ಆಡಳಿತದಲ್ಲಿ ಮೂಗುತೂರಿಸದಂತೆ ದೇವೇಗೌಡರಿಗೆ ಎಚ್ಡಿಕೆ ತಾಕೀತು?
Recommended Video
ಬೆಂಗಳೂರು, ಜೂನ್ 11: ಕರ್ನಾಟಕದ ಇತ್ತೀಚಿನ ರಾಜಕೀಯ ಪ್ರಹಸನದ ಸೂತ್ರಧಾರ ಯಾರು ಎಂದರೆ, ಯಾರಾದರೂ ಬೆರಳು ಮಾಡಿ ತೋರಿಸುವುದು ಎಚ್ ಡಿ ದೇವೇಗೌಡರನ್ನೇ! ಆದರೆ ಕೆಲವು ಮೂಲಗಳ ಪ್ರಕಾರ ಎಚ್ ಡಿ ದೇವೇಗೌಡ ಅವರಿಗೆ ಆಡಳಿತದಲ್ಲಿ ಮೂಗುತೂರಿಸಬೇಡಿ ಎಂದು ಸ್ವತಃ ಪುತ್ರ ಎಚ್ ಡಿ ಕುಮಾರಸ್ವಾಮಿ ತಾಕೀತು ಮಾಡಿದ್ದಾರೆ ಎನ್ನಲಾಗುತ್ತಿದೆ.
"ಸರ್ಕಾರದ ರಿಮೋಟ್ ಕಂಟ್ರೋಲ್ ದೇವೇಗೌಡರ ಬಳಿ ಇದೆ. ಎಲ್ಲಾ ನಿರ್ಧಾರಗಳೂ ಪದ್ಮನಾಭನಗರದಲ್ಲಿರುವ ಅವರ ಮನೆಯಲ್ಲಿಯೇ ನಿರ್ಣಯವಾಗುತ್ತವೆ" ಎಂದು ವಿಪಕ್ಷ ಬಿಜೆಪಿ ನಾಯಕರು ಪದೇ ಪದೇ ಆರೋಪ ಮಾಡುತ್ತಿರುವ ಕಾರಣ ಎಚ್ ಡಿ ದೇವೇಗೌಡರಿಗೆ ಪುತ್ರ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸರ್ಕಾರದ ವಿಷಯದಲ್ಲಿ ತಲೆಹಾಕದಂತೆ ಸೂಚನೆ ನೀಡಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.
ಕುಮಾರಸ್ವಾಮಿ ಸಂಪುಟದ ಖಾತೆ ಹಂಚಿಕೆ: ದೇವೇಗೌಡ್ರ ಮಾಸ್ಟರ್ ಮೈಂಡ್
ಆದ್ದರಿಂದಲೇ ಜೆಡಿಎಸ್ ನ ಯಾವುದೇ ಸಚಿವರೊಂದಿಗಾಗಲೀ, ಅಥವಾ ಇನ್ನ್ಯಾವುದೇ ಸರ್ಕಾರಿ ಅಧಿಕಾರಿಗಳೊಂದಿಗಗಲೀ ಎಚ್ ಡಿ ಡಿ ಸಂಪರ್ಕವನ್ನಿಟ್ಟುಕೊಂಡಿಲ್ಲ. ಕಳೆದ 10 ದಿನಗಳಿಂದ ಮನೆಯಿಂದ ಆಚೆ ಬಾರದ ಎಚ್ ಡಿಡಿ ನಡೆಯೂ ಈ ಮಾತು ಸತ್ಯ ಎಂಬುದಕ್ಕೆ ಪುಷ್ಠಿ ನೀಡಿದೆ.
ಜೂನ್ 09 ರಂದು ಮೃತರಾದ ಜೆಡಿಎಸ್ ನ ವಿಧಾನಪರಿಷತ್ ಸದಸ್ಯ ಸಯ್ಯದ್ ಮುದೀರ್ ಅಗಾ ಅವರ ಅಂತಿಮ ದರ್ಶನಕ್ಕೆಂದು ನಿನ್ನೆ ರಾಮನಗರಕ್ಕೆ ತೆರಳಿದ್ದು ಬಿಟ್ಟರೆ ಎಚ್ ಡಿಡಿ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಮನೆಯಿಂದ ಆಚೀಚೆ ಕದಲುತ್ತಿಲ್ಲ.
ಹಾಗೆ ಹೇಳುವುದಕ್ಕೆ ಹೋದರೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗಿಂತ ಹೆಚ್ಚು ಪ್ರಚಾರದಲ್ಲಿ ಪಾಲ್ಗೊಂಡಿದ್ದು ಎಚ್ ಡಿ ದೇವೇಗೌಡ. ತಮ್ಮ 86 ರ ಇಳಿ ವಯಸ್ಸಿನಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಶ್ರಮಿಸಿದ್ದಾರೆ. ಆದರೆ ಇದೀಗ ಪುತ್ರನ ಮಾತಿಗೆ ಬೆಲೆ ಕೊಟ್ಟು ಅವರು ಸುಮ್ಮನಿದ್ದಾರಾ? ಎಂಬುದು ಜೆಡಿಎಸ್ ನಾಯಕರಿಗೇ ಗೊತ್ತು!