ರೆಡ್ಡಿ ಬೇಲ್ ಗಾಗಿ ಡೀಲ್ : ಶ್ರೀರಾಮುಲು ವಿರುದ್ಧ ವಿಡಿಯೋ ರಿಲೀಸ್
ಬೆಂಗಳೂರು, ಮೇ 10: ಓಬಳಾಪುರಂ ಮೈನಿಂಗ್ ಕಂಪನಿ ಉಳಿಸಿಕೊಳ್ಳಲು, ಗಾಲಿ ರೆಡ್ಡಿ ಸೋದರರಿಗೆ ಜಾಮೀನು ಕೊಡಿಸಲು ಬಿ ಶ್ರೀರಾಮುಲು ಅವರು ಅಂದಿನ ಸಿಜೆಐ ಜತೆ ಡೀಲ್ ಮಾಡಿಕೊಂಡಿದ್ದರು. ಇಂಥ ಹಿನ್ನಲೆಯುಳ್ಳ ಅಭ್ಯರ್ಥಿಯನ್ನು ವಿಧಾನಸಭೆಗೆ ಆಯ್ಕೆ ಮಾಡಬೇಕೆ? ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್ ಅವರು ನಿವೃತ್ತರಾಗುವುದಕ್ಕೂ ಮುನ್ನ ರೆಡ್ಡಿ ಗಣಿ ಕಂಪನಿ ಪರ ತೀರ್ಪು ನೀಡಿದ್ದರು. ಈ ಕುರಿತಂತೆ ಡೀಲ್ ಹೇಗೆ ನಡೆದಿತ್ತು ಎಂಬುದರ ವಿಡಿಯೋವೊಂದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉಲ್ಲೇಖಿಸಿ, ಬಿಜೆಪಿಯ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.
ಗಾಲಿ ರೆಡ್ಡಿ ಆಪ್ತ, ಸಿಬಿಐ ನಿರ್ದೇಶಕರ ಭೇಟಿ ಏಕೆ?
ಅಂದಿನ ಸಚಿವ ಶ್ರೀರಾಮುಲು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀರಾಮುಲು, ಸಿಜೆಐ ಬಾಲಕೃಷ್ಣ ಅವರ ಅಳಿಯ ಶ್ರೀನಿಜನ್, ಸ್ವಾಮೀಜಿ, ಹಾಗು ಮಧ್ಯವರ್ತಿ ಕುಬಾಳನ್ ಮಾತುಕತೆ ವಿಡಿಯೋ ಬಹಿರಂಗವಾಗಿದೆ. ಹೈಕೋರ್ಟ್ ತೀರ್ಪು ಎತ್ತಿಹಿಡಿಯಲು 160 ಕೋಟಿಗೆ ಡೀಲ್ ಮಾಡಿಕೊಂಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಬಿಜೆಪಿ ಸಾರಾಸಗಟಾಗಿ ಅಲ್ಲಗಳೆದಿದ್ದು, ಫೇಕ್ ವಿಡಿಯೋ ನಂಬಬೇಡಿ ಎಂದು ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
ನಮಗೆ ಪೂರ್ತಿ ಹಣ ಸಿಕ್ಕಿಲ್ಲ, ಇನ್ನೂ ಅರವತ್ತು ಕೋಟಿ ಸಿಕ್ಕಿಲ್ಲ
ನಮಗೆ ಪೂರ್ತಿ ಹಣ ಸಿಕ್ಕಿಲ್ಲ, ನೂರು ಕೋಟಿ ಸಿಕ್ಕಿದೆ, ಇನ್ನೂ ಅರವತ್ತು ಕೋಟಿ ಸಿಕ್ಕಿಲ್ಲವೆಂದು ಸಿಜೆಐ ಅಳಿಯ ಹೇಳುತ್ತಿದ್ದರೆ, ಪೂರ್ತಿ ಕೊಟ್ಟಿದ್ದೇವೆ. ನಿಮಗೆ ಏಕೆ ತಲುಪಿಲ್ಲ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ರೆಡ್ಡಿ ಹೇಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ನಮ್ಮ ಮಾವ ನಿವೃತ್ತಿಯಾದರೂ ಈಗಲೂ ನಿಮ್ಮನ್ನು ಫಿಕ್ಸ್ ಮಾಡಿಸುತ್ತೇವೆ, ನ್ಯಾಯಮೂರ್ತಿಗಳು ಪರಿಚಯ ಇದ್ದಾರೆ ಎಂದು ಹೇಳಿಕೆ ನೀಡಿರುವ ವೀಡಿಯೋ ಇದೆ.
ರೆಡ್ಡಿ ಬೇಲ್ ಗಾಗಿ ಡೀಲ್: ಯಾದಗಿರಿ ರಾವ್ ಗೆ ಜಾಮೀನು
ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆಯಾಗಬೇಕು
100 ಕೋಟಿಯಲ್ಲಿ ಮಧ್ಯವರ್ತಿ ಕ್ಯಾಪ್ಟನ್ ರೆಡ್ಡಿ ಅವರು ಬಿನ್ನಿ ಅವರಿಗೆ 60 ಕೋಟಿ, 40 ಕೋಟಿ ಶ್ರೀನಿಜನ್ಗೆ ಕೊಟ್ಟಿದ್ದಾರೆ ಎನ್ನವ ಮಾತು ಆಡಿಯೋದಲ್ಲಿದೆ. ಇದರ ಬಗ್ಗೆ ತನಿಖೆ ನಡೆಯಬೇಕು, ದೊಡ್ಡ ಮಟ್ಟದ ತನಿಖೆ ನಡೆಯಬೇಕು, ಭ್ರಷ್ಟಾಚಾರ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಗುಂಡೂರಾವ್ ಆಗ್ರಹಿಸಿದರು.
ಬಿಜೆಪಿಯವರದ್ದು ಭ್ರಷ್ಟಾಚಾರದ ಮುಖವಾಗಿದ್ದು, ಪ್ರಧಾನಿ ಮೋದಿ, ಶಾ ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಸಿಬಿಐ ಕೇಸ್ನಿಂದ ಖುಲಾಸೆ ಮಾಡಿಸುತ್ತಿದ್ದಾರೆ. ಸುಪ್ರೀಂ ಜಡ್ಜ್ ಗಳೇ ಬೀದಿಗೆ ಬಂದು ಅಸಮಾಧಾನ ವ್ಯಕ್ತಪಡಿಸುವ ಸ್ಥಿತಿ ಎದುರಾಗಿದೆ
ಸರ್ವಾಧಿಕಾರಿಯಂತೆ ಮೋದಿ, ಶಾ ನಡೆದುಕೊಳ್ಳುತ್ತಿದ್ದಾರೆ
ಎಲ್ಲವನ್ನೂ ನಿಯಂತ್ರಿಸಿ ಸರ್ವಾಧಿಕಾರಿಯಂತೆ ಮೋದಿ, ಶಾ ನಡೆದುಕೊಳ್ಳುತ್ತಿದ್ದಾರೆ. ತಮಗೆ ಆಗದವರ ವಿರುದ್ಧ ಕೇಸು, ಐಟಿ ದಾಳಿ, ಮಾಧ್ಯಮಗಳ ವಿರುದ್ಧವೂ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಟೀಕಿಸಿದರು.
ಮಾಫಿಯಾ ರಾಜಕಾರಣ ರೀತಿ ಆಗಿದೆ, ದೇಶವನ್ನು ಡಾನ್ ರೀತಿ ಮೋದಿ ನಡೆಸುತ್ತಿದ್ದಾರೆ. ಈಗಲಾದರೂ ಬಿಜೆಪಿ ಕ್ರಮ ಕೈಗೊಳ್ಳುತ್ತದೆಯಾ, ಚುನಾವಣಾ ಕಣದಿಂದ ಅಭ್ಯರ್ಥಿಯನ್ನು ಹಿಂದೆ ಪಡೆಯುತ್ತದಾ? ಕೇವಲ ಭಾಷಣ ಮಾಡಲು ಪಿಎಂ ಆಗಬಾರದು, ಈ ವಿಚಾರದಲ್ಲಿ ನಿಮ್ಮ ಪ್ರತಿಕ್ರಿಯೆ ಏನು? ಇಂದೇ ಕ್ರಮದ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದರು.
ರಾಮುಲು ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ
ಇಷ್ಟಾದರೂ ರಾಮುಲು ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ, ನೈತಿಕತೆಯ ಅಧಃಪತನಕ್ಕೆ ಇವರು ಹೋಗಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೀವು ಇದಕ್ಕೆ ಏನು ಹೇಳುತ್ತೀರಿ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.ಸಿಬಿಐ ಬಂಧನದಲ್ಲಿರುವ ಗಣಿಧಣಿ ಹಾಗೂ ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಮಾಜಿ ವಕೀಲ ರಾಘವಾಚಾರ್ಯುಲು ಅವರು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾರನ್ನು ಕಳೆದ 54 ಬಾರಿ ರಹಸ್ಯವಾಗಿ ಭೇಟಿ ಮಾಡಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಶ್ರೀರಾಮುಲು ವಿರುದ್ಧ ವಿಡಿಯೋ ರಿಲೀಸ್
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿನೇಶ್, ಬೇಲ್ ಗಾಗಿ ಡೀಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಓಬಳಾಪುರಂ ಮೈನಿಂಗ್ ಕಂಪನಿ ನಿಲ್ಲಿಸಲು ಆಂಧ್ರಪ್ರದೇಶ ಸರ್ಕಾರ ನೀಡಿದ್ದ ಆದೇಶಕ್ಕೆ ಅಲ್ಲಿನ ಹೈಕೋರ್ಟ್ಗೆ ಹೋಗಿ ತಡೆ ತಂದಿದ್ದರು. ನಂತರ ಅಲ್ಲಿನ ಸರ್ಕಾರ ಸುಪ್ರೀಂ ಮೊರೆ ಹೋಗಿತ್ತು. ಆದರೆ ಅಂದಿನ ಮುಖ್ಯ ನ್ಯಾಯಮೂರ್ತಿಗಳು ನಿವೃತ್ತಿಗೂ ಒಂದು ದಿನ ಮೊದಲು ಹೈಕೋರ್ಟ್ ಆದೇಶ ಎತ್ತಿಹಿಡಿದು ಆದೇಶ ಹೊರಡಿಸಿದ್ದರು. ಆದರೆ ಇದರ ಹಿಂದೆ ದೊಡ್ಡ ಡೀಲ್ ನಡೆದಿದೆ ಎನ್ನುವ ಮಾಹಿತಿ ಈಗ ಲಭ್ಯವಾಗಿದೆ ಎಂದರು.