ರೆಬೆಲ್ ಸ್ಟಾರ್ ಈಶ್ವರಪ್ಪ ಬಿಜೆಪಿಯಿಂದ ಕಿಕ್ ಔಟ್?
'ರಾಯಣ್ಣ ಬ್ರಿಗೇಡ್' ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೆ.ಎಸ್ ಈಶ್ವರಪ್ಪರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಜನವರಿ 25: 'ಹಿಂದ' ಸಮಾವೇಶದ ಹೆಸರಿನಲ್ಲ 'ರಾಯಣ್ಣ ಬ್ರಿಗೇಡ್' ಕಟ್ಟಿ ಯಡಿಯೂರಪ್ಪಗೆ ಸಡ್ಡು ಹೊಡೆದಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪರನ್ನು ಬಿಜೆಪಿಯಿಂದ ಹೊರ ದಬ್ಬುವ ಸಾಧ್ಯತೆ ಇದೆ.[ಸಮಸ್ಯೆಯನ್ನು ನೀವೆ ಬಗೆಹರಿಸಿಕೊಳ್ಳಿ: ಬಿಎಸ್ ವೈಗೆ ಹೈಕಮಾಂಡ್ ಗುದ್ದು]
ಶುಕ್ರವಾರ ನವದೆಹಲಿಗೆ ಬರುವಂತೆ ಕರ್ನಾಟಕ ಬಿಜೆಪಿಯ ಅಗ್ರ ಗಣ್ಯ ನಾಯಕರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಿಂದ ಬುಲಾವ್ ಬಂದಿದೆ. ದೆಹಲಿಯಲ್ಲಿ ಶುಕ್ರವಾರ ಮಹತ್ವದ ಸಭೆ ನಡೆಯಲಿದ್ದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಮಂತ್ರಿಗಳಾದ ಅನಂತ್ ಕುಮಾರ್. ಡಿ.ವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಹಾಗೂ ಸಂತೋಷ್ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಈಶ್ವರಪ್ಪ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.[ಬಿಎಸ್ ವೈ ಬೆಂಬಲಿಗರಿಂದ ಈಶ್ವರಪ್ಪ ವಿರುದ್ಧ ಹೈಕಮಾಂಡಿಗೆ ಪತ್ರ]
ಬ್ರಿಗೇಡ್ ಸಮಾವೇಶ ಯಾವುದೇ ಕಾರಣಕ್ಕೂ ನಿಲ್ಲಲ್ಲ- ಈಶ್ವರಪ್ಪ
ತಮ್ಮನ್ನು ಬಿಜೆಪಿಯಿಂದ ಹೊರದಬ್ಬುವ ಪ್ರಯತ್ನಗಳು ಜಾರಿಯಲ್ಲಿರುವ ಬೆನ್ನಲ್ಲೇ ಬಾಗಲಕೋಟೆಯಲ್ಲಿ ಮಾತನಾಡಿರುವ ಈಶ್ವರಪ್ಪ, "ಬ್ರಿಗೇಡ್ ಸಮಾವೇಶದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವ ಪ್ರಶ್ನೆಯೇ ಇಲ್ಲ," ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವದ ದಿನ ಕೂಡಲಸಂಗಮದಲ್ಲಿ ನಡೆಯಲಿರುವ "ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶಕ್ಕೆ ನಾನು ಯಾರನ್ನೂ ವೈಯಕ್ತಿಕವಾಗಿ ಆಹ್ವಾನಿಸಿಲ್ಲ," ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಿಂದುಳಿದವರು, ದಲಿತರು ಜಾಗೃತರಾಗುತ್ತಿರುವ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏಕೆ ವಿರೋಧಿಸುತ್ತಾರೆಂದು ಅವರು ಇದೇ ಸಂದರ್ಭ ಪ್ರಶ್ನಿಸಿದ್ದಾರೆ.
"ಯಾರು ಎಷ್ಟೇ ಅಪಸ್ವರ ತೆಗೆದರೂ ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನಿಂದ ವಿಮುಖನಾಗುವುದಿಲ್ಲ. ಹಿಂದುಳಿದವರು ಮತ್ತು ದಲಿತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ ," ಎಂದು ಈಶ್ವರಪ್ಪ ಘೋಷಿಸಿದ್ದಾರೆ.
ಸಹಿ ಸಂಗ್ರಹ ನಿಲ್ಲಿಸುವಂತೆ ಯಡಿಯೂರಪ್ಪ ಸೂಚನೆ
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ, ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಯಡಿಯೂರಪ್ಪ ಕಟ್ಟಾ ಬೆಂಬಲಿಗರು ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರಂಭಿಸಿದ್ದ ಸಹಿ ಸಂಗ್ರಹ ನಿಲ್ಲಿಸುವಂತೆ ಸ್ವತಃ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಇದು ಈಶ್ವರಪ್ಪ ಉಚ್ಛಾಟನೆಯ ಸೂಚನೆಯೋ ಗೊತ್ತಿಲ್ಲ.
ಇದೇ ಸಂದರ್ಭದಲ್ಲಿ ತಮ್ಮ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಪಕ್ಷದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಶಾಸಕರು ಸಹಿ ಸಂಗ್ರಹಣೆ ಮಾಡುತ್ತಿರುವುದಕ್ಕೆ ಯಾವುದೇ ಬೆಲೆ ಇಲ್ಲ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಸದ್ಯ ಯಡಿಯೂರಪ್ಪ-ಈಶ್ವರಪ್ಪ ಜಗಳ ತಾರಕಕ್ಕೇರಿದ್ದು ಮುಂದೇನಾಗುತ್ತೆ ಎನ್ನುವುದಕ್ಕೆ ಶುಕ್ರವಾರ ದೆಹಲಿಯಲ್ಲಿ ನಡೆಯಲಿರುವ ಸಭೆ ದಿಕ್ಸೂಚಿಯಾಗಲಿದೆ.