ಡಿಕೆಶಿ ನಂಬಿದ್ದಕ್ಕೆ ಮೋಸವಾಯ್ತು : ಮಂಜುಳಾ ನಾಯ್ಡು ಆಕ್ರೋಶ
ಬೆಂಗಳೂರು, ಏಪ್ರಿಲ್ 16: ಬೆಂಗಳೂರಿನ ರಾಜಾಜಿನಗರದಲ್ಲಿ ಸ್ಪರ್ಧಿಸುವ ಆಸೆ ಹೊತ್ತಿದ್ದ ಜಿ ಮಂಜುಳಾ ನಾಯ್ಡು ಅವರಿಗೆ ನಿರಾಶೆಯಾಗಿದೆ. ಮಾಜಿ ಮೇಯರ್ ಜಿ ಪದ್ಮಾವತಿಗೆ ಟಿಕೆಟ್ ಪಕ್ಕಾ ಆಗಿದೆ. ಇಂಧನ ಸಚಿವ ಡಿಕೆ ಶಿವಕುಮಾರ್ ಅವರನ್ನು ನಂಬಿದ್ದಕ್ಕೆ ನನಗೆ ಮೋಸವಾಗಿದೆ ಎಂದು ಮಂಜುಳಾ ನಾಯ್ಡು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಳೆದ 30ವರ್ಷದಿಂದ ದುಡಿದಿದ್ದಕ್ಕೆ ಏನು ಪ್ರತಿಫಲ ಸಿಕ್ಕಿಲ್ಲ, ಕಾಂಗ್ರೆಸ್ ನವರು ದುಡ್ಡಿಗೆ ಟಿಕೆಟ್ ಮಾರಿಕೊಂಡಿದ್ದಾರೆ. ನಿಷ್ಟಾವಂತರಿಗೆ ಇಲ್ಲಿ ಬೆಲೆಯಿಲ್ಲ. ಕಳೆದ ಚುನಾವಣೆಯಲ್ಲಿ ಕೆಜೆಪಿ ಪರ ಪ್ರಚಾರ ಮಾಡಿದ್ದ ಪದ್ಮಾವತಿ ಅವರಿಗೆ ಟಿಕೆಟ್ ನೀಡಲಾಗಿದೆ. ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದ ಶಿವಕುಮಾರ್ ಅವರು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಮಂಜುಳಾ ನಾಯ್ಡು ಆರೋಪಿಸಿದ್ದಾರೆ.
ರಾಜಾಜಿನಗರದಲ್ಲಿ ಸದ್ಯ ಬಿಜೆಪಿಯ ಎಸ್ ಸುರೇಶ್ ಕುಮಾರ್ ಅವರು ಹಾಲಿ ಶಾಸಕರಾಗಿದ್ದಾರೆ. ಎರಡು ಬಾರಿ ಜಯಭೇರಿ ಬಾರಿಸಿದ್ದಾರೆ. 2008ರಲ್ಲಿ ಜಿ ಪದ್ಮಾವತಿ ಅವರನ್ನು 14,660 ಮತಗಳಿಂದ ಹಾಗೂ 2013ರಲ್ಲಿ ಆರ್ ಮಂಜುಳಾ ನಾಯ್ಡು ಅವರನ್ನು 14,809 ಮತಗಳ ಅಂತರದಿಂದ ಸೋಲಿಸಿದ್ದರು.