ಕಾಂಗ್ರೆಸ್ನಲ್ಲಿ ನಾನೂ ಸೀನಿಯರ್ ಲೀಡರ್: ದಿನೇಶ್ ಗುಂಡೂರಾವ್
ಬೆಂಗಳೂರು, ಜೂನ್ 12: ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು ಎಂದು ಹೈಕಮಾಂಡ್ ನಿರ್ಧರಿಸುತ್ತದೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಿಶ್ಚಿತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಜಿ. ಪರಮೇಶ್ವರ್ ಡಿಸಿಎಂ ಜತೆಗೆ ಎರಡು ಪ್ರಮುಖ ಖಾತೆಗಳನ್ನು ವಹಿಸಿಕೊಂಡಿದ್ದಾರೆ, ಹೀಗಾಗಿ ಹೊಸಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿದೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಖಂಡಿತವಾಗಿ ನಿಭಾಯಿಸುತ್ತೇನೆ, ಹಿಂದೆನೂ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ ನಾನೂ ಪಕ್ಷದಲ್ಲಿ ಹಿರಿಯನೇ ಅಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾನೂ ಕೂಡ ಆಕಾಂಕ್ಷಿ ಎನ್ನುವುದನ್ನು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಹೊಸ ಹೆಸರುಗಳು ಸೇರ್ಪಡೆ!
ಐದು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದೇನೆ, ಹೀಗಿರುವಾಗ ನಾನು ಹೇಗೆ ಕಿರಿಯನಾಗುತ್ತೇನೆ, ನನ್ನ ಬಗ್ಗೆ ಪಕ್ಷದಲ್ಲಿ ಎಲ್ಲರಿಗೂ ತಿಳಿದಿದೆ. ನನಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷದ ಇತರೆ ನಾಯಕರು ಸಹಕಾರ ನೀಡುವುದಿಲ್ಲ ಎನ್ನುವ ಆತಂಕವಿಲ್ಲ, ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಪಕ್ಷವನ್ನು ಬಲಿಷ್ಠಗೊಳಿಸಬೇಕಿದೆ ಎಂದರು.
ಕೆಲವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸುತ್ತಿರಬಹುದು ಅದು ಅವರವರ ಪ್ರಯತ್ನ ಅದನ್ನು ತಪ್ಪು ಎಂದು ನಾನು ಹೇಳುವುದಿಲ್ಲ ಎಂದರು.