ಕನ್ನಡದ 'ಇ ಮನಸು' ಗಳನ್ನು ಒಂದೆಡೆ ಸೇರಿಸಿದ ಎಕ್ಸ್ ಪೋ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜನೆಯ ಇ ಕನ್ನಡ ಪ್ರದರ್ಶನ ಕಾರ್ಯಕ್ರಮ ಭಾನುವಾರ (ಮಾರ್ಚ್ 05) ದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಯಿತು.
ಬೆಂಗಳೂರು, ಮಾರ್ಚ್ 05: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜನೆಯ ಇ ಕನ್ನಡ ಪ್ರದರ್ಶನ ಕಾರ್ಯಕ್ರಮ ಭಾನುವಾರ (ಮಾರ್ಚ್ 05) ದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಕಾರ್ಯಕ್ರಮದಲ್ಲಿ 35ಕ್ಕೂ ಅಧಿಕ ಸ್ಟಾಲ್ ಗಳಿತ್ತು, ಸಂವಾದ ಕಾರ್ಯಕ್ರಮದಲ್ಲಿ ವಿಶ್ವಕನ್ನಡ.ಕಾಂನ ಯುಬಿ ಪವನಜ ಹಾಗೂ ಒನ್ಇಂಡಿಯಾ.ಕಾಂನ ಎಸ್ಕೆ ಶಾಮಸುಂದರ, ಮಾಹಿತಿ ಮತ್ತು ತಂತ್ರಜ್ಞಾನ ತಜ್ಞರಾದ ಪ್ರೊ. ಉದಯಶಂಕರ ಪುರಾಣಿಕ ಅವರು ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಣಜ.ಕಾಂ ಹಾಗೂ ಇಜ್ಞಾನ.ಕಾಂನ ಟಿಜಿ ಶ್ರೀನಿಧಿ ಅವರ ಜಂಟಿ ಆಯೋಜನೆಯ ಈ ಕಾರ್ಯಕ್ರಮದಲ್ಲಿ ಕನ್ನಡ ತಂತ್ರಾಂಶಕ್ಕಾಗಿ ದುಡಿಯುತ್ತಿರುವ, ತಂತ್ರಾಂಶವನ್ನು ಬಳಸುತ್ತಿರುವ ಹಾಗೂ ತಂತ್ರಾಂಶಗಳ ಬಗ್ಗೆ ತಿಳಿಯಲು ಬಯಸುವ ಉತ್ಸಾಹಿಗಳಿಗೆ ಈ ಕಾರ್ಯಕ್ರಮ ವೇದಿಕೆ ಒದಗಿಸಿತ್ತು.
'ಕನ್ನಡ ಭಾಷೆಯಲ್ಲಿ ತಂತ್ರಜ್ಞಾನ ಪ್ರಗತಿ ಮತ್ತು ಸಾಧ್ಯತೆಗಳು' ಎಂಬ ವಿಷಯದ ಬಗ್ಗೆ ಸಂವಾದ ಮತ್ತು ಪ್ರದರ್ಶನವು ಯಶಸ್ವಿಯಾಗಿದ್ದು, ಮುಂದಿನ ಸಾಧ್ಯಾಸಾಧ್ಯತೆಗಳಿಗೆ ಮುನ್ನುಡಿ ಬರೆದಿದೆ. ಕಾರ್ಯಕ್ರಮದ ಬಗ್ಗೆ ಇನ್ನಷ್ಟು ವಿವರ ಹಾಗೂ ಚಿತ್ರಗಳನ್ನು ಮುಂದೆ ಓದಿ...
ಟಿಜಿ ಶ್ರೀನಿಧಿ ಪುಸ್ತಕ ಬಿಡುಗಡೆ
ವಿಜ್ಞಾನ ಬರಹಗಳ ಜನಪ್ರಿಯ ಅಂಕಣಕಾರ, ಲೇಖಕ ಟಿಜಿ ಶ್ರೀನಿಧಿಯವರ 'ಕನ್ನಡ ತಂತ್ರಜ್ಞಾನ ನಿನ್ನೆ ಇಂದು ನಾಳೆ' ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಕನ್ನಡಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗ್ಡೆ ಲೋಕಾರ್ಪಣೆ ಮಾಡಿದರು.
ಚಿತ್ರದಲ್ಲಿ ಎಡದಿಂದ ಬಲಕ್ಕೆ: ರಾಧಾಕೃಷ್ಣ(ಕಣಜ.ಕಾಂ), ಲೇಖಕ ಶ್ರೀನಿಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆಎ ದಯಾನಂದ, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗ್ಡೆ.
ಮಳಿಗೆಗಳತ್ತ ಸಾರ್ವಜನಿಕರು
ಸುಮಾರು 35 ಕ್ಕೂ ಅಧಿಕ ಮಳಿಗೆಗಳಲ್ಲಿ ಕನ್ನಡ ತಂತ್ರಾಂಶ ಹಾಗೂ ಅಭಿವೃದ್ಧಿ ಕುರಿತಂತೆ ಆಗಿರುವ ಬೆಳವಣಿಗೆಯ ಕುರಿತು ಪರಿಚಯ, ಪ್ರದರ್ಶನ ಆಯೋಜಿಸಲಾಗಿತ್ತು.
ಮಳಿಗೆಗಳಲ್ಲಿ ನೆರವು
ಪದ ತಂತ್ರಾಂಶವನ್ನು ನಾಡಿಗೆ ಪರಿಚಯಿಸಿರುವ ಲೋಹಿತ್ ಡಿಎಸ್ ಅವರು, Rank, Software ಮುಂತಾದ ಪದಗಳನ್ನು ನುಡಿ ಕೀ ಬೋರ್ಡ್ ಬಳಸಿ ಟೈಪ್ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ವೈವಿಧ್ಯಮಯ ಮಾಹಿತಿ
ವಿಕಿಪೀಡಿಯ, ಕಣಜ, ಸಂಚಿ ಫೌಂಡೇಶನ್, ಪದ ತಂತ್ರಾಂಶ, ಕನ್ನಡ ಒಸಿಆರ್, ಜಸ್ಟ್ ಕನ್ನಡ, ಡೈಲಿ ಹಂಟ್ , ಕನ್ನಡ ಗೊತ್ತಿಲ್ಲ, ಕನ್ನಡ ಸಂಪದ ಸೇರಿದಂತೆ ಅನೇಕ ಮಳಿಗಳಿತ್ತು.
ಕನ್ನಡ ಅಪ್ಲಿಕೇಷನ್ ಗಳು
ಪ್ರದರ್ಶನದಲ್ಲಿ ಕನ್ನಡದ ವಿವಿಧ ತಂತ್ರಾಂಶಗಳು, ಮೊಬೈಲ್ ಆಪ್ ಗಳು, ಕನ್ನಡ ಜಾಲತಾಣಗಳ ಬಗ್ಗೆ ಮಾಹಿತಿ ನೀಡಲಾಯಿತು. ಪದ ಬಂಧ, ಇಮೇಜ್ ನಿಂದ ಟೆಕ್ಸ್ಟ್, ಟೆಕ್ಸ್ಟ್ ನಿಂದ ಸ್ಪೀಚ್, ಸ್ಪೀಚ್ ನಿಂದ ಟೆಕ್ಸ್ಟ್, ಕಲಾವಿದರ ಮಾಹಿತಿ ಕೋಶ, ಇ ಬುಕ್ಸ್ ಸೇರಿದಂತೆ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಭಾಷೆ ಕ್ಷೇತ್ರದಲ್ಲಿ ಈವರೆಗೆ ಆಗಿರುವ ಅಭಿವೃದ್ಧಿಗಳ ಬಗ್ಗೆ ಮಾಹಿತಿ ಲಭ್ಯವಿತ್ತು.
ಕೆಎ ದಯಾನಂದ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಇ ಆಡಳಿತ ಜಾರಿಗೆ ತಂದ ಬಳಿಕ ಸರ್ಕಾರದ ಅಧೀನ ಬಹುತೇಕ ಎಲ್ಲಾ ಇಲಾಖೆಗಳಿಗೂ ನಮ್ಮ ಇಲಾಖೆ ತರಬೇತಿ ಕೇಂದ್ರವಾಯಿತು. ಈಗ ನಾವು ಕಾಲೇಜುಗಳ ಜತೆ ಕೈಜೋಡಿಸಿ ಕನ್ನಡ ತಂತ್ರಾಂಶಗಳ ಬಳಕೆ ಹಾಗೂ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದ್ದೇವೆ. ಜನ ಸಾಮಾನ್ಯರಿಗೂ ಸುಲಭವಾಗಿ ಅವರ ಭಾಷೆಯಲ್ಲಿ ಸರ್ಕಾರಿ ಸೌಲಭ್ಯ ಹಾಗೂ ದೈನಂದಿನ ಸೌಕರ್ಯಗಳು ಲಭ್ಯವಾಗುವಂಥ ವ್ಯವಸ್ಥೆ ಕಲ್ಪಿಸುವುದು ನನ್ನ ಉದ್ದೇಶ- ಕೆಎ ದಯಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.
ತಂತ್ರಾಂಶ ಉಚಿತವಾಗಿ ನೀಡಬೇಕಾ?
ಶ್ರೀನಿಧಿಯವರ 'ಕನ್ನಡ ತಂತ್ರಜ್ಞಾನ ನಿನ್ನೆ ಇಂದು ನಾಳೆ' ಕಿರುಹೊತ್ತಿಗೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಕನ್ನಡಪ್ರಭ ಪತ್ರಿಕೆಯ ಸಂಪಾದಕ ರವಿ ಹೆಗ್ಡೆ, ತಂತ್ರಾಂಶ ಎಲ್ಲಾರಿಗೂ ಲಭ್ಯವಾಗಬೇಕು ನಿಜ, ಆದರೆ, ತಂತ್ರಜ್ಞರಿಗೆ ಸರಿಯಾದ ಸಂಭಾವನೆ ಸಿಗುತ್ತದೆಯೆ? ಇದಕ್ಕೆಲ್ಲ ಸರಿಯಾದ ಆರ್ಥಿಕ ವ್ಯವಸ್ಥೆ ಇದೆಯೇ? ಯೂನಿಕೋಡ್ ಶಿಷ್ಟಾಚಾರ ಎಲ್ಲೆಡೆ ಜಾರಿಯಾಗಿದೆಯೇ? ಆಗೆಲ್ಲ ಡಿಟಿಪಿ ಸಾಫ್ಟ್ ವೇರ್ ನಮಗೆ ದೊಡ್ಡ ಎನಿಸಿತ್ತು. ಈಗಲೂ ಅನೇಕ ಸಾಫ್ಟ್ ವೇರ್ ಗಳು ಜನ ಸಾಮಾನ್ಯರಲ್ಲ ತಲುಪಿಲ್ಲ ಎಂದರು.
ಎಸ್ಕೆ ಶಾಮಸುಂದರ
ಇ-ಕನ್ನಡ ಪ್ರದರ್ಶನ ಮತ್ತು ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಒನ್ಇಂಡಿಯಾ ಸಂಪಾದಕ ಎಸ್ಕೆ ಶಾಮಸುಂದರ ಅವರು, ಮಾಹಿತಿ ಕೊರತೆ, ಭಾಷಾ ಅಜ್ಞಾನದಿಂದ ತಂತ್ರಾಂಶ ಬಳಲಬಾರದು. ಎಲ್ಲಾ ತಂತಜ್ಞರನ್ನು ಒಗ್ಗೂಡಿಸುವ ಆನ್ ಲೈನ್ ತಂತ್ರಜ್ಞರ ಅಕಾಡೆಮಿ ನಿರ್ಮಿಸಬೇಕು. business ಹಾಗೂ passion ಗೆ ತಕ್ಕಂತೆ ತಂತ್ರಾಂಶ ಹಾಗೂ ತಂತ್ರಜ್ಞರು ಬೆಳೆದರಷ್ಟೇ ಉಳಿಗಾಲ ಎಂದರು.