ಬೆಂಗಳೂರಿನಲ್ಲಿ ಮುರುಘಾಶ್ರೀಗಳ ಅರ್ಥಪೂರ್ಣ ನಾಗರಪಂಚಮಿ
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಿದ ಶಿವಮೂರ್ತಿ ಮುರುಘಾ ಶರಣರು.
ಬೆಂಗಳೂರು, ಜುಲೈ 27: ನಾಗರ ಪಂಚಮಿಯಂದು ಹುತ್ತಕ್ಕೆ ಹಾಲು ಎರೆಯುವ ಬದಲು ಅದೇ ಹಾಲನ್ನು ಮಕ್ಕಳಿಗೆ, ರೋಗಿಗಳಿಗೆ ನೀಡಿದರೆ ಅದೇ ಸಾರ್ಥಕವಾದ ಪೂಜೆ ಎಂದು ಮುರುಘಾ ಶರಣರು ಅಭಿಪ್ರಾಯಪಟ್ಟರು.
ಲಿಂಗಾಯತ ಧರ್ಮ: 'ಒನ್ ಇಂಡಿಯಾ'ಕ್ಕೆ ಮುರುಘಾ ಶರಣರ ವಿಶೇಷ ಸಂದರ್ಶನ
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು, ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮಲ್ಲಿ ತಲತಲಾಂತರಗಳಿಂದಲೂ ನಾಗರ ಪಂಚಮಿಯಂದು ಹುತ್ತಕ್ಕೆ, ನಾಗರ ಕಟ್ಟೆಗಳಿಗೆ ಹಾಲೆರೆಯುವ ಪದ್ಧತಿಯಿದೆ. ಅಸಲಿಗೆ ಹುತ್ತದಲ್ಲಿರುವ ಹಾವು ಹಾಲು ಕುಡಿಯುವುದಿಲ್ಲ. ಇನ್ನು, ನಾಗರ ಕಟ್ಟೆಗೆ ಸುರಿವ ಹಾಲು ಚರಂಡಿ ಹೋಗುತ್ತದೆ. ಇದು ಮೌಢ್ಯ.
ಹಾಗೆ, ವ್ಯರ್ಥಗೊಳಿಸುವ ಹಾಲನ್ನು ಮಕ್ಕಳಿಗೆ, ರೋಗಿಗಳಿಗೆ ಅಥವಾ ಹಾಲಿನ ಅವಶ್ಯಕತೆಯಿರುವ ದುರ್ಬಲರಿಗೆ ಕೊಟ್ಟರೆ ಅವರಿಗೆ ಅದು ಅನುಕೂಲವಾಗುತ್ತದೆ. ನಾಗರ ಪಂಚಮಿ ಆಚರಣೆಯನ್ನು ಅರ್ಥಗರ್ಭಿತವಾಗಿಸಿದಂತಾಗುತ್ತದೆ.
ನಾಗರ ಪಂಚಮಿ ವೈಶಿಷ್ಟ್ಯ: ತಿಳಿಯಬೇಕಾದ 6 ಸಂಗತಿ
ನಾನು ಕಳೆದ 15 ವರ್ಷಗಳಿಂದಲೂ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನಾಗರ ಪಂಚಮಿಯಂದು ಹಾಲು, ಹಣ್ಣು ವಿತರಿಸುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ ಎಂದು ಶರಣರು ತಿಳಿಸಿದರು.
ಆಸ್ಪತ್ರೆಯಲ್ಲಿ ಹೀಗೆ ರೋಗಿಗಳಿಗೆ, ಮಕ್ಕಳಿಗೆ ಹಾಲು ವಿತರಿಸಿ ಶತಮಾನಗಳ ಮೌಢ್ಯತೆಯಿಂದ ಹೊರಬರಬೇಕು ಎಂದು ಶರಣರು ಇದೇ ವೇಳೆ ಕರೆ ನೀಡಿದರು.