ಓವರ್ ಡೋಸ್ ಔಷಧ ಸೇವನೆಗೆ ನಿತ್ಯ ಇಬ್ಬರು ಬಲಿ
ಬೆಂಗಳೂರು, ಮಾರ್ಚ್ 23: ಭಾರತದಲ್ಲಿ ತಪ್ಪಾಗಿ ಅಥವಾ ಅತಿಯಾದ ಔಷಧ ಸೇವನೆಯಿಂದ ಪ್ರತಿನಿತ್ಯ ಇಬ್ಬರು ಸಾವಿಗೀಡಾಗುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
ಕೇಂದ್ರ ಸರ್ಕಾರದ ಗೃಹ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಈ ವಿಷಯವನ್ನು ಬಹಿರಂಗಪಡಿಸಿದ್ದು, ಜನರು ಅಥವಾ ರೋಗಿಗಳು ತಮಗೆ ಅರಿವಿಲ್ಲದೆ ತಪ್ಪಾಗಿ ಅಥವಾ ಅಗತ್ಯಕ್ಕಿಂತ ಹೆಚ್ಚು ಪ್ರಮಾಣ ಔಷಧವನ್ನು ಸೇವಿಸಿ ನಿತ್ಯ ಇಬ್ಬರು ಸಾವಿಗೀಡಾಗುತ್ತಿದ್ದಾರೆ ಎನ್ನುವ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ.
ಬೆಂಗಳೂರಿನಲ್ಲಿ ತೆರಿಗೆ ಕಟ್ಟಿ ಸಿಕ್ಕಿಬಿದ್ದ ಡ್ರಗ್ಸ್ ದಂಧೆಕೋರ
ಸರ್ಕಾರಕ್ಕೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ದಿನನಿತ್ಯ ಇಬ್ಬರು ಸಾವಿಗೀಡಾಗುತ್ತಿದ್ದರೂ ಈ ರೀತಿಯ ಅನೇಕ ಪ್ರಕರಣಗಳು ಆಸ್ಪತ್ರೆಯ ಆಡಳಿತ ಮಂಡಳಿ ಅಥವಾ ಸರ್ಕಾರಕ್ಕೆ ಗೊತ್ತಾಗದೆ ಅಥವಾ ವರದಿಯಾಗದೆ ಹೋಗುತ್ತಿವೆ ಎಂದೂ ಕೂಡ ಕೇಂದ್ರ ಸರ್ಕಾರದ ವರದಿ ತಿಳಿಸಿದೆ.
ಮನೋರೋಗ ತಜ್ಞ ಡಾ. ಎ. ಜಗದೀಶ್ ಅವರು ಹೇಳುವ ಪ್ರಕಾರ ಅತಿಯಾದ ಡೋಸ್ ಹಾಗೂ ವೈದ್ಯರ ಸಲಹೆ ಇಲ್ಲದೆ ಔಷಧಗಳನ್ನು ಸೇವಿಸುವುದು ಒಂದು ಕಡೆಯಾದರೆ ಜನರಿಗೆ ಮಾಹಿತಿ ಇದ್ದೇ ನಿದ್ರೆ ಮಾತ್ರೆಗಳನ್ನು ಸೇವಿಸಿ ಸಾವಿಗೀಡಾಗುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಇನ್ನು ಕೆಲವರು ಮಾದಕ ದ್ರವ್ಯಗಳ ವ್ಯಸನಿಗಳಾಗಿ ಔಷಧವನ್ನು ಮಾದಕ ದ್ರವವ್ಯವಾಗಿ ಸೇವನೆ ಮಾಡುವುದರಿಂದ ಸಾವಿಗೀಡಾಗುತ್ತಿದ್ದಾರೆ ಎನ್ನುವ ಕಳವಳ ವ್ಯಕ್ತವಾಗಿದೆ.
ಆದರೆ ಇಂತಹ ವ್ಯಕ್ತಿಗಳನ್ನು ಪತ್ತೆ ಮಾಡುವುದೇ ಬಹುದೊಡ್ಡ ಸವಾಲಾಗಿದೆ. ಇತ್ತೀಚೆಗೆ ಬೆಂಗಳೂರಿನ ದಂಪತಿಗಳಿಬ್ಬರು ಸಾಕಷ್ಟು ತಿಳಿವಿಳಿಕೆ ಇದ್ದರೂ, ಕಾರಣಾಂತರಗಳಿಂದ ತಮ್ಮ ಪುತ್ರ ಅತಿಯಾದ ಧೂಮಪಾನ ಸೇವನೆಗೆ ದಾಸನಾಗಿರುವ ಕುರಿತಂತೆ ವೈದ್ಯರ ಬಳಿ ಚಿಕಿತ್ಸೆಗೆ ಬಂದಾಗ ಆತ ಸಿಗರೇಟ್ ಬದಲಾಗಿ ಮಾದಕ ದ್ರವ್ಯ ವ್ಯಸನಿ ಎನ್ನುವ ವಿಷಯ ಬೆಳೆಕಿಗೆ ಬಂದಿತ್ತು. ಇಂತಹ ಪ್ರಕರಣಗಳಲ್ಲಿ ವೈದ್ಯರ ಸಲಹೆ ಜತೆಗೆ ತಂದೆ-ತಾಯಿಗಳು ಮಕ್ಕಳ ಮೇಲೆ ನಿರಂತರ ನಿಗಾ ಇರಿಸಿ, ಅವರ ಮೇಲೆ ಕಾಳಜಿ ತೋರುವುದು ಅಗತ್ಯವಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಕೇಂದ್ರ ಗೃಹ ಇಲಾಖೆ ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 2358 ಜನರು ಓವರ್ ಡೋಸ್ ಔಷಧ ಸೇವನೆಯಿಂದ ಸಾವಿಗೀಡಾಗಿದ್ದಾರೆ. 2014 ರ ಜನವರಿ 1 ರಿಂದ 2016 ರ ಡಿಸೆಂಬರ್ 31 ರವರೆಗೆ ದೇಶದಲ ಐದು ರಾಜ್ಯಗಳಲ್ಲಿ ಶೇ.53 ರಷ್ಟು ಸಾವಿನ ಪ್ರಕರಣಗಳು ಅತಿಯಾದ ಔಷಧ ಸೇವನೆಯಿಂದ ಸಂಭವಿಸಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಪಂಜಾಬ್ನಲ್ಲಿ ಅತಿ ಹೆಚ್ಚು ಪ್ರಕರಣಗಳು ಅಂದರೆ 468 ದಾಖಲಾಗಿದೆ, ತಮಿಳುನಾಡಿನಲ್ಲಿ 348 ಜನರು ಸಾವಿಗೀಡಾಗಿದ್ದಾರೆ. ಕರ್ನಾಟಕ ರಾಜ್ಯ ದೇಶದಲ್ಲೇ ಕೊನೆಯ ಸ್ಥಾನದಲ್ಲಿದ್ದು 39ಮಂದಿ ಪ್ರಾನವನ್ನು ಕಳೆದುಕೊಂಡಿದ್ದಾರೆ. ಇದರ ಜತೆಗೆ ಆತ್ಮಹತ್ಯೆಗೆ ಶರಣಾದ 12 ಪ್ರಕರಣಗಳು ಕೂಡ ಮದ್ಯ ಹಾಗೂ ಔಷಧ ಸೇವನೆಯಿಂದ ಸಂಭವಿಸಿದೆ ಎಂದು ತಿಳಿದುಬಂದಿದೆ.