ಪೊಲೀಸರಿಗೆ ಕಗ್ಗಂಟಾದ ಇ-ಸಿಗರೇಟ್ ಹಾವಳಿ
ಬೆಂಗಳೂರು, ಅಕ್ಟೋಬರ್, 25: ಕೆಲವು ತಿಂಗಳ ಹಿಂದೆ ರಾಜ್ಯದಲ್ಲಿ ಇ-ಸಿಗರೇಟ್ ಮಾರಾಟವನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೂ ಸಹ ಅಕ್ರಮವಾಗಿ ಇ-ಸಿಗರೇಟ್ ಮಾರಾಟ ದಂಧೆ ಜೋರಾಗಿ ನಡೆಯುತ್ತಿದೆ.
ಯುವ ಸಮುದಾಯ ಹೆಚ್ಚಾಗಿ ಇ-ಸಿಗರೇಟ್ ಅನ್ನು ಆನ್ ಲೈನ್ ನಲ್ಲೇ ಹೆಚ್ಚು ಖರೀದಿ ಮಾಡುತ್ತಿದ್ದು, ಇ-ಸಿಗರೇಟ್ ಜಾಲವನ್ನು ಬೇಧಿಸುವುದು ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಸಿ-ಸಿಗರೇಟ್ ಸೇವನೆಗೆ ಹೆಚ್ಚು ಒಲವು ತೋರುತ್ತಿದ್ದು, ಇದರಿಂದ ಮಾದಕ ವ್ಯಸನಿಗಳಾಗುವ ಸಾಧ್ಯತೆ ಇದೆ. ಬೆಂಗಳೂರು, ಮೈಸೂರು, ಉಡುಪಿಯಲ್ಲಿ ಹೆಚ್ಚಾಗಿ ಇ-ಸಿಗರೇಟ್ ಬಳಸಲಾಗುತ್ತಿದೆ.
ಗಾಂಜಾ, ಹಶಿಶ್, ಲಿಸರ್ಜಿಕ್ ದ್ರವ, ಮತ್ತು ಡೈಥಲಮೈಡ್ ನಂತಹ ಮಾದಕ ಪದಾರ್ಥಗಳು ಇ-ಸಿಗರೇಟ್ ಗಳಲ್ಲಿ ಇದ್ದು ಇದನ್ನು ಸೇವಿಸುವ ಯುವಕರು ಹೆಚ್ಚು ಉದ್ರೇಕಕ್ಕೆ ಒಳಾಗುಗವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ದರಿಂದ ಇ-ಸಿಗರೇಟ್ ಮಾರಾಟ ಜಾಲವನ್ನು ಬೇಧಿಸಿ ತಡೆಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಲಾಗಿದೆ.
ಮುಖ್ಯವಾಗಿ ಇ-ಸಿಗೇಟ್ ಸೇವನೆ ಮಾಡುವಾಗ ಹೊಗೆ ಬಂದರೂ ಸಹ ಭಸ್ಮ ಬರುವುದಿಲ್ಲವಾದ್ದರಿಂದ . ಈ ಕಾರಣಕ್ಕಾಗಿಯೇ ಯುವಕರು ಹೆಚ್ಚಾಗಿ ಇ-ಸಿಗರೇಟ್ ಸೇವನೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ಎಡಿಜಿಪಿ ಭಾಸ್ಕರ್ ರಾವ್ ಅವರು ಪ್ರತಿಕ್ರಿಯೆ ನೀಡಿದ್ದು, "ಇ-ಸಿಗರೇಟ್ ಸೇವನೆಯಿಂದ ಪ್ರಮುಖವಾಗಿ ಯುವಕರು ಮಾದಕ ಪದಾರ್ಥಗಳಿಗೆ ದಾಸರಾಗುವ ಸಾಧ್ಯತೆ ಇದ್ದು, ಇದು ನಮ್ಮ ಆರೋಗ್ಯದ ಮೇಲೆ ದೀರ್ಘಕಾಲಿಕ ಪರಿಣಾಮ ತೋರಲಿದೆ" ಎಂದು ಹೇಳಿದ್ದಾರೆ.
ಈಗಾಗಲೇ ವಿದೇಶಗಳಲ್ಲಿ ಇ-ಸಿಗರೇಟ್ ಸೇವನೆಯ ದುಷ್ಪರಿಣಾಮಗಳು ಬೆಳಕಿಗೆ ಬರುತ್ತಿದ್ದು, ಭಾರತ ಮತ್ತು ಕರ್ನಾಟಕಕ್ಕೂ ಇದರ ಜಾಲ ವಿಸ್ತರಿಸುತ್ತಿರುವುದು ವಿಷಾದಕರ. ಹೆಚ್ಚಾಗಿ ಆನ್ ಲೈನ್ ನಲ್ಲೇ ಖರೀದಿ ಮಾಡಲಾಗುತ್ತಿದ್ದು, ಕೊರಿಯಲ್ ಮೂಲಕ ಯುವಕರ ಕೈ ಸೇರುತ್ತಿರುವುದರಿಂದ ಬಳಕೆ ತಡೆಗಟ್ಟುವುದು ಕಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಈ ವಿಷಯವನ್ನು ರಾಜ್ಯ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಇ-ಸಿಗರೇಟ್ ಮಾರಾಟ ಜಾಲತಾಣಗಳನ್ನು ಪತ್ತೆ ಹಚ್ಚಿ ಮಾರಾಟ ತಡೆಯುವ ಕುರಿತು ಶ್ರಮಿಸುತ್ತಿದೆ ಎಂದು ಹೇಳಲಾಗಿದೆ.