ದೊಡ್ಡಬಳ್ಳಾಪುರ : ಕಸದಿಂದ ಕೈತುಂಬಾ ಸಂಪಾದನೆ!
ಕಸ ಕಸ ಕಸ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಇಂದು ತಲೆದೂರಿರುವ ಬೃಹತ್ ಸಮಸ್ಯೆಯೆಂದರೆ ಅದು ಕಸದ ನಿರ್ವಹಣೆಯ. ಬೃಹತ್ ಬೆಂಗಳೂರು ಮಹಾನಗರ ಸಹ ಇದಕ್ಕೆ ಹೊರತಾಗಿಲ್ಲ. ವರ್ಷದ ಹಲವು ಬಾರಿ ರಾಜ್ಯ ರಾಜಧಾನಿಯಲ್ಲಿ ಕಸದ ಸಮಸ್ಯೆ ತಲೆದೂರಿ ಬೆಂಗಳೂರಿಗರ ನಿದ್ದೆಗೆಡಿಸುತ್ತದೆ.
ಕಸದಿಂದ ಇಷ್ಟು ಸಮಸ್ಯೆ ಎದುರಾಗ್ತಿದ್ರು ಇದುವರೆಗೂ ಯಾವುದೇ ಸರಕಾರ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡುಕೊಂಡಿಲ್ಲ. ಆದರೆ ಇಲ್ಲೊಬ್ಬ ರೈತನಿದ್ದಾನೆ, ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಹಸಿ ಕಸವನ್ನು ತಂದು ಕೈ ತುಂಬಾ ದುಡ್ಡು ಮಾಡುತ್ತಿದ್ದಾನೆ. ಅಷ್ಟಕ್ಕೂ ಕಸದಿಂದ ಈತ ಮಾಡುತ್ತಿರುವುದಾದ್ರು ಏನು... ಯಾವ ರೀತಿ ಹಣ ಸಂಪಾದನೆ ಮಾಡುತ್ತಿದ್ದಾನೆ ಎಂದು ಆಶ್ಚರ್ಯವಾಗುತ್ತಿದೆಯಾ?
ತ್ಯಾಜ್ಯದಿಂದ ಆದಾಯ ಕಂಡುಕೊಂಡಿರುವಂತಹ ರೈತನ ಸಾಧನೆ ಕಂಡು ಬರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಹುಸ್ಕೂರು ಗ್ರಾಮದಲ್ಲಿ. ಗ್ರಾಮದ ಪ್ರಗತಿಪರ ರೈತ ಆನಂದ್ ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡಿರುವ ಬೃಹತ್ ಬಯೋಗ್ಯಾಸ್ ಉತ್ಪಾದನಾ ಘಟಕವಿದು.
ಬೃಹತ್ ಬೆಂಗಳೂರಿನ ಹಲವು ಹೋಟೆಲ್ಗಳು, ಕಲ್ಯಾಣ ಮಂಟಪಗಳು ಮತ್ತು ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಉತ್ಪಾದನೆಯಾಗುತ್ತಿರುವ ಹಸಿ ಕಸವನ್ನು ಸಂಗ್ರಹಿಸಿ ತಮ್ಮ ಪ್ಲಾಂಟ್ನಲ್ಲಿ ಬಯೋಗ್ಯಾಸ್ ಆಗಿ ಪರಿವರ್ತಿಸುತ್ತಿದ್ದಾರೆ. ದಿನಕ್ಕೆ 10 ಟನ್ ಕಸ ಸಂಗ್ರಹಿಸಿ ಇದರಿಂದ 600 ಕೆ.ಜಿ ಬಯೋಗ್ಯಾಸ್ ಉತ್ಪಾದನೆ ಮಾಡಿ ಹೋಟೆಲ್ಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಬೇಸಾಯ ಮಾಡಿಕೊಂಡಿದ್ದ ಆನಂದ್
ಆನಂದ್ ಸಹ ತಮ್ಮ ಗ್ರಾಮದಲ್ಲಿ ಎಲ್ಲಾ ರೈತರಂತೆ ಈ ಹಿಂದೆ ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಒಂದೊಮ್ಮೆ ಚೀನಾ ಪ್ರವಾಸಕ್ಕೆ ತೆರಳಿದ ಇವರು ಅಲ್ಲಿಯ ಕಸ ನಿರ್ವಹಣಾ ಘಟಕಗಳನ್ನು ನೋಡಿ ಪ್ರೇರೇಪಿತರಾಗಿದ್ದಾರೆ. ನಮ್ಮ ಸುತ್ತಮುತ್ತಲಿನ ಕಸವನ್ನು ಬಳಸಿಕೊಂಡು ಉತ್ತಮ ಲಾಭ ಪಡೆಯಬಹುದು ಎಂದು ಆಲೋಚಿಸಿದ್ದಾರೆ. ಅಂತೆಯೇ 2012 ರಲ್ಲಿ ಎರಡುವರೆಕೋಟಿ ಬಂಡವಾಳ ಹಾಕಿ ತಮ್ಮ 5 ಎಕರೆ ಜಮೀನಿನಲ್ಲಿ ಬಯೋಗ್ಯಾಸ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದ್ದಾರೆ.
ಒಂದು ಟನ್ಗೆ 250 ರೂಪಾಯಿ
ಸರಕಾರದ ಆದೇಶದಂತೆ ಆರಂಭದಲ್ಲಿ ಬಿಬಿಎಂಪಿ ಒಂದು ಟನ್ಗೆ 250 ರೂಪಾಯಿ ನೀಡಿ ಆನಂದ್ ಅವರ ಪ್ಲಾಂಟ್ಗೆ ಹಸಿ ಕಸವನ್ನು ನೀಡುತ್ತಿತ್ತು. ತದನಂತರದ ದಿನಗಳಲ್ಲಿ ಬಿಬಿಎಂಪಿ ಕಸ ನೀಡಲು ನಿರಾಕರಣೆ ಮಾಡಿದೆ. ಇದರಿಂದ ಕುಗ್ಗದ ಆನಂದ್ ಹೊಸಕೋಟೆ ಬಳಿಯಿರು ಸಫಲ್ ನಿಂದ, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕಲ್ಯಾಣ ಮಂಟಪಗಳಿಂದ ಹಸಿ ಕಸವನ್ನು ಸಂಗ್ರಹಿಸಿ ಗ್ಯಾಸ್ ಉತ್ಪಾದನೆ ಮಾಡುತ್ತಿದ್ದಾರೆ.
ಪ್ರಗತಿಪರ ರೈತ ಆನಂದ್
80 ಟನ್ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿರುವ ಈ ಪ್ಲಾಂಟ್ಗೆ ಸದ್ಯಕ್ಕೆ 10 ಟನ್ ಕಸ ಮಾತ್ರ ಸಿಗುತ್ತಿದ್ದು, ದಿನಕ್ಕೆ 400 ಕೆಜಿ ಬಯೋಗ್ಯಾಸ್ ತಯಾರು ಮಾಡುತ್ತಿದ್ದು, ಜೊತೆಗೆ ರೈತರಿಗೆ ಉಪಯೋಗವಾಗುವಂತೆ ಗೊಬ್ಬರ ಸಹ ಮಾಡುತ್ತಿದ್ದಾರೆ. ಇದರಿಂದ ತಿಂಗಳಿಗೆ 15 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಸರಿಯಾಗಿ ಕಸ ನಿರ್ವಹಣೆ ಮಾಡದ ಸಂಸ್ಥೆಗಳಿಗೆ ಕಸ ನೀಡುತ್ತಿರುವ ಬಿಬಿಎಂಪಿ ಕಸದಲ್ಲಿ ದೊಡ್ಡ ದಂಧೆ ಮಾಡುತ್ತಿದ್ದು, ನಮಗೆ ದಿನಕ್ಕೆ 80 ಟನ್ ಕಸ ನೀಡಲಿ ಪರಿಸರಕ್ಕೆ ಯಾವುದೇ ಹಾನಿಯಾಗದೆ ನಿರ್ವಹಣೆ ಮಾಡುತ್ತೇವೆ ಎನ್ನುತ್ತಿದ್ದಾರೆ ಪ್ರಗತಿಪರ ರೈತ ಆನಂದ್.
ಕಸದ ಸಮಸ್ಯೆ ದೂರಾಗಲಿದೆ
ಒಟ್ಟಾರೆ ಕಸದ ನಿರ್ವಹಣೆ ಮಾಡಲಾಗದೆ ಬಿಬಿಎಂಪಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂತಹ ಯೋಜನೆಗಳಿಗೆ ಸಹಾಯ ಹಸ್ತ ನೀಡಿದರೆ ಕಸದ ಸಮಸ್ಯೆ ದೂರವಾಗುವ ಸಾಧ್ಯತೆಗಳಿವೆ. ಇನ್ನಾದರು ಬಿಬಿಎಂಪಿ ಕಸದಲ್ಲಿ ದಂಧೆ ಮಾಡುವುದನ್ನು ನಿಲ್ಲಿಸಿ ದುಡಿಯುವ ಕೈಗಳಿಗೆ ಪ್ರೋತ್ಸಾಹ ನೀಡಲಿ. ಆನಂದ್ ನಂತಹ ಇನ್ನು ಹಲವು ಮಂದಿ ಇಂತಹ ಯೋಜನೆಗಳಿಗೆ ಕೈ ಹಾಕುವಂತಾಗಲಿ. ಮಾತ್ರವಲ್ಲ ಸರಕಾರ ಸಹ ಇಂತಹ ಯೋಜನೆಗಳನ್ನು ಕಾರ್ಯಗತಗೊಳಿಸಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿ ಎಂಬುದೇ ನಮ್ಮ ಆಶಯ..