ರೇವಣ್ಣ ವಿರುದ್ಧ ಡಿಕೆಶಿ ಗರಂ: ಸಿಎಂ ಮುಂದೆ ಆಕ್ರೋಶ
Recommended Video
ಬೆಂಗಳೂರು, ಜೂನ್ 14: ತಾವು ನಿರೀಕ್ಷಿಸಿದ ಖಾತೆ ಸಿಕ್ಕಲಿಲ್ಲವೆಂದು ಮೌನವಾಗಿಯೇ ಕತ್ತಿ ಮಸೆಯುತ್ತಿರುವ ಕಾಂಗ್ರೆಸ್ ನ ಆಪದ್ಬಾಂಧವ ಡಿ ಕೆ ಶಿವಕುಮಾರ್ ಅವರು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ವಿರುದ್ಧ ಗರಂ ಆಗಿದ್ದಾರೆ.
ತಮ್ಮ ಖಾತೆಯಲ್ಲಿ ಕೈಯಾಡಿಸುತ್ತಿರುವ ಎಚ್ ಡಿ ರೇವಣ್ಣ ಅವರ ವರ್ತನೆಗೆ ಬೇಸತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿ ತಮ್ಮ ಆಕ್ರೋಶವನ್ನು ಡಿ ಕೆ ಶಿವಕುಮಾರ್ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಒಂದೇ ದಿನ 51 ಎಂಜಿನಿಯರ್ಗಳ ವರ್ಗಾವಣೆ ಆದೇಶಕ್ಕೆ ಸಚಿವ ರೇವಣ್ಣ ಸಹಿ
ಸಚಿವ ಸಂಪುಟ ರಚನೆಯ ಸಮಯದಲ್ಲಿ ಎಚ್ ಡಿ ರೇವಣ್ಣ ಅವರು ಬೇಡಿಕೆ ಇಟ್ಟಿದ್ದ ಲೋಕೋಪಯೋಗಿ ಖಾತೆಯನ್ನೇ ಅವರಿಗೆ ನೀಡಲಾಗಿದೆ. ಆದರೆ ಡಿ ಕೆ ಶಿವಕುಮಾರ್ ಅವರಿಗೆ ನೀಡಲಾದ ಜಲಸಂಪನ್ಮೂಲ ಖಾತೆಯಲ್ಲಿ ರೇವಣ್ಣ ಅವರು ತಲೆಹಾಕಿರುವುದು ಡಿಕೆಶಿ ಅವರಿಗೆ ಇರಿಸುಮುರಿಸುಂಟು ಮಾಡಿದೆ.
ಜಲಸಂಪನ್ಮೂಲ ಇಲಾಖೆಯ ಅಡಿಯಲ್ಲಿ ಬರುವ ಕೆಲವು ಅಧಿಕಾರಿಗಳ ವರ್ಗಾವಣೆಗೆ, ಡಿಕೆಶಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಎಚ್ ಡಿ ರೇವಣ್ಣ ಅವರೇ ಆದೇಶ ನೀಡಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. 'ನನ್ನ ಖಾತೆಯಲ್ಲಿ ರೇವಣ್ಣ ಬೇಕೆಂದೇ ತಲೆ ಹಾಕುತ್ತಿದ್ದಾರೆ. ಇದು ಸರಿಯಲ್ಲ' ಎಂದು ಡಿಕೆಶಿ, ಕುಮಾರಸ್ವಾಮಿಯವರಿಗೆ ಕರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕೋಪಯೋಗಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಗಳಲ್ಲಿ 51 ಕ್ಕೂ ಹೆಚ್ಚು ಮುಖ್ಯ ಇಂಜಿನಿಯರ್ ಗಳನ್ನು ವರ್ಗಾವಣೆ ಮಾಡಿ ಸಚಿವ ರೇವಣ್ಣ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.