'ಜಗತ್ತಿಗೆ ಕಾಣುವ ಅಮಿನ್ ಮಟ್ಟು ಬೇರೆ, ಅವರ ಅಂತರಂಗವೇ ಬೇರೆ'
ಬೆಂಗಳೂರು, ಜೂನ್ 2: "ಜಗತ್ತಿನ ಕಣ್ಣಿಗೆ ಕಾಣಿಸಿಕೊಳ್ಳುವ ದಿನೇಶ್ ಅಮಿನ್ ಮಟ್ಟು ಬೇರೆ. ಅಂತರಂಗದಿಂದ ಆವರ ಸ್ವಭಾವ- ಆಲೋಚನೆ ಬೇರೆ. ಅದನ್ನೇ ನಾನು ಮುಂದಿಟ್ಟಿದ್ದೇನೆ" ಎಂದರು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಆರ್.ಭಾಸ್ಕರಪ್ರಸಾದ್.
ಅಂಕಣಕಾರ- ಲೇಖಕ ರೋಹಿತ್ ಚಕ್ರತೀರ್ಥ ಮೇಲೆ ಹಲ್ಲೆ ಅಥವಾ ಹುಡುಗರನ್ನು ಬಿಟ್ಟು ಬುದ್ಧಿ ಕಲಿಸುವುದಕ್ಕೆ ದಿನೇಶ್ ಅಮಿನ್ ಮಟ್ಟು ತಮಗೆ ಚಕ್ರತೀರ್ಥರ ಮೊಬೈಲ್ ನಂಬರ್, ಮನೆ ವಿಳಾಸವನ್ನು ಮೊಬೈಲ್ ಫೋನ್ ಗೆ ಕಳಿಸಿದ್ದರು. ಆ ನಂತರ ಎರಡು ದಿನ ಬಿಟ್ಟು ಏನು ಮಾಡಿದಿರಿ ಎಂದು ತಮ್ಮ ಆಪ್ತರ ಮೂಲಕ ಕೇಳಿಸಿದ್ದರು ಎಂದು ಭಾಸ್ಕರಪ್ರಸಾದ್ ಒನ್ಇಂಡಿಯಾ ಕನ್ನಡಕ್ಕೆ ಹೇಳಿದರು.
ಪ್ರಗತಿಪರರು ಯಾರು ಎಂದು ಪ್ರಶ್ನೆ ಮಾಡುತ್ತಾ, ದಿನೇಶ್ ಅಮಿನ್ ಮಟ್ಟು ಅವರು ರೋಹಿತ್ ಚಕ್ರತೀರ್ಥ ವಿರುದ್ಧ ಸುಪಾರಿ ಹತ್ಯೆಗೆ ಸಂಚು ನಡೆಸಿದ್ದರು ಎಂದು ಆರೋಪಿಸಿ, ಭಾಸ್ಕರಪ್ರಸಾದ್ ಫೇಸ್ ಬುಕ್ ನಲ್ಲಿ ಹಾಕಿದ್ದ ಪೋಸ್ಟ್ ಭಾರೀ ಚರ್ಚೆ ಹುಟ್ಟುಹಾಕಿದೆ. ಜತೆಗೆ ದಿನಪತ್ರಿಕೆಯೊಂದರಲ್ಲಿ ಈ ಬಗ್ಗೆ ವರದಿ ಕೂಡ ಪ್ರಕಟವಾಗಿದೆ.
ಅಮಿನ್ ಮಟ್ಟುವಿನಿಂದ ಹತ್ಯೆಗೆ ಸಂಚು: ರೋಹಿತ್ ಚಕ್ರತೀರ್ಥ ಹೇಳಿದ್ದೇನು?
ಅಂದಹಾಗೆ, ಭಾಸ್ಕರಪ್ರಸಾದ್ ಅವರು ದಿನೇಶ್ ಅಮಿನ್ ಮಟ್ಟು ಅವರ ಹಳೆಯ ಗೆಳೆಯರು. ನಾಲ್ಕು ವರ್ಷದ ಹಿಂದೆ ಆರಂಭವಾಗಿದ್ದ ಆ ಸ್ನೇಹ ಉಡುಪಿ ಚಲೋ ಹೋರಾಟದವರೆಗೆ ನಡೆದುಕೊಂಡು ಬಂದಿದೆ. ಸಮಾರೋಪ ಸಮಾರಂಭದ ವೇಳೆ ಕಾಂಗ್ರೆಸ್ ನಾಯಕರನ್ನು ವೇದಿಕೆ ಮೇಲೆ ಕೂರಿಸುವ ವಿಚಾರವಾಗಿ ಭಾಸ್ಕರಪ್ರಸಾದ್ ಅವರಿಗೆ ಅಮಿನ್ ಮಟ್ಟು ಜತೆಗೆ ಭಿನ್ನಾಭಿಪ್ರಾಯ ಮೂಡಿತಂತೆ.
ಹುಡುಗರನ್ನು ಕಳಿಸಿ ರೋಹಿತ್ ಚಕ್ರತೀರ್ಥನನ್ನು ನೋಡಿಕೊಳ್ಳಿ
ಹಾಗಂತ ರೋಹಿತ್ ಚಕ್ರತೀರ್ಥ ಅವರ ಜತೆಗೇನಾದರೂ ಭಾಸ್ಕರಪ್ರಸಾದ್ ಗೇನಾದರೂ ಸ್ನೇಹ ಇದೆಯಾ ಎಂದು ಪ್ರಶ್ನಿಸಿದರೆ, ಇಲ್ಲ, ಅವರ ಜತೆಗೆ ಕೂಡ ಸೈದ್ಧಾಂತಿಕವಾದ ಸಂಘರ್ಷ ಇದೆ. "ರೋಹಿತ್ ಚಕ್ರತೀರ್ಥ ಜತೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ಅವರನ್ನು ಕೊಂದುಬಿಡಬೇಕು ಎಂಬ ಆಲೋಚನೆ ನನಗಿಲ್ಲ. ಆದರೆ ದಿನೇಶ್ ಅಮಿನ್ ಮಟ್ಟು ನನ್ನ ಮೊಬೈಲ್ ಗೆ ಚಕ್ರತೀರ್ಥರ ಮನೆ ವಿಳಾಸ ಮೆಸೇಜ್ ಕಳಿಸಿ, ಹುಡುಗರನ್ನು ಕಳಿಸಿ, ನೋಡಿಕೊಳ್ಳಿ ಅಂತ ಹೇಳಿದರು. ಇದು ಅವರ ಕಚೇರಿಯಲ್ಲೇ ಹೇಳಿದ ಮಾತು. ನಾನು ಹಾಗೆ ಮಾಡುವಂಥವನಲ್ಲ. ಈ ಬಗ್ಗೆ ಸ್ಪಷ್ಟವಾಗಿ ಹೇಳಿ, ಆ ಕಡೆ ಹೋಗುವುದನ್ನೇ ಬಿಟ್ಟೆ. ಆದರೆ ಸಮಯ ಸಿಕ್ಕಾಗೆಲ್ಲ ನನ್ನ ವಿರುದ್ಧ ಅಮಿನ್ ಮಟ್ಟು ಕತ್ತಿ ಮಸೆಯುತ್ತಿದ್ದರು" ಎಂದರು ಭಾಸ್ಕರಪ್ರಸಾದ್.
ಉಡುಪಿ ಚಲೋ ಸಮಾರೋಪದಲ್ಲಿ ಭಿನ್ನಾಭಿಪ್ರಾಯ
ಉಡುಪಿ ಚಲೋ ಹೋರಾಟದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ. ಅದರ ಸಮಾರೋಪ ಸಮಾರಂಭದಲ್ಲಿ ಬಿ.ಕೆ.ಹರಿಪ್ರಸಾದ್, ಐವಾನ್ ಡಿಸೋಜಾ, ಪ್ರಮೋದ್ ಮಧ್ವರಾಜ್ ನ ಕೂರಿಸಬೇಕು ಅಂದರು ಅಮಿನ್ ಮಟ್ಟು. ಇದು ಕಾಂಗ್ರೆಸ್ ಕಾರ್ಯಕ್ರಮವಲ್ಲ ಅಂತ ಅದಕ್ಕೆ ನಾನು ವಿರೋಧಿಸಿದೆ. ಭಾಸ್ಕರಪ್ರಸಾದ್ ಇರೋ ಹಾಗಿದ್ದರೆ ನಾನು ಹೊರಟು ಹೋಗ್ತೀನಿ ಅಂತ ಅಮಿನ್ ಮಟ್ಟು ಬೆದರಿಸಿದರು. ಅಲ್ಲಿಂದ ಪೂರ್ತಿ ಅವರನ್ನು ಬಿಟ್ಟಾಕಿದೆ. ಆದರೆ ನನ್ನ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಲು ಆರಂಭಿಸಿದರು. ಅಮಿನ್ ಮಟ್ಟು ಅವರಿಗೆ ಬಿಜೆಪಿಯ ವಿರುದ್ಧ ಅಂದರೆ ಅದು ಕಾಂಗ್ರೆಸ್ ಅಂತೆ. ಕಾಂಗ್ರೆಸ್ ನೊಳಗಿನ ಭ್ರಷ್ಟರ ಬಗ್ಗೆ ಮಾತನಾಡಬಾರದಾ? ಈಚೆಗೆ ಕೂಡ ಒಂದು ಪೋಸ್ಟ್ ಹಾಕಿದ್ದರು. ಪ್ರಗತಿಪರರ ಸೋಗಿನಲ್ಲಿ ಕೆಲವರು ಬಿಜೆಪಿಯಿಂದ ಸುಪಾರಿ ಪಡೆದಿದ್ದಾರೆ ಅಂತ. ಸುಪಾರಿ ಅನ್ನೋ ಪದ ಬಳಸಿದ ಕಾರಣಕ್ಕೆ ನಾನು ಸಹ ಈ ಹಿಂದಿನ ಅವರದೇ ಸುಪಾರಿ ಸಲಹೆಯನ್ನು ಪ್ರಸ್ತಾವ ಮಾಡಿದೆ.
ಈಗ ನಾನೊಬ್ಬ ಬ್ಲಾಕ್ ಮೇಲರ್ ಆಗಿಬಿಟ್ಟನಾ?
ಇದೀಗ ಆರೋಪ ಮಾಡಿದ ನಂತರ ನನ್ನ ವಿರುದ್ಧ ದಾಳಿ ಮಾಡಿಸಲು ಆರಂಭಿಸಿದ್ದಾರೆ. ಇಷ್ಟು ಸಮಯ ನಾನೊಬ್ಬ ಹೋರಾಟಗಾರ. ಇದೀಗ ದಿನೇಶ್ ಅಮಿನ್ ಮಟ್ಟು ಬಣ್ಣ ಬಯಲು ಮಾಡುತ್ತಿದ್ದ ಹಾಗೆ ನಾನೊಬ್ಬ ಹಫ್ತಾ ವಸೂಲಿ ಮಾಡುವವನು, ಬ್ಲಾಕ್ ಮೇಲರ್ ಎಲ್ಲ ಆಗಿಬಿಟ್ಟನಾ? ಜತೆಗೆ ನಾಲ್ಕು ಗೋಡೆ ಮಧ್ಯೆ ಕೂತು ಮಾತನಾಡೋಣ ಅನ್ನಲು ಆರಂಭಿಸಿದ್ದಾರೆ. ನನ್ನ ಮೇಲೆ ಅಮಿನ್ ಮಟ್ಟು ದಾಳಿ ಮಾಡುವಾಗ ಯಾರೂ ಬಾಯಿ ಬಿಡಲಿಲ್ಲ. ಈಗ ಮಾತನಾಡಲು ಆರಂಭಿಸಿದ್ದಾರೆ. ನಾನು ಮಾಡಿದ ಆರೋಪದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು ಭಾಸ್ಕರಪ್ರಸಾದ್.
ನನ್ನೆದುರು ನಿಂತು ಎದೆ ಮುಟ್ಟಿಕೊಂಡು ಹೇಳಲಿ
ರೋಹಿತ್ ಚಕ್ರತೀರ್ಥ ವಿರುದ್ಧ ಹುಡುಗರನ್ನು ಕಳಿಸುವುದಕ್ಕೆ ಹೇಳಿ, ನನ್ನ ಮೊಬೈಲ್ ಫೋನ್ ಗೆ ವಿಳಾಸ ಕಳಿಸಿದ್ದು ಸತ್ಯ. ಅದನ್ನು ನಾನು ನಿರಾಕರಿಸಿದ್ದು ಕೂಡ ಅಷ್ಟೇ ಸತ್ಯ. ಆ ನಂತರ ನಾಲ್ಕೈದು ಮೊಬೈಲ್ ಫೋನ್ ಬದಲಿಸಿದ್ದೇನೆ. ಆದ್ದರಿಂದ ಆ ಮೆಸೇಜ್ ಇಲ್ಲ. ಆದರೆ ನಾನು ಹಾಗೆ ಹೇಳಿಲ್ಲ ಎಂದು ನನ್ನೆದುರು ಹೇಳುವ ಧೈರ್ಯ ದಿನೇಶ್ ಅಮಿನ್ ಮಟ್ಟು ಅವರಿಗೆ ಇದೆಯಾ? ನನ್ನೆದುರು ನಿಂತು, ಆ ರೀತಿ ಹೇಳಿಲ್ಲ್ ಎಂದು ಅವರ ಎದೆ ಮುಟ್ಟಿಕೊಂಡು ಸಮರ್ಥನೆ ಮಾಡಿಕೊಳ್ಳಲಿ ಎಂದು ಸವಾಲೆಸೆಯುತ್ತಾರೆ ಭಾಸ್ಕರಪ್ರಸಾದ್.