ಬೊಮ್ಮನಹಳ್ಳಿಯ ಕೋಟ್ಯಧಿಪತಿ ಅಭ್ಯರ್ಥಿ ಚಾಯ್ ವಾಲ ಅನಿಲ್
ಬೆಂಗಳೂರು, ಏಪ್ರಿಲ್ 19: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೇರಳ ಮೂಲದ ಪಿ.ಅನಿಲ್ಕುಮಾರ್ ಅವರು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಕೇವಲ 3ನೇ ತರಗತಿ ಪಾಸಾಗಿರುವ ಅನಿಲ್ ಕುಮಾರ್ ಅವರು ನಾಮಪತ್ರದಲ್ಲಿ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 339 ಕೋಟಿ ರೂ. ಮೌಲ್ಯದ ಚಿರಾಸ್ತಿ, ಚರಾಸ್ತಿ ಘೋಷಿಸಿಕೊಂಡಿದ್ದಾರೆ. ಕೇರಳ ಮೂಲದ ಅನಿಲ್ಕುಮಾರ್ ಅವರು (43 ವರ್ಷ) ಸದ್ಯ ಸಿಂಗಸಂದ್ರದ ವೆಲ್ಲಿಂಗ್ಟೌನ್ನಲ್ಲಿ ವಾಸಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.
ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪರಿಚಯ
'ನಮ್ಮದು ಬಡ ಕುಟುಂಬ. ಚಿಕ್ಕ ವಯಸ್ಸಿನಲ್ಲೇ ತಂದೆ ನಮ್ಮನ್ನು ತೊರೆದು ಹೋದರು. ತಾಯಿ ಮನೆಗೆಲಸ ಮಾಡಿ, 4 ಮಕ್ಕಳನ್ನು ಪೋಷಿಸಿದರು. ಹೀಗಾಗಿ, ನಾನು 3ನೇ ತರಗತಿಯಲ್ಲೇ ವಿದ್ಯಾಭ್ಯಾಸ ತೊರೆದೆ. ಕೇವಲ 23 ರೂ.ಗಳಿಗೆ ಬ್ಯಾಗ್, ಪುಸ್ತಕಗಳನ್ನು ಮಾರಾಟ ಮಾಡಿ, 9ನೇ ವಯಸ್ಸಿನಲ್ಲಿ ಮನೆ ಬಿಟ್ಟು ಮುಂಬೈಗೆ ಓಡಿ ಹೋದೆ. ಅಲ್ಲಿ ಹೋಟೆಲ್ಗಳಲ್ಲಿ ಕೆಲಸ ಮಾಡಿದೆ. 11ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದೆ. ಮೊದಲಿಗೆ ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ಸೈಕಲ್ನಲ್ಲಿ ಟೀ, ಕಾಫಿ ಮಾರಾಟ ಮಾಡಿದೆ' ಎಂದು ಅನಿಲ್ಕುಮಾರ್ ಹೇಳಿದ್ದಾರೆ.
ಪ್ರಮಾಣಪತ್ರದಲ್ಲಿ ಏನೇನು ಮಾಹಿತಿ ಇದೆ?
ಚುನಾವಣಾ ಆಯೋಗಕ್ಕೆ ನಾಮಪತ್ರದೊಂದಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಪತ್ನಿ ಸಂಧ್ಯಾ ಮತ್ತು ಮಕ್ಕಳ ಹೆಸರಿನಲ್ಲಿ ಒಟ್ಟು 339 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. 48.5 ಎಕರೆ ಜಮೀನು, 12,95,848 ಚ.ಅಡಿ ವಿಸ್ತೀರ್ಣದ ಭೂಮಿ ಸೇರಿದಂತೆ ಒಟ್ಟು 333 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಆಸ್ತಿಯ ಮಾಲೀಕತ್ವ ಹೊಂದಿದ್ದಾರೆ. ಸಿಂಗಸಂದ್ರದಲ್ಲಿ ವಾಣಿಜ್ಯ ಸಮುಚ್ಚಯ, ಅಪಾರ್ಟ್ಮೆಂಟ್ ಇದೆ. ಅಲ್ಲದೇ 16 ಕಾರು, 17 ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಜೆಸಿಬಿ ಮತ್ತು ಟ್ಯಾಂಕರ್ ವಾಹನಗಳನ್ನು ಹೊಂದಿದ್ದಾರೆ. ವಾಹನಗಳ ಮೇಲೆ 2.28 ಕೋಟಿ ರೂ. ಸಾಲ ಕೂಡಾ ಇದೆ
ಬಡ ಕುಟುಂಬದಿಂದ ಬಂದಿರುವ ಅನಿಲ್
ನಮ್ಮದು ಬಡ ಕುಟುಂಬ. ಚಿಕ್ಕ ವಯಸ್ಸಿನಲ್ಲೇ ತಂದೆ ನಮ್ಮನ್ನು ತೊರೆದು ಹೋದರು. ತಾಯಿ ಮನೆಗೆಲಸ ಮಾಡಿ, 4 ಮಕ್ಕಳನ್ನು ಪೋಷಿಸಿದರು. ಹೀಗಾಗಿ, ನಾನು 3ನೇ ತರಗತಿಯಲ್ಲೇ ವಿದ್ಯಾಭ್ಯಾಸ ತೊರೆದೆ. ಕೇವಲ 23 ರೂ.ಗಳಿಗೆ ಬ್ಯಾಗ್, ಪುಸ್ತಕಗಳನ್ನು ಮಾರಾಟ ಮಾಡಿ, 9ನೇ ವಯಸ್ಸಿನಲ್ಲಿ ಮನೆ ಬಿಟ್ಟು ಮುಂಬೈಗೆ ಓಡಿ ಹೋದೆ. ಅಲ್ಲಿ ಹೋಟೆಲ್ಗಳಲ್ಲಿ ಕೆಲಸ ಮಾಡಿದೆ. 11ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದೆ. ಮೊದಲಿಗೆ ಬ್ಯಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ಸೈಕಲ್ನಲ್ಲಿ ಟೀ, ಕಾಫಿ ಮಾರಾಟ ಮಾಡಿದೆ.
15ನೇ ವಯಸ್ಸಿನಲ್ಲೇ ಮಾಸಿಕ 3 ಲಕ್ಷ ರು
ವಿಪ್ರೊ, ಕಿರ್ಲೋಸ್ಕರ್ ಕಂಪೆನಿಗಳಿಗೆ ಟೀ, ಕಾಫಿ ಪೂರೈಸುತ್ತಿದ್ದೆ. ಇದರಿಂದ 14-15ನೇ ವಯಸ್ಸಿನಲ್ಲೇ ಮಾಸಿಕ 3-4 ಲಕ್ಷ ರೂ. ಸಂಪಾದಿಸುತ್ತಿದ್ದೆ. ಹಣ ಗಳಿಸಿದ ಮೇಲೆ ಕೇರಳದಲ್ಲಿನ ಮನೆಗೆ ಹೋದೆ. 19ನೇ ವಯಸ್ಸಿನಲ್ಲಿ ವಧು ದಕ್ಷಿಣೆ ಕೊಟ್ಟು ಸಂಧ್ಯಾ ಅವರನ್ನು ವಿವಾಹವಾದೆ. ಆನಂತರ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೈ ಹಾಕಿದೆ.
ರಿಯಲ್ ಎಸ್ಟೇಟ್ ಉದ್ಯಮ ಕೈ ಹಿಡಿಯಿತು
ರಿಯಲ್ ಎಸ್ಟೇಟ್ ಉದ್ಯಮದಿಂದ ನನ್ನ ಅದೃಷ್ಟ ಬದಲಾಯಿತು. ಬಳಿಕ ಟೀ ಅಂಗಡಿಗಳನ್ನು ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಯುವಕರಿಗೆ ಬಿಟ್ಟುಕೊಟ್ಟೆ. ಎಂ.ಜೆ.ಇನ್ಫ್ರಾಸ್ಟ್ರಕ್ಚರ್ ಅಂಡ್ ಬಿಲ್ಡರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಿ, ಉದ್ಯಮಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.