ಇನ್ನೂ ಶಮನವಾಗದ ಡಿ.ಕೆ.ಶಿವಕುಮಾರ್ ಅಸಮಾಧಾನ
Recommended Video
ಬೆಂಗಳೂರು, ಮೇ 25: ಉಪ ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೇಲೆ ಮುನಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರ ಅಸಮಾಧಾನ ಇನ್ನೂ ಶಮನವಾಗಿಲ್ಲ.
ಇಂದು ವಿಧಾನಸೌಧದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕರ ಸಭೆಗೆ ತಡವಾಗಿ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, 'ಬೆಳಿಗ್ಗೆ ಏಳುವುದು ತಡವಾಯಿತು ಹಾಗಾಗಿ ತಡವಾಗಿ ಸಭೆಗೆ ಆಗಮಿಸುತ್ತಿದ್ದೇನೆ' ಎಂದು ಹಾರಿಕೆ ಉತ್ತರ ನೀಡಿದರು.
ಇಷ್ಟು ದಿನಗಳ ಕಾಲ ಹಲಗು ಇರುಳು ಒಂದು ಮಾಡಿ ಸಮ್ಮಿಶ್ರ ಸರ್ಕಾರದ ಉಳಿವಿಗೆ ಶ್ರಮಿಸಿದ ಡಿಕೆ ಶಿವಕುಮಾರ್ ಇಂತಹಾ ಮಹತ್ವದ ದಿನದಲ್ಲಿ 'ತಡವಾಗಿ ಏಳುವುದು' ಎಂದರೆ ನಂಬಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.
'ಸರ್ಕಾರ ಉಳಿಯಬೇಕು ಎಂದರೆ ಒಗ್ಗಟ್ಟಾಗಿ ಇರಲೇ ಬೇಕಿದೆ ಎಂದ ಅವರು, ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುವ ನಿರ್ಧಾರ ಒಳ್ಳೆಯದೇ ಆಗಿರುತ್ತದೆ, ಅಧಿಕಾರ ಹುಡುಕಿಕೊಂಡು ಬರುತ್ತದೆ ಬಿಡಿ' ಎಂದು ಬೇಸರಯುಕ್ತ ಧನಿಯಲ್ಲೇ ಉತ್ತರಿಸಿ ಸಭೆಗೆ ನಡೆದರು ಡಿ.ಕೆ.ಶಿವಕುಮಾರ್.
ವಿಶ್ವಾಸಮತ ಯಾಚನೆಗೂ ಮುನ್ನಾ ಕಾಂಗ್ರೆಸ್ ನಡೆಸುತ್ತಿರುವ ಮಹತ್ವದ ಸಭೆ ಇದಾಗಿದ್ದು, ತಡವಾಗಿ ಆಗಮಿಸುವ ಮೂಲಕ ಒತ್ತಡದ ತಂತ್ರವನ್ನು ಡಿ.ಕೆ.ಶಿವಕುಮಾರ್ ಅನುಸರಿಸಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಲು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್ ಅವರು, ವಿಶ್ವಾಸಮತ ಗಳಿಸಲು ಬಿಜೆಪಿ ಮಾಡಿದ್ದ ಎಲ್ಲ ತಂತ್ರಗಳನ್ನು ನುಚ್ಚು ನೂರು ಮಾಡಿ ಎರಡೂ ಪಕ್ಷದ ಶಾಸಕರನ್ನು ಜಾಗರೂಕತೆಯಿಂದ ವಿಶ್ವಾಸಮತದ ವರೆಗೆ ಕರೆತಂದಿದ್ದರು. ಅಂತಹರೇ ಇಂದು ತಡವಾಗಿ ಆಗಮಿಸುವ ಮೂಲಕ ತಾವು ಪಕ್ಷದ ಮೇಲೆ ಮುನಿಸಿಕೊಂಡಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಪಕ್ಷಕ್ಕಾಗಿ ಹಲವು ರೀತಿಯಲ್ಲಿ ದುಡಿದಿರುವ ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿದ್ದರು. ಆದರೆ ಹುದ್ದೆ ಕೈತಪ್ಪಿ ಪರಮೇಶ್ವರ್ ಅವರ ಪಾಲಾದಾಗಿನಿಂದಲೂ ಅಸಮಾಧಾನಗೊಂಡಿದ್ದರು. ಅದನ್ನು ಬಹಿರಂಗವಾಗಿ ಹೊರ ಹಾಕಿದ್ದರೂ ಕೂಡ.
ಮೊನ್ನೆ ನಡೆದ ಪ್ರಮಾಣ ವಚನ ಕಾರ್ಯಕ್ರಮದ ದಿನ ಕೂಡ ಬೆಳಿಗ್ಗೆಯಿಂದಲೂ ಯಾರ ಕೈಗೂ ಸಿಗದೇ ಕಾಣೆಯಾಗಿದ್ದರು ಆದರೆ ನಂತರ ಕಾರ್ಯಕ್ರಮದ ವೇಳೆಗೆ ಪ್ರತ್ಯಕ್ಷವಾಗಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು.