ಅನಂತ್ ಕುಮಾರ್ ಅವರ ಕನಸಿನ ಹಸಿರು ಬೆಂಗಳೂರು 1:1
ಬೆಂಗಳೂರು, ಜೂನ್ 04 : ಹಸಿರು ಮತ್ತು ತಂಪಿಗೆ ಖ್ಯಾತಿಯಾದ ಬೆಂಗಳೂರಿನಲ್ಲಿ 30 ವರ್ಷಗಳ ಹಿಂದೆ ಮರ ಮತ್ತು ಮನುಷ್ಯನ ಅನುಪಾತವು 1:1 ಇತ್ತು. ಈಗ ಬೆಂಗಳೂರಿನಲ್ಲಿ ಇರುವ ಮರಗಳ ಸಂಖ್ಯೆ 14 ಲಕ್ಷ! ಜನಸಂಖ್ಯೆ ಒಂದು ಕೋಟಿ! ಅಂದರೆ ಏಳು ಜನರಿಗೆ ಒಂದು ಮರ ಇರುವಂತಾಗಿದೆ.
ಐಐಎಸ್ಸಿ (IISc) ಸಂಶೋಧನೆ ಪ್ರಕಾರ, ಒಬ್ಬ ವ್ಯಕ್ತಿಯ ಉಸಿರಾಟದ ಆಮ್ಲಜನಕಕ್ಕಾಗಿ ಕನಿಷ್ಠ 7 ಮರಗಳು ಬೇಕು. ಈಗ ಬೆಂಗಳೂರಿನಲ್ಲಿ ಕಡಿಮೆಯಾಗಿರುವ ಹಸಿರು ಹೊದಿಕೆಯ ಪರಿಣಾಮವಾಗಿ ತಾಪಮಾನದಲ್ಲಿ ಹೆಚ್ಚಳ, ವಾಯು ಮಾಲಿನ್ಯ, ಅಂತರ್ಜಲ ಕುಸಿತಕ್ಕೆ ಕಾರಣವಾಗಿರುತ್ತದೆ.
ಮತ್ತೆ, ಬೆಂಗಳೂರನ್ನು ಹಸಿರಾಗಿಸಲು 'ಹಸಿರು ಬೆಂಗಳೂರು 1:1' ಅಭಿಯಾನವನ್ನು ಅದಮ್ಯ ಚೇತನದ ಪ್ರಧಾನ ಪೋಷಕರಾಗಿರುವ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ರವರು ಪ್ರಾರಂಭಿಸಿದ್ದಾರೆ. [ನಾವು ಕೋಟಿ ಜನ, ಕೋಟಿ ಮರ ಬೇಕು]
ಇವರ ಮಾರ್ಗದರ್ಶನದಲ್ಲಿ ಅನ್ನ-ಅಕ್ಷರ-ಆರೋಗ್ಯ ಕ್ಷೇತ್ರಗಳಲ್ಲಿ ಸದಾ ವಿಭಿನ್ನ, ವಿಶಿಷ್ಟ ಯೋಜನೆಗಳ ಮೂಲಕ ಸಮಾಜ ಸೇವೆ ಮಾಡುತ್ತಿರುವ 'ಅದಮ್ಯ ಚೇತನ'ವು ಒಂದು ಕೋಟಿ ಮರಗಳನ್ನು ಬೆಳೆಸುವ ಬೃಹತ್ ಸಂಕಲ್ಪದ ಹೊಣೆ ಹೊತ್ತಿದೆ. ಈಗಾಗಲೆ ಕಳೆದ ಒಂದು ವರ್ಷದಲ್ಲಿ 75,000 ಸಸಿಗಳನ್ನು ವಿತರಿಸಲಾಗಿದೆ. 10,000 ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.
ಜೂನ್ 5, 2016ರಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಕೇಂದ್ರ ಸಚಿವರಾದ ಅನಂತ ಕುಮಾರ್ರವರ ನೇತೃತ್ವದಲ್ಲಿ ಬೆಂಗಳೂರಿನ ದಕ್ಷಿಣ ಬಡಾವಣೆಗಳಲ್ಲಿ 'ಹಸಿರು ರ್ಯಾಲಿ' ನಡೆಸುವ ಮುಖಾಂತರ ಗಿಡ ನೆಡುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. [ಇಂದು ಮಾತ್ರವಲ್ಲ ಪ್ರತಿದಿನ ಪರಿಸರ ಉಳಿಸಿ]
ಮೆರವಣಿಗೆ ಸಾಗುವ ಹಾದಿ : ಅಂದು ಬೆಳಿಗ್ಗೆ 8ಕ್ಕೆ ಹೊರಡಲಿರುವ ಹಸಿರು ರ್ಯಾಲಿ ಲಾಲ್ಬಾಗ್ ವೆಸ್ಟ್ಗೇಟ್, ಹನುಮಂತನಗರ, ವಿಜಯನಗರ, ಅಗ್ರಹಾರ ದಾಸರಹಳ್ಳಿ, ಮಾರೇನಹಳ್ಳಿ, ನಾಗರಬಾವಿ, ವೀರಭದ್ರನಗರ, ಗಿರಿನಗರ, ಬನ್ನೇರುಘಟ್ಟ ರಸ್ತೆ (ಮೀನಾಕ್ಷಿ ಮಾಲ್), ಸತ್ಯನಾರಾಯಣ ಸ್ವಾಮಿ ದೇವಸ್ಥಾನ - ಅರಕೆರೆ, ಹುಳಿಮಾವು ಶಾಲೆ ಆವರಣ, ಹುಳಿಮಾವು ಕೆರೆ ಪಕ್ಕದ ರಸ್ತೆಬದಿ, ಬೆಂಗಳೂರು ಡೈರಿ, ಲಕ್ಕಸಂದ್ರದ ಮುಖಾಂತರ ಬಸವನಗುಡಿ ಸರ್ಕಾರಿ ಶಾಲೆ(ಅನಂತವನ)ಕ್ಕೆ ಹಿಂದಿರುಗಲಿದೆ.
ಈ ಸಮಯದಲ್ಲಿ ಆರ್.ಪಿ.ಸಿ. ಬಡಾವಣೆ ಮೈದಾನ, ಸಂಕಷ್ಟಹರ ಗಣಪತಿ ದೇವಸ್ಥಾನದ ಪಕ್ಕದಲ್ಲಿ ಬೆಳಗ್ಗೆ 9.30ಕ್ಕೆ ಹಾಗೂ ಹುಳಿಮಾವು ಬಸ್ ನಿಲ್ದಾಣ, ಐಐಎಂ ಹಿಂಭಾಗ, ಅರಕೆರೆ ಇಲ್ಲಿ ಮಧ್ಯಾಹ್ನ 12ಕ್ಕೆ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. [ಅಣ್ಣಗಳಿರಾ ಅಕ್ಕಗಳಿರಾ ಇರುವುದೊಂದೇ ಭೂಮಿ]