ಮೈತ್ರಿ ಸರ್ಕಾರದ ಭಿನ್ನಾಭಿಪ್ರಾಯದ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಜೂನ್ 29: 'ನಾವೆಲ್ಲ ಒಂದೇ ದೋಣಿಯಲ್ಲಿ ಪ್ರಯಾಣಿಸುತ್ತಿದ್ದೇವೆ. ಆದ್ದರಿಂದ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳಬೇಕು' ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಬಜೆಟ್ ಮಂಡನೆ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಭಿನ್ನಾಭಿಪ್ರಾಯ ಎದ್ದಿದ್ದು, ಈ ಕುರಿತು ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು.
ಎಚ್ಡಿಕೆ-ಸಿದ್ದರಾಮಯ್ಯ ಜಟಾಪಟಿ: ಡಿಕೆಶಿ ಏನಂತಾರೆ?
ನಾವೆಲ್ಲ ಒಂದೇ ದೋಣಿಯಲ್ಲಿ ಪ್ರಯಾಣಿಸುತ್ತಿದ್ದೇವೆ. ಪರಿಸ್ಥಿತಿಯನ್ನು ಅರಿತು ಹೊಂದಾಣಿಕೆಯಿಂದ ಮುಂದೆ ಸಾಗಬೇಕು. ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ಅಧ್ಯಕ್ಷರನ್ನಾಗಿ ಒಮ್ಮತದಿಂದ ನೇಮಿಸಲಾಗಿದೆ. ಆದ್ದರಿಂದ ಅವರ ಅಧ್ಯಕ್ಷತೆಯಲ್ಲೇ ಈ ವ್ಯವಸ್ಥೆಯನ್ನು ನಾವು ಮುನ್ನಡೆಸಬೇಕು ಎಂದು ಅವರು ಹೇಳಿದರು.
ಹೊಸ ಮೈತ್ರಿ ಸರ್ಕಾರದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಜೆಡಿಎಸ್ ಮುಂದಾಗಿದ್ದರೆ, ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ಬಜೆಟ್ ಅನ್ನೇ ಮುಂದುವರಿಸಿ, ಪೂರಕ ಬಜೆಟ್ ಮಂಡಿಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಇದನ್ನೇ ಹೇಳಿದ್ದರು.
ಈ ವಿಷಯ ಜೆಡಿಎಸ್-ಕಾಂಗ್ರೆಸ್ ನಡುವಲ್ಲಿ ಮತ್ತೆ ಭಿನ್ನಾಭಿಪ್ರಾಯ ಸೃಷ್ಟಿಸಿತ್ತು. ಈ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, 'ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಸರ್ಕಾರ ಐದು ವರ್ಷ ಇರುವುದು ಅನುಮಾನ' ಎಂದಿದ್ದ ವಿಡಿಯೋವೊಂದು ಹರಿದಾಡಿ ವೈರಲ್ ಆಗಿತ್ತು.