ಇಂಜೆಕ್ಷನ್ ಕೊಟ್ಟು ತಾಯಿ, ತಂಗಿಯನ್ನು ಕೊಂದಿದ್ದ ವೈದ್ಯ ಅರೆಸ್ಟ್
ಬೆಂಗಳೂರು, ಡಿಸೆಂಬರ್ 5: ತಾಯಿ ಹಾಗೂ ತಂಗಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಬೆಂಗಳೂರಿನ ಆರ್ಆರ್ ನಗರದ ವೈದ್ಯ ಗೋವಿಂದ್ ಪ್ರಕಾಶ್ ನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಆರ್ ಆರ್ ನಗರ ಪೊಲೀಸರು ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಮೂಕಾಂಬಿಕಾ (75), ತಂಗಿ ಶ್ಯಾಮಲಾ (40)ಗೆ ಇಂಜೆಕ್ಷನ್ ಕೊಟ್ಟು ಹತ್ಯೆ ಮಾಡಿದ್ದಾನೆ. ನಂತರ ತಾನೂ ಚುಚ್ಚಿಕೊಂಡಿದ್ದಾನೆ.
ತಾಯಿ, ತಂಗಿಗೆ ಇಂಜೆಕ್ಷನ್ ಕೊಟ್ಟು ಕೊಲೆ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ ವೈದ್ಯ
ಗಾಯಾಳು ವೈದ್ಯನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಾ. ಗೋವಿಂದ ಪ್ರಕಾಶ್ ಡೆತ್ನೋಟ್ ಬರೆದಿಟ್ಟಿದ್ದು, ಅನಾರೋಗ್ಯದ ಕಾರಣದಿಂದ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿಕೊಂಡು ಸಾಯುತ್ತಿರುವುದಾಗಿ ತಿಳಿಸಿದ್ದಾನೆ. ಈತ ಬಿಜಿಎಸ್ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಎನ್ನಲಾಗಿದೆ.
ತಾಯಿ ಬಿಪಿ ಮತ್ತು ಶುಗರ್ ನಿಂದ ಬಳಲುತ್ತಿದ್ದರು. ಇತ್ತ ತಂಗಿಗೆ ಮದುವೆ ಆಗಿಲ್ಲ ಎನ್ನುವ ಚಿಂತೆ ಗೋವಿಂದರಾಜುವನ್ನು ಕಾಡುತ್ತಿತ್ತು. ಒಬ್ಬಳೇ ತಂಗಿಗೆ ಮದುವೆ ಮಾಡಲಿಲ್ಲ ಎಂದು ಜಿಗುಪ್ಸೆಗೆ ಒಳಗಾಗಿದ್ದರಂತೆ. ಇತ್ತ ಪತ್ನಿಯನ್ನು ಕಳೆದುಕೊಂಡಿದ್ದ ಗೋವಿಂದರಾಜುವಿಗೆ ಮಕ್ಕಳಿರಲಿಲ್ಲ. ಆರ್.ಆರ್.ನಗರದಲ್ಲಿ ಆಸ್ಪತ್ರೆ ತೆರೆದು ಜೀವನ ನಡೆಸುತ್ತಿದ್ದರೂ, ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿತ್ತು. ಇದೀಗ ಡಾ ಗೋವಿಂದ್ ಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ.