ಸಿದ್ದರಾಮಯ್ಯ ಸಿಎಂ ಆಗಲು ಐದು ವರ್ಷ ಕಾಯಬೇಕು: ಡಿಕೆಶಿ ಟಾಂಗ್
ಬೆಂಗಳೂರು, ಆಗಸ್ಟ್ 29: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲು ಇನ್ನು 4 ವರ್ಷ ಏಳು ತಿಂಗಳು ಕಾಯಬೇಕು ಅಲ್ಲಿಯವರೆಗೆ ಎಚ್ಡಿ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸಚಿವ ಡಿಕೆ ಶಿವಕುಮಾರ್ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್ಡಿ ಕುಮಾರಸ್ವಾಮಿಯವರನ್ನು ಐದು ವರ್ಷದ ಅವಧಿಗೆ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಆ ಪೈಕಿ ಈಗಾಗಲೇ ಮೂರು ತಿಂಗಳು ಮುಗಿದಿದೆ.
'ಕುಮಾರಸ್ವಾಮಿಯನ್ನು ಇಳಿಸುವ ತನಕ ಸಿದ್ದರಾಮಯ್ಯಗೆ ಸಮಾಧಾನವಿಲ್ಲ'
ಹೀಗಾಗಿ ಇನ್ನು ನಾಲ್ಕು ವರ್ಷ ಏಳು ತಿಂಗಳು ಅವರು ಕಾಯಲೇ ಬೇಕಾಗುತ್ತದೆ. ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿಯಾದರೆ ನನ್ನ ಅಭ್ಯಂತರವೇನು ಇಲ್ಲ ಆದರೆ ಐದು ವರ್ಷ ಕಾಯಲೇ ಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ ಆಗಬಾರದು ಎಂದೇನಿಲ್ಲ, ಆದರೆ ಈಗ ಸಮ್ಮಿಶ್ರ ಸರ್ಕಾರವಿದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ ಅವರ ಆಡಳಿತವನ್ನೂ ನೋಡೋಣ ಎಂದು ಹೇಳಿದರು.
ಮತ್ತೆ ಮುಖ್ಯಮಂತ್ರಿಯಾಗುತ್ತೇನೆಂದು ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ
ಇತ್ತೀಚೆಗೆ ಹಾಸನದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಸಿದ್ದರಾಮಯ್ಯ ಅವರು ಮಾತನಾಡುತ್ತಾ ನಾನು ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದರು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ನಾನು 2022ಕ್ಕೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದು ಎಂದು ಅವರ ಮಾತಿನಿಂದ ನುಣುಚಿಕೊಂಡಿದ್ದರು.