ಬೆಂಗಳೂರು ಕೆರೆಯ ನೀರು ಪ್ರಾಣಿಗಳಿಗೂ ಕುಡಿಯಲು ಯೋಗ್ಯವಲ್ಲ!
ಬೆಂಗಳೂರು, ಫೆಬ್ರವರಿ 21: ಬೆಂಗಳೂರು ನಗರದ ನೀರಿನ ಆಕರಗಳ ದುಸ್ಥಿತಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಈಗ ತಾನೆ ಬೆಳಕಿಗೆ ಬಂದಿರುವ ಅಂಕಿಅಂಶಗಳ ಪ್ರಕಾರ ನಗರದ ಕೆರೆಗಳ ಗುಣಮಟ್ಟ ಅತ್ಯಂತ ಶೋಚನೀಯವಾಗಿದೆ.
ಬೆಂಗಳೂರಿನ ಅಗರ ಕೆರೆ ಹಾಗೂ ಹಲಸೂರು ಕೆರೆಯ ತರಬೇತಿ ಪ್ರದೇಶ ಮತ್ತು ಮೀನುಗಾರಿಕೆ ಪ್ರದೇಶಗಳಲ್ಲಿ ಮಾತ್ರ ನೀರಿನ ಗುಣಮಟ್ಟ ಕೆಲಮಟ್ಟಿಗೆ ಸಮಾಧಾನಕರವಾಗಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿ ಪ್ರಕಾರ 2017ರ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ 53 ನೀರಿನ ಮೂಲದಿಂದ ನೀರನ್ನು ಸಂಗ್ರಹಿಸಲಾಗಿದೆ.
ಅದರಲ್ಲಿ ನಗರದಲ್ಲಿ ಹರಡಿರುವ ಬಹುತೇಕ ಕೆರೆಗಳ ನೀರು ಪ್ರಾಣಿಗಳಿಗೂ ಕುಡಿಯಲು, ಸ್ನಾನ ಮಾಡಲು ಕೂಡ ಯೋಗ್ಯವಲ್ಲ ಎಂದು ತಿಳಿದುಬಂದಿದ್ದು, ಜನರು ಆ ನೀರನ್ನು ಬಳಸುವುದಾದರೆ ನೀರಿಗೆ ಸರಿಯಾದ ಉಪಚಾರ ನಡೆಸಬೇಕು, ನೀರನ್ನು ಶುದ್ಧೀಕರಿಸಿಯೇ ಬಳಸಬೇಕು ಎಂದಿದೆ.
ಅಂಕಿಅಂಶಗಳು ಹೇಳುವಂತೆ ಈ ಕೆರೆಗಳನ್ನು ನೋಡಿದರೆ ಬೆಳ್ಳಂದೂರು ಹಾಗೂ ವರ್ತೂರು ಕೆರೆ ಮಾದರಿಯಲ್ಲಿಯೇ ಅಳಿವಿನಂಚಿಗೆ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆರೆಗಳಿಗೂ ಬೆಂಕಿ ಬಿದ್ದರೆ ಆಶ್ಚರ್ಯವೇನಿಲ್ಲ ಅದರಲ್ಲಿ ವಿಷಯುಕ್ತ ಪದಾರ್ಥಗಳು ಸೇರಿಕೊಂಡಿದೆ ಎಂದು ತಿಳಿಸಿದೆ.
ಬೊಮ್ಮನಹಳ್ಳಿಯಲ್ಲಿರುವ ಸೋಮಸುಂದರಪಾಳ್ಯ ಕೆರೆ, ಶಿವಪುರ ಟ್ಯಾಂಕ್, ಪೀಣ್ಯದಲ್ಲಿರುವ ಕರಿಹೋಬನಹಳ್ಳಿ ಕೆರೆ, ಯಲಹಂಕದಲ್ಲಿರುವ ಪುಟ್ಟೇನಹಳ್ಳಿ ಕೆರೆ ನೀರು ಕೂಡ ಬಳಕೆಗೆ ಯೋಗ್ಯವಾಗಿಲ್ಲ ಎಂದು ವರದಿ ಹೇಳಿದೆ.
ಕೆಎಸ್ ಪಿಬಿಸಿಯ ಗ್ಲೋಬಲ್ ಎನ್ವಿರಾನ್ ಮೆಂಟಲ್ ಮಾನಿಟರಿಂಗ್ ಸಿಸ್ಟಂ ಫಾರ್ ಫ್ರೆಶ್ ವಾಟರ್ ಹಾಗೂ ಮಾನಿಟರಿಂಗ್ ಆಫ್ ಇಂಡಿಯನ್ ನ್ಯಾಷನಲ್ ಅಕ್ವಾಟಿಕ್ ರಿಸೋರ್ಸ್ ಸಿಸ್ಟಂ ಯೋಜನೆಯಡಿಯಲ್ಲಿ ಕೆರೆಗಳ ನೀರಿನ ಸ್ಯಾಂಪಲ್ ಪಡೆಯಲಾಗಿದೆ. ಇನ್ನಾದರೂ ಸರ್ಕಾರ, ಬಿಬಿಎಂಪಿ ಎಚ್ಚೆತ್ತು ಕೆರೆಗಳ ನೀರನ್ನು ಶುದ್ಧೀಕರಿಸದಿದ್ದರೆ ಜನರು ಅನೇಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ.