ಗರ್ಭಗುಡಿಯ ಮುಂದೆಯೇ ಕಿತ್ತಾಟ: ಏಕಾಂಗಿಯಾದಳು ತಾಯಿ ಬನಶಂಕರಮ್ಮ
ಮುಜರಾಯಿ ವ್ಯಾಪ್ತಿಗೆ ಬರುವ ಬೆಂಗಳೂರಿನ ಶ್ರೀಮಂತ ದೇವಾಲಯಗಳಲ್ಲೊಂದಾದ ಬನಶಂಕರಮ್ಮ ದೇವಾಲಯದಲ್ಲಿ ಆಡಳಿತ ಮಂಡಳಿಯ ಸದಸ್ಯರೊಬ್ಬರ ಕೌಟುಂಬಿಕ ಕಲಹ ಬೀದಿಗೆ ಬಂದು, ಬನಶಂಕರಮ್ಮನ ಗರ್ಭಗುಡಿಯ ಮುಂದೆಯೇ ಹೊಡೆದಾಟ ನಡೆದ ಘಟನೆ ನಡೆದಿದೆ.
ಬೆಂಗಳೂರು, ಅ 6: ಮುಜರಾಯಿ ವ್ಯಾಪ್ತಿಗೆ ಬರುವ ಬೆಂಗಳೂರಿನ ಶ್ರೀಮಂತ ದೇವಾಲಯಗಳಲ್ಲೊಂದಾದ ಕನಕಪುರ ರಸ್ತೆಯಲ್ಲಿರುವ ಬನಶಂಕರಮ್ಮ ದೇವಾಲಯದಲ್ಲಿ ಆಡಳಿತ ಮಂಡಳಿಯ ಸದಸ್ಯರೊಬ್ಬರ ಕೌಟುಂಬಿಕ ಕಲಹ ಬೀದಿಗೆ ಬಂದು, ಬನಶಂಕರಮ್ಮನ ಗರ್ಭಗುಡಿಯ ಮುಂದೆಯೇ ಹೊಡೆದಾಟ ನಡೆದ ಘಟನೆ ಗುರುವಾರ (ಅ 6) ನಡೆದಿದೆ.
ಶಕ್ತಿದೇವತೆ ಬನಶಂಕರಮ್ಮ ದೇವಾಲಯದಲ್ಲಿ ಈ ಹಿಂದೆ ಆರ್ಥಿಕ ಅವ್ಯವಹಾರದ ಘಟನೆಯೂ ವರದಿಯಾಗಿತ್ತು, ಇದಾದ ಮೇಲೆ ಅರ್ಚಕರ ನಡುವಿನ ಮನಸ್ತಾಪವೂ ಬಹಿರಂಗವಾಗಿತ್ತು. ಈಗ ಕೌಟುಂಬಿಕ ಕಲಹದ ರಂಪರಾಮಾಯಣಕ್ಕೆ ಬನಶಂಕರಮ್ಮ ಸಾಕ್ಷಿಯಾಗಿದ್ದಾಳೆ.
ಬನಶಂಕರಿ ದೇವಾಲಯದ ಆಡಳಿತ ಮಂಡಳಿಯ ವಿವಾಹಿತ ಸದಸ್ಯರೊಬ್ಬರು, ಅದೇ ಮಂಡಳಿಯ ಸದಸ್ಯೆಯ ಜೊತೆ ಅತೀ ಸಲುಗೆಯಿಂದ ಇರುವುದನ್ನರಿತ, ಸದಸ್ಯನ ಪತ್ನಿ ಬನಶಂಕರಮ್ಮನಿಗೆ ಪೂಜೆ ನಡೆಯುತ್ತಿದ್ದ ವೇಳೆಯೇ, ಸದಸ್ಯೆಗೆ ಭಕ್ತರ ಮುಂದೆ ರಪಾ.. ರಪಾ.. ಕೆನ್ನೆಗೆ ಬೀಸಿದ್ದಾರೆ.
ನನ್ನ ಗಂಡನ ಜೊತೆ ನೀನು ಅನೈತಿಕ ಸಂಬಂಧ ಹೊಂದಿದ್ದೀಯಾ ಎಂದು ತಾಯಿಗೆ ಪೂಜೆ ನಡೆಯುತ್ತಿದೆ ಎನ್ನುವುದನ್ನೂ ಮರೆತು, ಭಕ್ತರ ಮುಂದೆಯೇ ಆಡಳಿತ ಮಂಡಳಿಯ ಸದಸ್ಯೆಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಎಲ್ಲಾ ಘಟನೆಗಳು ದೇವಾಲಯದ ಆವರಣದಲ್ಲೇ ನಡೆದಿದ್ದು ವಿಷಾದನೀಯ.
ತನ್ನ ಪತ್ನಿ ಮತ್ತು ಆಡಳಿತ ಮಂಡಳಿಯ ಸದಸ್ಯೆಯ ಜೊತೆ ಕಿತ್ತಾಟ ನಡೆಯುತ್ತಿರುವುದನ್ನು ಅರಿತ ಆಡಳಿತ ಮಂಡಳಿಯ ಸದಸ್ಯ, ಇಬ್ಬರನ್ನೂ ಬೇರೆ ಬೇರೆ ಕಡೆ ಕಳುಹಿಸಿ, ಉಸ್ಸಪ್ಪಾ... ಎಂದಿದ್ದಾರೆ. ಈ ಎಲ್ಲಾ ಘಟನೆಗಳು ಭಕ್ತರ ಸಮ್ಮುಖದಲ್ಲೇ ನಡೆದು ಇಡೀ ಮುಜರಾಯಿ ಇಲಾಖೆ, ತಲೆತಗ್ಗಿಸುವಂತೆ ಮಾಡಿದೆ.
ಬುಧವಾರ ಬನಶಂಕರಿ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಣಿ, ದೇವಾಲಯದ ಆವರಣದಲ್ಲೇ ಟಪ್ಪಾಂಗುಚಿ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದರು. (ಮಾಹಿತಿ: ಪಬ್ಲಿಕ್ ಟಿವಿ)