ರಾಜಿನಾಮೆ ಕೊಡು ಅಂದ ಕೂಡಲೇ ಕೊಡಲು ಸಾಧ್ಯವಿಲ್ಲ: ಜಾರ್ಜ್
ಸಚಿವ ಪದವಿಗೆ ರಾಜಿನಾಮೆ ನೀಡಲು ಸಾಧ್ಯವಿಲ್ಲ ಎಂದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಕೇಸ್ ಸಿಬಿಐಗೆ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಜಾರ್ಜ್ ರಾಜಿನಾಮೆಗೆ ಒತ್ತಾಯಿಸಿದ್ದ ಯಡಿಯೂರಪ್ಪ.
ಬೆಂಗಳೂರು, ಸೆಪ್ಟೆಂಬರ್ 5: ಯಡಿಯೂರಪ್ಪ ಅವರು ರಾಜಿನಾಮೆ ನೀಡು ಅಂದ ಕೂಡಲೇ ನಾನು ನನ್ನ ಮಂತ್ರಿ ಪದವಿಗೆ ರಾಜಿನಾಮೆ ಕೊಡಲು ಸಾಧ್ಯವಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ : ಯಾರು, ಏನು ಹೇಳಿದರು?
ಕಳೆದ ವರ್ಷ ನಡೆದಿದ್ದ ಡಿವೈ ಎಸ್ ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಮೂಲಕ ಮರುತನಿಖೆ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 5ರಂದು ಆದೇಶಿಸಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಜಾರ್ಜ್ ಅವರು ತನಿಖೆಗೆ ಸಹಕರಿಸಲು ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಂಕೆ ಗಣಪತಿ ಸಾವಿನ ಪ್ರಕರಣ ಸಿಬಿಐಗೆ, ಜಾರ್ಜ್ ಗೆ ನಡುಕ
ಈ ಹಿನ್ನೆಲೆಯಲ್ಲಿ, ಪ್ರತಿಕ್ರಿಯಿಸಿರುವ ಜಾರ್ಜ್, ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಆದರೆ, ಸಿಬಿಐ ತನಿಖೆ ನಡೆಸಲಿದೆ ಎಂಬ ಕಾರಣಕ್ಕಾಗಿ ಸಚಿವ ಸ್ಥಾನ ತೊರೆಯಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರು ಹೇಳಿದ ಕೂಡಲೇ ರಾಜಿನಾಮೆ ಸಲ್ಲಿಸಲು ಆಗದು ಎಂದು ಹೇಳಿದರು.
ಈ ಹಿಂದೆ, ಸಿಐಡಿಯು ಇದೇ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ತನಿಖೆಗೆ ಸಹಕರಿಸಿದ್ದೆ. ಈಗ ಮತ್ತೆ ರಾಜಿನಾಮೆ ಕೊಡುವ ಅಗತ್ಯವಿಲ್ಲ ಎಂದು ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡರು.