ಎಚ್ಡಿ ಕುಮಾರಸ್ವಾಮಿಗೆ ಸೆ.23ರಂದು ಹೃದಯ ಶಸ್ತ್ರಚಿಕಿತ್ಸೆ
ಬೆಂಗಳೂರು, ಸೆಪ್ಟೆಂಬರ್ 18 : ಇತ್ತೀಚೆಗೆ ಹೆಚ್ಚು ಕೆಮ್ಮಿನಿಂದ ಬಳಲುತ್ತಿದ್ದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೆಪ್ಟೆಂಬರ್ 23ರಂದು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಎಚ್ ಡಿಕೆ ಆರೋಗ್ಯದಲ್ಲಿ ಏರುಪೇರು, ಸಿಂಗಾಪುರದಲ್ಲಿ ಚಿಕಿತ್ಸೆ
ಸ್ವತಃ ಕುಮಾರಸ್ವಾಮಿ ಅವರು ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 'ನನ್ನ ಹೃದಯದ ಟಿಷ್ಯೂ ವಾಲ್ವ್ ಬದಲಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. 15 ದಿನ ವಿಶ್ರಾಂತಿ ಪಡೆದು ಬಳಿಕ ಎಂದಿನಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ ಎಂದರು.
2007ರ ಡಿಸೆಂಬರ್ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ವೇಳೆ ನನ್ನ ಹೃದಯದ ವಾಲ್ವ್ ಬದಲಿಸಲಾಗಿತ್ತು. ಇದರ ಜೀವಿತಾವಧಿ ಕೇವಲ 10 ವರ್ಷ ಮಾತ್ರ. ಈಚೆಗೆ ಆಂಜಿಯೋಗ್ರಾಮ್ ಮಾಡಿಸಿದಾಗಲೂ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ಹೇಳಿದ್ದರು.
ಆದರೆ, ಈಚೆಗೆ ಕೆಮ್ಮು ನನ್ನನ್ನು ವಿಪರೀತವಾಗಿ ಬಾಧಿಸುತ್ತಿದ್ದು, ಇದರಿಂದ ಹೃದಯದ ಮೇಲೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದೆ ಈ ಹಿನ್ನೆಲೆಯಲ್ಲಿ ನನ್ನ ಆರೋಗ್ಯದ ವಿಚಾರದಲ್ಲಿ ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಹೇಳಿದರು.
ಕೆಮ್ಮು ಮತ್ತು ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಕುಮಾರಸ್ವಾಮಿ ಅವರು ಕೆಲ ದಿನಗಳಿಂದ ಧರ್ಮಸ್ಥಳದ ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು.