ಬನಶಂಕರಿ ದೇವಿಗೆ ಪ್ರೇಮನಿವೇದನೆ, ವಿರಹ ವಿಮೋಚನೆಗೆ ಪತ್ರ
ಬೆಂಗಳೂರು, ನವೆಂಬರ್ 25: ನಗರದ ಬನಶಂಕರಿ ದೇವಾಲಯದ ಹುಂಡಿಯಲ್ಲಿ ಹಣದೊಂದಿಗೆ ವಿಚಿತ್ರ ನಿವೇದನೆಯ ಪತ್ರಗಳು ಸಿಕ್ಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
ದೇವಾಲಯದ ಹುಂಡಿಯಲ್ಲಿ ಭಕ್ತರು ವಿಚಿತ್ರ ನಿವೇದನೆಯೊಂದಿಗೆ ಬನಶಂಕರಿ ಅಮ್ಮನಿಗೆ ತಮ್ಮ ಇಷ್ಟಾರ್ಥ ನೆರವೇರಿದರೆ ಬಂಗಾರದ ತಾಳಿ, ಓಲೆ, ಬಳೆ, ವಡವೆ ಇತ್ಯಾದಿ ಕಾಣಿಕೆಯನ್ನು ನೀಡುತ್ತೇವೆ ಎಂದು ಬರೆದಿದ್ದಾರೆ.
ಒಂದು ಪತ್ರದಲ್ಲಿ ಅಮ್ಮಾ ನನ್ನ ಗಂಡನಿಗೆ ಒಳ್ಳೆಯ ಬುದ್ಧಿ ಕೊಡಮ್ಮ, ನಾನು ಹೇಳಿದಂತೆಯೇ ಕೇಳುವಂತೆ ಮಾಡಮ್ಮ ಎಂದಿದ್ದರೆ ಮತ್ತೊಂದು ಪತ್ರದಲ್ಲಿ ಅಮ್ಮಾ ಆಕೆ ನನ್ನಿಂದ ದೂರವಾಗುವಂತೆ ಮಾಡು, ಇನ್ನೊಂದು ಪತ್ರದಲ್ಲಿ ಆಕೆ ನನ್ನನ್ನು ಪ್ರೀತಿಸುವಂತೆ ಮಾಡು ನಿನಗೆ ಬಂಗಾರದ ತಾಳಿಯನ್ನು ಮಾಡಿಸಿಕೊಡುತ್ತೇನೆ. ಹೀಗೆ ಅನೇಕ ಚಿತ್ರ ವಿಚಿತ್ರ ರೀತಿಯಲ್ಲಿ ನಿವೇದನಾ ಪತ್ರಗಳನ್ನು ಹುಂಡಿಯಲ್ಲಿ ಹಾಕಿದ್ದಾರೆ, ಜೊತೆಗೆ ಕೆಲವರು ತಮ್ಮ ಭಾವಚಿತ್ರಗಳನ್ನೂ ಹಾಕಿದ್ದಾರೆ.
ಈ ಬಗ್ಗೆ ಮುಜರಾಯಿ ಇಲಾಖೆ ಎಸಿ ಪ್ರತಿಕ್ರಿಯಿಸಿದ್ದು, ಗುರುವಾರ ಬನಶಂಕರಿ ದೇವಾಲಯದ ಹುಂಡಿಯ ಎಣಿಕೆ ಕಾರ್ಯ ನಡೆಯಿತು ಆದರೆ ಹುಂಡಿಯಲ್ಲಿ ಹಣದೊಂದಿಗೆ 60ಕ್ಕೂ ಹೆಚ್ಚು ಪತ್ರಗಳು ಪತ್ತೆಯಾಗಿದ್ದವು. ಇದನ್ನು ಓದಿದರೆ ದೇವರಿಗೆ ಅನೇಕ ಬೇಡಿಕೆಗಳನ್ನು ಇಟ್ಟಂತೆ ಕಾಣಿಸಿದವರು, ಕೆಲವರು ತಮ್ಮ ಪ್ರೇಮ ನಿವೇದನೆಯನ್ನು ಹೇಳಿಕೊಂಡರೆ ಕೆಲವರು ತಮ್ಮ ಅನೈತಿಕ ಸಂಬಂಧ ದೂರವಾಗುವ, ಹತ್ತಿರುವಾಗುವ ನಿವೇದನೆಯ ಬೇಡಿಕೆಯನ್ನು ದೇವರಿಗೆ ವಿವರಿಸಿದ್ದರು ಎಂದು ಎಸಿ ತಿಳಿಸಿದರು.
ಹಲವು ಬಾರಿ ಹುಂಡಿ ತೆಗೆದಾಗಲೂ ಈ ರೀತಿ ಪತ್ರಗಳು ಬರುತ್ತಿವೆ. ಇದನ್ನು ನಾವು ಇದನ್ನು ಏನು ಮಾಡಬೇಕು ಎಂದು ತೋಚದಾಗಿದೆ, ತಮ್ಮ ಇಷ್ಟಾರ್ಥ ನೆರವೇರಿದವರು ಕಾಣಿಕೆಯನ್ನೂ ಒಪ್ಪಿಸಿದ್ದಾರೆ ಎಂದು ಬನಶಂಕರಿ ದೇವಾಲಯದ ಅರ್ಚಕರು ತಿಳಿಸಿದರು.