ಸಿದ್ದರಾಮಯ್ಯ ಔತಣಕೂಟದಲ್ಲಿ ಎಚ್ಡಿಕೆ ವಿರುದ್ಧ ಅಸಮಾಧಾನ ಸ್ಪೋಟ
ಬೆಂಗಳೂರು, ಆಗಸ್ಟ್ 02: ಸಿದ್ದರಾಮಯ್ಯ ಅವರು ನಿನ್ನೆ ಕಾಂಗ್ರೆಸ್ ಸಚಿವರಿಗಾಗಿ ಹಮ್ಮಿಕೊಂಡಿದ್ದ ಔತಣಕೂಟದಲ್ಲಿ ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ವಿರುದ್ಧ ಕಾಂಗ್ರೆಸ್ ಮಂತ್ರಿಗಳು ಅಸಮಾಧಾನ ಹೊರಹಾಕಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ಅಣತಿಯಂತೆಯೇ ನಡೆಯುತ್ತಿದೆ. ಅಧಿಕಾರಿಗಳ ವರ್ಗಾವಣೆ, ಬೇರೆ ಇಲಾಖೆಗೆ ಮೂಗು ತೂರಿಸುವುದು ಇವೆಲ್ಲವೂ ಸಾಮಾನ್ಯವಾಗಿಬಿಟ್ಟಿವೆ ಎಂದು ಕೆಲ ಸಚಿವರು ಸಿದ್ದರಾಮಯ್ಯ ಅವರ ಬಳಿ ದೂರಿದ್ದಾರೆ.
ದಿಢೀರ್ ಎಂದು ಔತಣಕೂಟ ಏರ್ಪಡಿಸಿದ ಸಿದ್ದರಾಮಯ್ಯ, ಕಾರಣವೇನು?
ಉಪಮುಖ್ಯಮಂತ್ರಿ ಪರಮೇಶ್ವರ್ ಸಹ ಇದನ್ನು ಒಪ್ಪಿದ್ದು, ಕಾಂಗ್ರೆಸ್ನ ಪ್ರತಿನಿಧಿಯಾಗಿ ನಾನು ಸರ್ಕಾರದಲ್ಲಿದ್ದೇನೆ ಆದರೆ ನನ್ನ ಗಮನಕ್ಕೆ ಬರದೇ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪರಮೇಶ್ವರ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರಮೇಶ್ವರ್ಗೂ ಅಸಮಾಧಾನ
ಕೆಲವು ನಿರ್ಣಯಗಳನ್ನು ನನಗೆ ಹೇಳದೇ ತೆಗೆದುಕೊಳ್ಳಲಾಗಿದೆ. ನಿರ್ಣಯಗಳು ತೆಗೆದುಕೊಂಡ ಮೇಲೆ ನಂತರ ನನಗೆ ಹೇಳಲಾಗುತ್ತಿದೆ ಕುಮಾರಸ್ವಾಮಿ ಅವರ ಬಳಿ ಈ ಬಗ್ಗೆ ಮಾತನಾಡಿದ್ದಾಗ್ಯೂ ಹೇಳಿರುವ ಪರಮೇಶ್ವರ್ ಅವರು ಆದರೂ ಸಹ ಇದು ನಿರಂತರವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಮುಂದೆ ದೂರುಗಳು ಸುರಿಮಳೆ
ಸಚಿವರ ದೂರುಗಳನ್ನು ಆಲಿಸಿದ ಸಿದ್ದರಾಮಯ್ಯ ಅವರು, ವರ್ಗಾವಣೆ ವಿಷಯಗಳನ್ನೂ ಸಹ ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡಬೇಕು ಎಂದು ಮೊದಲೇ ಷರತ್ತಾಗಿತ್ತು ಆದರೆ ಇದನ್ನು ಉಲ್ಲಂಘಿಸಲಾಗಿದೆ, ಕುಮಾರಸ್ವಾಮಿ ಮೈತ್ರಿ ಧರ್ಮ ಪಾಲಿಸುತ್ತಿಲ್ಲ, ಹಾಗಾಗಿ ಈ ಬಗ್ಗೆ ಶೀಘ್ರವೇ ಸಮನ್ವಯ ಸಮಿತಿ ಸಭೆ ಕರೆದು ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಉಸ್ತುವಾರಿ ನೇಮಕ ವಿಚಾರ ಚರ್ಚೆ
ಉಸ್ತುವಾರಿ ಸಚಿವರ ನೇಮಕ ವಿಚಾರದ ಬಗ್ಗೆಯೂ ಚರ್ಚೆ ನಡೆದಿದ್ದು, ಉತ್ತರ ಕರ್ನಾಟಕ ಭಾಗಕ್ಕೆ ಜೆಡಿಎಸ್ ಸಚಿವರನ್ನು ನೇಮಿಸಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ. ಜಮೀರ್ ಅವರು ಸಹ ತಮ್ಮನ್ನು ಹಾವೇರಿಯ ಉಸ್ತುವಾರಿ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮೈತ್ರಿಯಾ?
ಔತಣಕೂಟದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಬೇಕಾ ಎಂಬ ಬಗ್ಗೆಯೂ ಚರ್ಚೆ ನಡೆದಿದ್ದು, ಹಲವು ಸಚಿವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ
ಲೋಕಸಭೆ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದ್ದು, ಶಾಸಕರುಗಳಿಗೆ ವಿಶೇಷ ಜವಾಬ್ದಾರಿಗಳನ್ನು ನೀಡುವ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ.