ಅರಣ್ಯೀಕರಣ: 'ಹಸಿರುನಡೆ'ಯತ್ತ ದೊಡ್ಡಬಳ್ಳಾಪುರ ಯುವಕರ ಸಂಕಲ್ಪ
ದೊಡ್ಡಬಳ್ಳಾಪುರ, ಜೂನ್ 22: 'ಯುವ ಸಂಚಲನ' ತಂಡ ದೊಡ್ಡಬಳ್ಳಾಪುರದಲ್ಲಿ ಪರಿಸರ, ಯುವ ಜನತೆ, ಮಹಿಳೆ ಮತ್ತು ಸಾಮಾಜಿಕ ಬದಲಾವಣೆಗಾಗಿ ಕೆಲಸ ಮಾಡುತ್ತಿರುವ ಯುವಜನರೇ ಕಟ್ಟಿದ ಸಂಘಟನೆ. ಈ ತಂಡ ಪರಿಸರದ ಕಾಳಜಿಯನ್ನು ಸ್ಪುರಿಸುವ ಹಲವಾರು ಕಾರ್ಯಕ್ರಮಗಳನ್ನು ಕಳೆದ ಆರೇಳು ವರ್ಷಗಳಲ್ಲಿ ಹಮ್ಮಿಕೊಂಡಿದೆ. ಅದರಲ್ಲಿ ಪ್ರಮುಖವಾಗಿ ಅರಣ್ಯೀಕರಣದ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ವರ್ಷ ಹಲವು ಕಾಲೇಜು, ಇಲಾಖೆ, ಸಂಸ್ಥೆಗಳ ಜೊತೆ ಸೇರಿ 150 ಎಕರೆಗಳಷ್ಟು ಪ್ರದೇಶದಲ್ಲಿ ಸಸಿ ನೆಡುವ ಮೂಲಕ ಅರಣ್ಯೀಕರಣ ಕಾರ್ಯಕ್ರಮ ಮಾಡಿತ್ತು.
ಹಸಿರು ಬೆಂಗಳೂರಿಗಾಗಿ 'ಬಿಬಿಎಂಪಿ ಗ್ರೀನ್' ಆ್ಯಪ್, ನೀವೂ ಗಿಡ ನೆಡಿ
ಈ ವರ್ಷ ಅದೇ ಧ್ಯೇಯದೊಂದಿಗೆ ದೊಡ್ಡಬಳ್ಳಾಪುರದ 250 ಎಕರೆಗಳಷ್ಟು ಜಾಗವನ್ನು ಅರಣ್ಯೀಕರಣಗೊಳಿಸಲು ಪಣ ತೊಟ್ಟಿದೆ. ಈ ವರ್ಷದ ಮೊದಲ ಪ್ರಯತ್ನ 'ಹಸಿರು ನಡೆ ಸಾಮೂಹಿಕ ಅರಣ್ಯೀಕರಣ ಮಹೋತ್ಸವ' ಇದೇ 23 ಜೂನ್ ಶನಿವಾರ ಬೆಳಿಗ್ಗೆ 8 ಗಂಟೆಗೆ ದೊಡ್ಡಬಳ್ಳಾಪುರದ ಮಾಕಳಿದುರ್ಗದ ಅರಣ್ಯದಲ್ಲಿ ನಡೆಯಲಿದೆ. ಒಂದೇ ದಿನ 5 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ರೋಟರಿ ಕ್ಲಬ್, ಬೆಂಗಳೂರು ಹಾಗೂ ದೊಡ್ಡಬಳ್ಳಾಪುರದ ವಲಯ ಅರಣ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಹಾಗೂ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಇರುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿ ವ್ಯಕ್ತಿಗಳು 10 ಸಸಿಗಳನ್ನು ನೆಡಲೇಬೇಕು. ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ತರುವಂತಿಲ್ಲ.