಾತ್ಮಕ ಮಾತುಗಳನ್ನು ಆಡಿದ್ದರು. ಅದೆಲ್ಲವೂ ಕಾರ್ಯರೂಪಕ್ಕೆ ಬಂದಿಲ್ಲ, ಅದು ಕುಮಾರಸ್ವಾಮಿ ಅವರ ಬಗೆಗೆ ರೈತರಿಗೆ ಭ್ರಮನೀರಸ ಮಾಡಿಬಿಟ್ಟಿದೆ. ರೈತರ ಕೋಪ ಸರ್ಕಾರದ ದವಡೆಗೆ ಮೂಲವಾಗುವ ಲಕ್ಷಣಗಳಿವೆ.
ರೈತರ ಮನವಿಗೆ ಸ್ಪಂದಿಸಲೇ ಬೇಕಿದೆ
ಸರ್ಕಾರ ಈಕೂಡಲೇ ರೈತರ ಮನವಿಗೆ ಸ್ಪಂದಿಸಬೇಕಿದೆ. ಕನಿಷ್ಟ ಅವರ ಕೋಪದ ಮಾತುಗಳನ್ನು ಕಿವಿಗೊಟ್ಟು ಸಮಾಧಾನದಿಂದ ಕೇಳಬೇಕಿದೆ. ಅವರನ್ನು ಮತ್ತೆ ಕೆರಳಿಸದಂತೆ ಅವರ ತಾವು ಮಾಡಿರುವ ತಪ್ಪನ್ನು ಸುಮ್ಮನೆ ಒಪ್ಪಿಕೊಂಡು ಕೈಕಟ್ಟಿ ಕೂತು, ರೈತರ ಮುಂದೆ ಸರ್ಕಾರ ಬಾಗಲೇ ಬೇಕಿದೆ. ಕುಮಾರಸ್ವಾಮಿ ಅವರ ರೈತ ಪ್ರೀತಿಯನ್ನು ಮಾತಿನಿಂದ ಕೃತಿಗೆ ಇಳಿಸುವ ಸಮಯ ಈಗ ಬಂದಿದೆ.