ಕಾಂಗ್ರೆಸ್ ಶಾಸಕಾಂಗ ಸಭೆಗೆ ಭಿನ್ನಮತೀಯರು ಗೈರು, ಇನ್ನೂ ಕರಗಿಲ್ಲ ಅತೃಪ್ತಿ
ಬೆಂಗಳೂರು, ಜುಲೈ 11: ಇಂದು ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ಸಚಿವ ಸ್ಥಾನ ಸಿಗದೇ ಅತೃಪ್ತಗೊಂಡಿರುವ ಶಾಸಕರು ಗೈರಾಗಿ ತಮ್ಮ ಅತೃಪ್ತಿ ಇನ್ನೂ ಶಮನಗೊಂಡಿಲ್ಲ ಎಂಬುದನ್ನು ಜಾಹೀರು ಮಾಡಿದ್ದಾರೆ.
ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ನ 79 ಶಾಸಕರ ಪೈಕಿ ಸಭೆಯಲ್ಲಿ ಭಾಗವಹಿಸಿದ್ದಿದ್ದು ಕೇವಲ 35 ರಿಂದ 40 ಶಾಸಕರಷ್ಟೆ. ಅದರಲ್ಲಿಯೂ ಅತೃಪ್ತ ಶಾಸಕರಂತೂ ಒಬ್ಬರೂ ಭಾಗವಹಿಸಿರಲಿಲ್ಲ.
ಯುವ ಕಾಂಗ್ರೆಸ್ನಿಂದ ಕೆಪಿಸಿಸಿ ತನಕ, ದಿನೇಶ್ ಗುಂಡೂರಾವ್ ಪರಿಚಯ
ಅತೃಪ್ತ ಶಾಸಕರ ನೇತೃತ್ವ ವಹಿಸಿದ್ದ ಎಂ.ಬಿ.ಪಾಟೀಲ, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು, ಎಚ್.ಕೆ.ಪಾಟೀಲ್ ಇವರುಗಳ್ಯಾರೂ ಇಂದಿನ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಇವರಷ್ಟೆ ಅಲ್ಲದೆ ತನ್ವೀರ್ ಸೇಠ್, ಹ್ಯಾರಿಸ್, ರೋಷನ್ ಬೇಗ್, ರಾಮಲಿಂಗಾ ರೆಡ್ಡಿ, ಎಂ.ಕೃಷ್ಣಪ್ಪ ಅವರಂತಹ ಪ್ರಭಾವಿ ಶಾಸಕರೂ ಸಹ ಇಂದಿನ ಸಭೆಯಲ್ಲಿ ಭಾಗವಹಿಸದೇ ಇದ್ದದ್ದು ಕುತೂಹಲ ಮೂಡಿಸಿದೆ.
ಚಿತ್ರಗಳು : ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅಧಿಕಾರ ಸ್ವೀಕಾರ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರು ಎಂಬಿ ಪಾಟೀಲ್ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ಆಡಿದ ಮೇಲೆ ಕಾಂಗ್ರೆಸ್ನಲ್ಲಿ ಅತೃಪ್ತಿ ಶಮನವಾಗಿದೆ ಎಂದೇ ಹೇಳಲಾಗಿತ್ತು. ಆದರೆ ಇಂದಿನ ಘಟನೆ ನೋಡಿದರೆ ಅತೃಪ್ತಿ ಇನ್ನೂ ಶಮನವಾಗಿಲ್ಲ ಎಂಬುದು ಎದ್ದು ಕಾಣುತ್ತಿದೆ.
ಹತ್ತಿರದಲ್ಲೇ ಸಂಪುಟ ವಿಸ್ತರಣೆ ನಡೆಯಲಿದ್ದು, ಆಗಲಾದರೂ ಸಚಿವ ಸ್ಥಾನ ಧಕ್ಕಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅತೃಪ್ತರು ಪರೋಕ್ಷವಾಗಿ ಈಗಿನಿಂದಲೇ ಒತ್ತಡ ಹಾಕುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗಿದೆ.