'ಶಿಕ್ಷಣ ಕೊಡಿಸಿ ಆದ್ರೆ ಮತಾಂತರಕ್ಕೆ ಕೈಹಾಕಬೇಡಿ'
ಬೆಂಗಳೂರು, ಜ.6: ಬೌದ್ಧ ಧರ್ಮಗುರು ದಲೈ ಲಾಮಾ ಅವರು ಹಿರಿಯರಾಗಿ ಒಂದು ಉತ್ತಮ ಮಾತನ್ನು ಹೇಳಿದ್ದಾರೆ. 'ಶಿಕ್ಷಣ ಕೊಡ್ಸಿ, ಜನರ ಜೀವನಮಟ್ಟ ಸುಧಾರಣೆ ಮಾಡಿ. ಆದರೆ ಅದಕ್ಕೆ ಪ್ರತಿಯಾಗಿ ಅವರನ್ನು ಮತಾಂತರ ಮಾಡಿಸಬೇಡಿ' ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.
ಇತ್ತ ಇದೇ ಜವನರಿ ಅಂತ್ಯದಲ್ಲಿ 'ಬೆನ್ನಿ ಹಿನ್ ಎಂಬ ವ್ಯಕ್ತಿ ಕೈಚಳಕ ಪವಾಡದ ಮೂಲಕ ರೋಗ-ರುಜಿನಗಳನ್ನು ವಾಸಿ ಮಾಡುತ್ತೇನೆ ಎಂದು ಹೇಳಿ, ಮತಾಂತರಕ್ಕೆ ಪ್ರಚೋದಿಸುತ್ತಾನೆ ' ಎಂದು ಜನ ಕೂಗಿಡುತ್ತಿರುವಾಗ ಹಿರಿಯ ದಲೈ ಲಾಮಾ ಅವರು ಧರ್ಮ ಸೂಕ್ಷವನ್ನು ಬಿಡಿಸಿ ಹೇಳಿರುವುದು ಸಕಾಲಿಕವಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ನಡೆದ ಆಂಗ್ಲೋ ಇಂಡಿಯನ್ ಶಾಲೆಗಳ ಪ್ರಿನ್ಸಿಪಾಲರುಗಳ ರಾಷ್ಟ್ರೀಯ ಸಮ್ಮೇಳನವ್ನನುದ್ದೇಶಿ ಮಾತನಾಡಿದ ಟಿಬೆಟ್ಟಿನ ಧಾರ್ಮಿಕ ಗುರು ದಲೈ ಲಾಮಾ ಅವರು ಈ ಹಿತವಚನ ನುಡಿದಿದ್ದಾರೆ. ಆಧಾರ್ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನೀಲೇಕಣಿ ಅವರೂ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
'ವಿಶ್ವದ ಮೂಲೆಮೂಲೆಗಳಲ್ಲಿ ಕ್ರಿಶ್ಚಿಯನ್ ಮಿಶಿನರಿಗಳು ಶಿಕ್ಷಣ ಮತ್ತು ಆರೋಗ್ಯ ಸೇವಾ ಕ್ಷೇತ್ರಗಳಲ್ಲಿ ಸ್ತುತ್ಯರ್ಹ ಸೇವೆ ಸಲ್ಲಿಸುತ್ತಿವೆ. ಅದು ನಿಜಕ್ಕೂ ಉತ್ತಮೋತ್ತಮವಾಗಿದೆ. ಆದರೆ ಅದು ಅಷ್ಟಕ್ಕೇ ನಿಂತರ ಒಳ್ಳೆಯದು. ಅದರಾಚೆಗೆ ಹೋಗಿ ಮತಾಂತರಕ್ಕೆ ಕೈಹಾಕುವುದು ಸರ್ವತಾ ಸಾಧುವಲ್ಲ' ಎಂದು ಹಿರಿಯರಾದ ದಲೈ ಲಾಮಾ ಅವರು ಧರ್ಮಸೂಕ್ಷ್ಮವನ್ನು ಹೇಳಿದ್ದಾರೆ.
'ಧರ್ಮಗಳು ನಿರ್ದಿಷ್ಟ ಸಂಸ್ಕೃತಿ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ಹುಟ್ಟುಕೊಂಡಿರುವಂತಹವು. ಹಾಗಾಗಿ, ಜನ ತಮ್ಮದೇ ಆದ ಸಂಪ್ರದಾಯಗಳನ್ನು ಉಳಿಸಿಕೊಳ್ಳುವುದು ತರ್ಕ ಬದ್ಧವಾಗಿರುತ್ತದೆ' ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಧರ್ಮಗುರು ದಲೈ ಲಾಮಾ ಅವರು ಅಭಿಪ್ರಾಯಪಟ್ಟಿದ್ದಾರೆ.
'ಈ ಮತಾಂತರ ಎಂಬುದು ಜನರ ಮಧ್ಯೆ ಕಲಹವನ್ನುಂಟು ಮಾಡುವಂತಹುದು. ಅಷ್ಟೇ ಅಲ್ಲ, ವೈಯಕ್ತಿಕ ನೆಲಗಟ್ಟಿನಲ್ಲಿಯೂ ಕಲಹ ಸೃಷ್ಟಿಸುವಂತಹುದು. ಅದು ನಿಜಕ್ಕೂ ಧರ್ಮ ಸೂಕ್ಷ್ಮವಾದಂತಹುದು. ನಾನಂತೂ ಭದ್ಧರ ನಾಡಿನಲ್ಲಿ ಹೊರತುಪಡಿಸಿ ಬೇರೆಲ್ಲೂ ಬೌದ್ಧ ಧರ್ಮವನ್ನು ಬೋಧಿಸುವುದಿಲ್ಲ. ಏನೇ ಆಗಲಿ. ಎಲ್ಲ ಧರ್ಮಗಳೂ ಸಹಿಷ್ಣುತೆ ಮತ್ತು ಕ್ಷಮಾ ಗುಣವನ್ನೇ ಬೋಧಿಸುವುದು' ಎಂದು ಅವರು ಹೇಳಿದ್ದಾರೆ.