ಹೆತ್ತ ಮಕ್ಕಳನ್ನೇ ಕೊಂದಿದ್ದ ಆರೋಪಿ ಬಂಧನ
ಹೆತ್ತ ಮಕ್ಕಳನ್ನೇ ಅಮಾನುಷವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೋಲಿಸರು ಬಂಧಿಸಿದ್ದಾರೆ.
ಬೆಂಗಳೂರು, ನವೆಂಬರ್, 18: ಹೆಂಡತಿ ಮೇಲಿನ ಕೋಪಕ್ಕೆ ಹೆತ್ತ ಮಕ್ಕಳನ್ನೇ ದಾರುಣವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಕೋಣನಕುಂಟೆ ಸಮೀಪ ಬೀರೇಶ್ವರ ನಗರದಲ್ಲಿ ಬುಧವಾರ (ನ.16) ದಂದು ಸತೀಶ್ (35) ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿ ತನ್ನ ಸ್ವಂತ ಮಕ್ಕಳನ್ನೇ ಕೊಲೆ ಮಾಡಿ ಪರಾರಿಯಾಗಿದ್ದ. [ಚಿಕನ್ ಮಾಡದ ಹೆಂಡ್ತಿ ಮೇಲಿನ ಕೋಪಕ್ಕೆ ಮಕ್ಕಳನ್ನು ಕೊಂದ ತಂದೆ]
ಪುಟ್ಟ ಮಕ್ಕಳಾದ ಆದಿತ್ಯ (4) ಮತ್ತು ಶಿವಶಂಕರ್ (5) ಮೃತ ದುರ್ದೈವಿಗಳು. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಸತೀಶ್ ಗಾಗಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದ್ದರು.
ಬೀರೇಶ್ವರ ನಗರ ಬಳಿಯ ಖಾಲಿಜಾಗವೊಂದರಲ್ಲಿ ಪಾನಮತ್ತನಾಗಿ ಮಲಗಿದ್ದ ಸತೀಶ್ ನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಸತೀಶ್ ರಕ್ತ ಸಿಕ್ತ ಬಟ್ಟೆಯಲ್ಲೇ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸತೀಶ್ ಬೀದರ್ ಮೂಲದವನಾಗಿದ್ದು, ಕನಕಪುರ ಮೂಲದ ಜ್ಯೋತಿ ಎಂಬುವವರನ್ನು 7 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ.
ಸತೀಶ್ ಪತ್ನಿ ಜ್ಯೋತಿ ಅವರು ಬುಧವಾರ ಬೆಳಿಗ್ಗೆ 8 ಗಂಟೆಗೆ ಮಕ್ಕಳಿಬ್ಬರನ್ನು ಅಂಗನವಾಡಿಗೆ ಬಿಟ್ಟು, ಮನೆಗೆಲಸಕ್ಕೆ ಹೋಗಿದ್ದರು. ಈ ವೇಳೆ ಸತೀಶ್ ಮಕ್ಕಳನ್ನು ಅಂಗನವಾಡಿಯಿಂದ ಕರೆದುಕೊಂಡು ಬಂದಿದ್ದ.
ಬಾಗಿಲು ಹಾಕಿ ಮಕ್ಕಳನ್ನು ಥಳಿಸಿರುವ ಆರೋಪಿ, ಆದಿತ್ಯನನ್ನು ಎತ್ತಿ ಗೋಡೆಗೆ ಎಸೆದಿದ್ದ. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಆದಿತ್ಯ ಸ್ಥಳದಲ್ಲೇ ಮೃತಪಟ್ಟಿದ್ದ. ನಂತರ ಕುತ್ತಿಗೆ ಹಿಸುಕಿ ಶಿವಶಂಕರ್ ನನ್ನು ಸಹ ಕೊಂದು ಸ್ಥಳದಿಂದ ಕಾಲ್ಕಿತ್ತಿದ್ದ.