ಕುಡಿಯುವ ನೀರಿಗಾಗಿ 350ಕೋಟಿ ಬಿಡುಗಡೆ: ಕಾಗೋಡು
ಬೆಂಗಳೂರು, ಜನವರಿ 10: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಗಂಭೀರ ಪರಿಸ್ಥಿತಿ ಎದುರಾಗಬಹುದೆಂದು ಅಂದಾಜಿಸಲಾಗಿದೆ, ಕುಡಿಯುವ ನೀರು ಸರಬರಾಜಿಗೆ ಮೊದಲ ಆದ್ಯತೆ ನೀಡಿರುವ ಸರ್ಕಾರ ಇದಕ್ಕೆ 350 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.
ಬರ ಅಧ್ಯಯನಕ್ಕೆ ಸಚಿವರ ನಾಲ್ಕು ತಂಡಗಳು ತೆರಳಿದ್ದು, ಅಧ್ಯಯನ ಮುಗಿದಿದೆ. ವರದಿ ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದ ಸಚಿವರು, ಬರದಿಂದ ರಾಜ್ಯದಲ್ಲಿ ಸುಮಾರು ಮೂರು ಸಾವಿರ ಕೋಟಿ ರೂ. ನಷ್ಠ ಆಗಿದೆ. ಕೇಂದ್ರದಿಂದ ರೂ. 1754 ಕೋಟಿ ಬಂದಿದ್ದು, ಇನ್ನೂ 900 ಕೋಟಿ ರೂ. ಹಣ ನೀರಿಕ್ಷಿಸಲಾಗಿದೆ ಎಂದರು.[ಸುಡುತ್ತಿದೆ ಕರ್ನಾಟಕ, ಬಾ ಮಳೆಯೇ ಬೇಗ ಬಾ..]
ನಮಗೆ ಬೆಳೆ ಪರಿಹಾರದ ಹಣ ಮೂರು ಸಾವಿರ ಕೋಟಿ ರೂ. ಆಗಿದ್ದು ರೈತರಿಗೆ ನಿಯಮಾವಳಿ ಪ್ರಕಾರ ಒಂದು ಹೆಕ್ಟೇರ್ ಪ್ರದೇಶಕ್ಕೆ 6350 ರೂ. ಪರಿಹಾರ ನೀಡಬೇಕಾಗುತ್ತದೆ ಎಂದ ಸಚಿವರು ಮುಂದಿನ ಮಾರ್ಚ್, ಏಪ್ರಿಲ್ ವೇಳೆಗೆ ಬೇಸಿಗೆ ಇನ್ನೂ ಗಂಭೀರವಾಗಲಿದ್ದು ಕುಡಿಯುವ ನೀರು ಪೂರೈಕೆಗಾಗಿಯೇ ನಮಗೆ 1500 ಕೋಟಿ ರೂ. ಹಣ ಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಪ್ರಸ್ತುತ ಭೀಕರ ಬರಗಾಲ ಆವರಿಸಿ ನದಿ,ಕೆರೆ,ಕಟ್ಟೆಗಳು ಆಗಲೇ ಬತ್ತಿವೆ ಇನ್ನು ಬೇಸಿಗೆ ಸಮಯದಲ್ಲಿ ಜನ, ಜಾನುವಾರುಗಳಿಗೆ ಹೇಗೆ ನೀರು ಮತ್ತು ಮೇವನ್ನು ಸರಕಾರ ಒದಗಿಲಿದೇ ಎಂಬದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.