ಈಶ್ವರಪ್ಪ ಆ್ಯಂಡ್ ಟೀಮ್ ಉಚ್ಛಾಟಿಸಿ- ಗುಡುಗಿದ ಬಿಜೆಪಿ ನಾಯಕರು
ಸಭೆ ನಡೆಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಈಶ್ವರಪ್ಪ ಆ್ಯಂಡ್ ಟೀಮ್ ಉಚ್ಛಾಟನೆ ಮಾಡಬೇಕು. ಮುಂದೆಂದೂ ಇಂತಹ ಸಭೆ ನಡೆಸಲು ಅವಕಾಶ ನೀಡಬಾರದು ಎಂದು ಬಿಜೆಪಿ ನಾಯಕರು ಒತ್ತಾಯಿಸಿದರು.
ಬೆಂಗಳೂರು, ಏಪ್ರಿಲ್ 27: ಕೆ.ಎಸ್ ಈಶ್ವರಪ್ಪ ನೇತೃತ್ವದ ಅತೃಪ್ತರ ಬಣ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ಮುಗಿಸುತ್ತಿದ್ದಂತೆ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ.
ಬೆಂಗಳೂರಿನ ಬಿಜೆಪಿ ಸಂಸದರು ಮತ್ತು ಶಾಸಕರು ಮಲ್ಲೇಶ್ವರಂ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈಶ್ವರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.[ಅತೃಪ್ತರ ಸಮಾವೇಶದಲ್ಲಿ ಈಶ್ವರಪ್ಪ-ಬಿಎಸ್ವೈ ಬೆಂಬಲಿಗರ ಮಾರಾಮಾರಿ]
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ವಿ ನಾರಾಯಣ ಸ್ವಾಮಿ, "ಬೆಂಗಳೂರಿನಲ್ಲಿ ಈಶ್ವರಪ್ಪ ಭಿನ್ನರ ಸಮಾವೇಶ ನಡೆಸಿದ್ದು ಅಕ್ಷಮ್ಯ ಅಪರಾಧ. ದೆಹಲಿಗೆ ಕರೆಸಿ ಮಾತುಕತೆ ನಡೆಸಿದರೂ ಈ ರೀತಿ ಅಸಮಧಾನ ಹೊರ ಹಾಕಿದ್ದಾರೆ. ಇವರೆಲ್ಲಾ ಸಂಘಟನೆ ಕಟ್ಟುವುದು ಬಿಟ್ಟು, ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದ್ದಾರೆ.
"ಈಶ್ವರಪ್ಪ ನಡೆಸಿದ ಸಮಾವೇಶಕ್ಕೆ ಕೇವಲ ಒಂದರಿಂದ ಒಂದೂವರೆ ಸಾವಿರ ಜನ ಸೇರಿದ್ದರು. ಇದರಲ್ಲೇ ಗೊತ್ತಾಗುತ್ತದೆ ಈಶ್ವರಪ್ಪನವರಿಗೆ ಎಷ್ಟು ಬೆಂಬಲಿಗರಿದ್ದಾರೆ ಅಂತ. ಇದೇ ಸಮಾವೇಶವನ್ನು ಯಡಿಯೂರಪ್ಪ ಕರೆದಿದ್ದರೆ ಲಕ್ಷ ಲಕ್ಷ ಜನ ಸೇರುತ್ತಿದ್ದರು," ಎಂದು ನಾರಾಯಣ ಸ್ವಾಮಿ ಟಾಂಗ್ ನೀಡಿದ್ದಾರೆ.
ಸಭೆ ನಡೆಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಈಶ್ವರಪ್ಪ ಆ್ಯಂಡ್ ಟೀಮ್ ಉಚ್ಛಾಟನೆ ಮಾಡಬೇಕು. ಮುಂದೆಂದೂ ಇಂತಹ ಸಭೆ ನಡೆಸಲು ಅವಕಾಶ ನೀಡಬಾರದು ಎಂದು ಇದೇ ಸಂದರ್ಭದಲ್ಲಿ ನಾಯಕರು ಒತ್ತಾಯಿಸಿದರು.[ನಾವು ತಂದೆ ತಾಯಿಗೆ ಹುಟ್ಟಿದವರು ಪಕ್ಷ ಬಿಡಲ್ಲ : ಈಶ್ವರಪ್ಪ]
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ನಾರಾಯಣ ಸ್ವಾಮಿ, ಅಶ್ವಥ್ ನಾರಾಯಣ್, ಕಟ್ಟಾ ಸುಬ್ರಮಣ್ಯ ನಾಯ್ದು, ಸಂಸದ ಪಿಸಿ ಮೋಹನ್ ಉಪಸ್ಥಿತರಿದ್ದರು.