ಬಲಪಂಥೀಯ ಉಗ್ರರಿಗೆ ಬಿಜೆಪಿ ಬೆಂಬಲ: ದಿನೇಶ್ ಗುಂಡೂರಾವ್ ಆರೋಪ
ಬೆಂಗಳೂರು, ಆಗಸ್ಟ್ 20: ದೇಶದ ಪ್ರಖ್ಯಾತ ವಿಚಾರವಾದಿಗಳಾದ ಕಲ್ಬುರ್ಗಿ, ದಾಭೋಲ್ಕರ್ ಹಾಗೂ ಗೋವಿಂದ್ ಪನ್ಸಾರೆ, ಗೌರಿ ಲಂಕೇಶ್ ಹತ್ಯೆಗೈದ ಆರೋಪಿಗಳೆಲ್ಲರೂ ಬಿಜೆಪಿ ಸಿದ್ಧಾಂತಗಳನ್ನೇ ಹೊಂದಿದ್ದು ಇವರ ಹತ್ಯೆ ಹಿಂದೆ ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಕೈವಾಡವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾತನಾಡಿದ ಅವರು, ಬಿಜೆಪಿ ಒಂದು ಟೆರರಿಸ್ಟ್ ಗಳ ಪಕ್ಷ, ಬಿಜೆಪಿ ಸಿದ್ಧಾಂತ ಕೊಲ್ಲುವುದನ್ನು ಕಲಿಸುತ್ತದೆ. ಸನಾತನ ಧರ್ಮದ ಹೆಸರಿನಲ್ಲಿ ಉಗ್ರವಾದವನ್ನು ಬಿಜೆಪಿ ಬೆಳೆಸುತ್ತಿದೆ.
ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿದ ಕೆಪಿಸಿಸಿ ಅಧ್ಯಕ್ಷರು
ಪ್ರಗತಿಪರ ಚಿಂತನೆ ಇಲ್ಲದವರು ಬಿಜೆಪಿ,ಆರ್ಎಸ್ಎಸ್ ನವರು, ಈ ಹತ್ಯೆಯ ಹಿಂದೆ ಸನಾತನ ಧರ್ಮದ ಕೈವಾಡವಿದೆ ಎನ್ನುವುದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಿದೆ. ಆದರೂ ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ ಎಂದರು.
ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮುಂದುವರೆಸಿದ್ದು ಬಿಜೆಪಿಯವರು ಮೀಸಲಾತಿ ವಿರೋಧಿಗಳು, ಮಂಡಲ್ ಆಯೋಗದ ವರದಿಗೆ ವಿರೋಧ ಮಾಡಿದ್ದು ಅವರೇ ವರದಿ ವಿರುದ್ಧ ರಥಯಾತ್ರೆ ಮಾಡಿದವರು ಅಡ್ವಾಣಿ, ಮಹಿಳಾ ಮೀಸಲಾತಿಗೆ ವಿರೋಧಿಸಿದವರು ಬಿಜೆಪಿಯವರು ಮೀಸಲಾತಿ ಬೇಡವೆಂದಿದ್ದು ರಾಮಾಜೋಯಿಸ್ ಎಂದರು.
ಕೆಳವರ್ಗದವರ ಪರ ಬಿಜೆಪಿ ಇಲ್ಲ, ಅವರ ಅಪಪ್ರಚಾರದಿಂದ ನಾವು ಸೋಲಬೇಕಾಯಿತು, ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈ ಕುರಿತು ಬಿಜೆಪಿಯವರು ಬಾಯಿ ತೆರೆಯುತ್ತಿಲ್ಲ ಎಂದರು.