ಹಳ್ಳಿಯಾದರೇನು ಶಿವಾ, ದಿಲ್ಲಿಯಾದರೇನು ಶಿವಾ! (ಗುಳೆ ಮಕ್ಕಳ ಕಥೆ)
ಮುಂಗಾರು ಕವಿದು ಒಂದೆರಡು ಹನಿ ಉದುರಿದರೆ ಸಾಕು... ಭೀಮಪ್ಪನ ಮನಸ್ಸು, ಹೃದಯ ಹೂವಾಗಿಬಿಡುತ್ತವೆ. ಮಳೆ ಹನಿಗಳು ನೆಲಕ್ಕೆ ತಾಗಿ ಮಣ್ಣಿನ ಸೊಗಡಿನ ವಾಸನೆ ಮೂಗಿಗೆ ಬಡಿಯುತ್ತಲೇ ತನ್ನೂರಿನ ಕರಿನೆಲದ ಸೊಗಡು ನೆನಪಾಗುತ್ತದೆ. ತನ್ನೂರಿನ ಕಡೆಗಿನ ಮೋಹವೊಂದು ಒಂದು ಕ್ಷಣದ ಮಟ್ಟಿಗಾದರೂ ಸೆಳೆದುಬಿಡುತ್ತದೆ.
''ಮೂರು ತಿಂಗಳೇ ಆಗ್ಯಾವ ಈ ಊರು ಸೇರಿ. ನಮ್ಮೂರಿನಾಗ ಛಲೋ ನೀರಿದಿದ್ರೆ ಈ ಬೆಂಗ್ಳೂರಂಥ ಮಾಯಾ ನಗರೀಗೆ ಬರುವಂಥ ಜರೂರತ್ತಾದ್ರೂ ಏನಿತ್ತು?'' - ಅಂತ ತನ್ನೊಳಗೇ ತಾನು ಒಂದು ನಿಡಿದಾದ ನಿಟ್ಟುಸಿರು ಬಿಡುತ್ತಾನೆ ಭೀಮಪ್ಪ. ಅಷ್ಟೇ ಅಲ್ಲ, ಊರಿನ ಕಡೆಗೆ ಕನಿಷ್ಟ ಪಕ್ಷ ಅಂಗಳಕ್ಕೆ ನೀರು ಹಾಕಿದ ರೀತಿಯಲ್ಲಿ ಮಳೆ ಬಂದರೂ ಸಾಕು ಓಡಿ ಹೋಗಿ ತನ್ನೂರಿನ ಒಡಲನ್ನು ಸೇರಿಕೊಳ್ಳೋಣ ಎಂಬ ಮಗು ಸಹಜ ಭಾವ ಆತನದ್ದು.
ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ದಿನವೊಂದಕ್ಕೆ ಗರಿಷ್ಠ 500 ರು. ಕೂಲಿ ಪಡೆಯುವ ಉತ್ತರ ಕರ್ನಾಟಕ ಮೂಲದ ಬಹುತೇಕರ ಕಥೆಯಿದು. ರಾಯಚೂರು, ಬಿಜಾಪುರ, ಬಾಗಲಕೋಟೆ ಮುಂತಾದ ಉತ್ತರ ಕರ್ನಾಟಕದಲ್ಲಿ ಬರ ಎನ್ನುವದು ಈಗ ಹ್ಯಾಟ್ರಿಕ್ ಬಾರಿಸಿದೆ.
ಕಳೆದೆರಡು ವರ್ಷಗಳೂ ಅಲ್ಲಿ ಆವರಿಸಿ, ಜನರನ್ನು ಕಂಗೆಡಿಸಿದ್ದ ಬರವೆಂಬೋ ಬರ ಈಗ ಮತ್ತೊಮ್ಮೆ ತನ್ನ ಕರಾಳ ಛಾಯೆ ಆವರಿಸಿಕೊಂಡು ಪವಡಿಸಿದೆ. ಅದರ ಪರಿಣಾಮ ನೀರಿಲ್ಲ, ನೆರಳಿಲ್ಲ. ಗದ್ದೆಗಳಂತೂ ಬರಡು ಭೂಮಿಗಳಂತೆ ಬಿರಿದಿದ್ದು, ಮರ ಗಿಡಗಳಲ್ಲಿ ಹಸಿರು ಮಾಯವಾಗಿದೆ.
ಇದರ ನೇರ ಪರಿಣಾಮವೇ ಗುಳೆ ಹೋಗುವುದು. ಹೌದು. ವಲಸೆ ಎನ್ನುವುದು ಉತ್ತರ ಕರ್ನಾಟಕದ ಜನರ ಇತ್ತೀಚಿನ ವರ್ಷಗಳ ಬದುಕಿನ ಅವಿಭಾಜ್ಯ ಅಂಗ. ಪ್ರತಿ ವರ್ಷವೂ ಅಲ್ಲಿನ ಸುಮಾರು 10 ಜಿಲ್ಲೆಗಳ ಜನರು ಬರದ ಬೇಗೆಯಲ್ಲಿ ಬೇಯುತ್ತಾರೆ. ಇವುಗಳಲ್ಲಿ ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳೂ ಸೇರಿವೆ.
ಗುಳೆಗೆ ಇದೇ ಕಾರಣ
ಮೊದಲೇ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಈ ಜಿಲ್ಲೆಗಳಲ್ಲಿನ ಈ ಜನರ ಪರಿಸ್ಥಿತಿ ಶೋಚನೀಯ. ನೀರಿನ ಕೊರೆತೆ ಜತೆಗೆ ಆಹಾರ ಕೊರತೆಯನ್ನೂ ಇಲ್ಲಿನ ಬಡ ಅನುಭವಿಸುತ್ತಾರೆ. ಹಾಗಾಗಿಯೇ, ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ, ತಮ್ಮ ಕುಲ ಕಸುಬು, ವೃತ್ತಿಗಳೆಲ್ಲವನ್ನೂ ಬಿಟ್ಟು ಅವರು ಗುಳೇ ಹೋಗುತ್ತಾರೆ.
ಉದರ ನಿಮಿತ್ತಂ ಬಹುಕೃತ ವೇಷಂ
ಮಹಾನಗರಗಳು ಮಾತ್ರವಲ್ಲ ಉದ್ಯೋಗದ ಅವಕಾಶ ನೀಡುವ ಯಾವುದಾದರೂ ನಗರ, ಪಟ್ಟಣ ಆದೀತು. ಒಟ್ಟಿನಲ್ಲಿ ಊರಿನಲ್ಲಿರುವ ತಮ್ಮ ಕುಟುಂಬದವರಿಗೆ ನಾಲ್ಕು ತುತ್ತು ನೀಡುವಂತಾದರೆ ಸಾಕು ಎನ್ನುತ್ತಾರೆ ಈ ಜನ. ಕೆಲವೊಮ್ಮ ಈ ಉದ್ಯೋಗನ್ವೇಷಣೆ ಅವರನ್ನು ಕರ್ನಾಟಕದ ಗಡಿಯನ್ನು ದಾಟಿ ಕೇರಳ, ತಮಿಳುನಾಡು, ಗೋವಾ, ಮುಂಬೈವರೆಗೂ ಕೊಂಡೊಯ್ಯುತ್ತವೆ.
ಶೇ. 10ರಷ್ಟು ಜನರು ವಲಸೆ
ಮೂಲಗಳ ಪ್ರಕಾರ, ಅಲ್ಲಿನ ಜನಸಂಖ್ಯೆಯ ಶೇ. 5ರಿಂದ 10ರಷ್ಟು ಜನರು ಅಲ್ಲಿ ಬರ ಆವರಿಸಿದ ತಕ್ಷಣ ಬೆಂಗಳೂರು ಸೇರಿದಂತೆ ನಾನಾ ಭಾಗಗಳ ಕಡೆಗೆ ಗುಳೆ ಬರುತ್ತಾರೆ. ಅಂದರೆ, ಏನಿಲ್ಲವೆಂದರೂ, ಸುಮಾರು 5 ಸಾವಿರ ಜನ ಹೀಗೆ ಗುಳೆ ಹೋಗುತ್ತಾರೆಂಬ ಮಾಹಿತಿಯಿದೆ.
ಹುಟ್ಟಿದೂರು ಬಿಟ್ಟು ತೆರಳುವ ನೋವು
ನಿಮಗೆ ನೆನಪಿರಲಿ... ತಾವು ಹುಟ್ಟಿ, ಬೆಳದ ವಾತಾವರಣವನ್ನು ತೊರೆದು ದುಡಿಮೆ, ಊಟಕ್ಕಾಗಿ ಊರೂರು ಅಲೆಯುವುದಿದೆಯಲ್ಲಾ ಅದಕ್ಕಿಂತ ಕೆಟ್ಟ ಪರಿಸ್ಥಿತಿ ಮತ್ತೊಂದಿಲ್ಲ.
ಇನ್ನು, ಬೆಳೆ ನಷ್ಟದ ಬಗ್ಗೆ ಏನಂತೀರಿ? ಮಳೆ ಕೈಕೊಟ್ಟಿದ್ದಕ್ಕೆ ವರ್ಷಕ್ಕೆರಡು ಬೆಳೆ ನಷ್ಟ. ಹೀಗಿರುವಾಗ, ಅಲ್ಲಿನ ಜನ ನೆಮ್ಮದಿಯಿಂದ ಬದಕುವುದಾದರೂ ಹೇಗೆ?ಬರದ ನಾಡಿನಲ್ಲೂ ಕೆಲವರದ್ದು ದುಡಿಮೆ!
ಜನ ಹೀಗೆ ಗುಳೆ ಹೋಗುವುದು, ಕೆಲವರಿಗೆ ಅನ್ನ ಹಾಕುವ ಮಾರ್ಗವೂ ಆಗಿದೆ. ಹೀಗೆ, ಅಲ್ಲಿನ ಜನರನ್ನು ಬೆಂಗಳೂರಿನಂಥ ಮಹಾನಗರಗಳಿಗೆ ಕರೆತಂದು ಕಟ್ಟಡ ಕಾಮಗಾರಿಗಳಲ್ಲಿ ಕೂಲಿಗಳಾಗಿ ಸೇರಿಸುವ ಅವರಿಗೆ ಇರಲು ಜಾಗವೊಂದನ್ನು ನೀಡುವ ಭರವಸೆಯೊಡ್ಡಿ ಅವರನ್ನು ಕರೆತಂದು ಈ ಮಾಯಾನಗರಿಯ ಮಡಿಲಿಗೆ ದೂಡುವುದನ್ನು ಕಸುಬಾಗಿಸಿಕೊಂಡಿರುವ ಕೆಲವರು ಉತ್ತರ ಕರ್ನಾಟಕದ ಹಳ್ಳಿಹಳ್ಳಿಗಳಿಗೆ ತಮ್ಮ ವಾಹನಗಳಲ್ಲಿ ತೆರಳಿ ಜಾಲಾಡುತ್ತಾರೆ. ಫೆಬ್ರವರಿ, ಮಾರ್ಚ್ ಬಂತೆಂದರೆ ಇವರ ವಾಹನಗಳು ಉತ್ತರ ಕರ್ನಾಟಕದ ಟಾರ್ ಇಲ್ಲದ ಹಳ್ಳಿಗಳಲ್ಲಿ ರೊಯ್ಯನೆ ಧೂಳೆಬ್ಬಿಸಿಕೊಂಡು ಓಡಾಡುತ್ತಿರುತ್ತವೆ.