ಎಚ್ಡಿಕೆ-ಸಿದ್ದರಾಮಯ್ಯ ಜಟಾಪಟಿ: ಡಿಕೆಶಿ ಏನಂತಾರೆ?
ಬೆಂಗಳೂರು, ಜೂನ್ 27: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಜಟಾಪಟಿಗೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಮತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
'ನಮ್ಮ ನಡುವೆ ಯಾವುದೇ ಸಮಸ್ಯೆಯಿಲ್ಲ. ರಾಹುಲ್ ಗಾಂಧಿ ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅದಕ್ಕೆ ವಿಧೇಯರಾಗಿರುತ್ತೇವೆ. ಕೆಲವರು ಭಿನ್ನಾಭಿಪ್ರಾಯ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ರಾಷ್ಟ್ರ ಮತ್ತು ನಮ್ಮ ಪಕ್ಷದ ಹಿತಾಸಕ್ತಿಯ ಬಗ್ಗೆ ಯೋಚಿಸುತ್ತೇವೆ' ಎಂದು ಕನಕಪುರ ಶಾಸಕ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪೂರಕ ಬಜೆಟ್ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ದೇವೇಗೌಡ
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಬಜೆಟ್ ಕುರಿತು ಈಗಾಗಲೇ ವೈಮನಸ್ಯ ಆರಂಭವಾಗಿದೆ. ಸರ್ಕಾರ ಬದಲಾಗಿದೆಯಾದರೂ ಕಾಂಗ್ರೆಸ್ ಸಹ ಮೈತ್ರಿ ಸರ್ಕಾರದಲ್ಲಿರುವುದರಿಂದ, 2018-19 ನೇ ಹಣಕಾಸು ವರ್ಷಕ್ಕಾಗಿ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ಬಜೆಟ್ ಅನ್ನೇ ಕೆಲವು ಮಾರ್ಪಾಡುಗಳೊಂದಿಗೆ ಮಂಡಿಸಬೇಕು ಎಂಬುದು ಕಾಂಗ್ರೆಸ್ ಅಂಬೋಣ. ಆದರೆ ಜೆಡಿಎಸ್ ನಾಯಕರು ತಮಗೆ ಪೂರಕ ಬಜೆಟ್ ಬೇಕಿಲ್ಲ, ಪೂರ್ಣಪ್ರಮಾಣದ ಬಜೆಟ್ ಮಂಡಿಸುತ್ತೇವೆ ಎನ್ನುತ್ತಿದ್ದಾರೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಈ ನಡುವೆ 'ಎಚ್ ಡಿ ಕುಮಾರಸ್ವಾಮಿ ಸರ್ಕಾರ 5 ವರ್ಷ ಉಳಿಯುವುದು ಕಷ್ಟ' ಎಂದು ಸಿದ್ದರಾಮಯ್ಯ ಹೇಳಿರುವ ವಿಡಿಯೋ ಸಹ ಹೊಸ ಸರ್ಕಾರವನ್ನು ಪೇಚಿಗೆ ಸಿಲುಕಿಸಿದೆ.