ಹಿರೇಮಠ್ ಆರೋಪಕ್ಕೆ ದೇವೇಗೌಡರ ತಿರುಗೇಟು
ಬೆಂಗಳೂರು, ನವೆಂಬರ್.1: ಬಿಡದಿ ಬಳಿ ಕೇತಗಾನಹಳ್ಳಿಯಲ್ಲಿ ದೇವೇಗೌಡರ ಪರಿವಾರದಿಂದ 200 ಎಕರೆ ಭೂಕಬಳಿಕೆ ನಡೆದಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ್ ಆರೋಪ ಮಾಡಿದ್ದರು. ಅದಕ್ಕೆ ತಿರುಗೇಟು ನೀಡಿರುವ ಮಾಜಿ ಪಿಎಂ ದೇವೇಗೌಡ ಅಲ್ಲಿರುವುದು 70-80 ಎಕರೆಯಷ್ಟೇ 200 ಎಕರೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇತಗಾನಹಳ್ಳಿ ಜಮೀನಿನ ಸಂಬಂಧ ಲೋಕಾಯುಕ್ತ, ಸಿಐಡಿ ತನಿಖೆ ನಡೆಸಿದೆ. ನ್ಯಾಯಾಲಯದಲ್ಲಿಯೂ ನ್ಯಾಯ ಹೊರಬಂದಿದೆ. ಯಾವ ಆರೋಪವೂ ಸಾಬೀತಾಗಿಲ್ಲ, ನಮ್ಮ ಕುಟುಂಬವನ್ನು ರಾಜಕೀಯವಾಗಿ ನಿರ್ಣಾಮ ಮಾಡಲು ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಭೂಕಬಳಿಕೆ ಆರೋಪ ಕೇಳಿಬಂದಿತ್ತು ಆ ವೇಳೆಯಲ್ಲಿ ತನಿಖೆ ನಡೆದಿದೆ ಎಂದು ಅವರು ಹಿರೇಮಠ್ ಆರೋಪಕ್ಕೆ ತಿರುಗೇಟು ನೀಡಿದರು.
ನಾವು ಸಾಮಾನ್ಯ ರೈತನ ಕುಟುಂಬದಿಂದ ಬಂದವರು ಕೇತಗಾನಹಳ್ಳಿಯಲ್ಲಿ ಕುಮಾರಸ್ವಾಮಿಯವರಿಗೆ 70-80 ಎಕರೆ ಜಮೀನಿದೆ. ಸಮೀಪ 110 ಎಕರೆ ಗೋಮಾಳವಿದೆ ಹೀಗಾಗಿ ಎಲ್ಲವನ್ನು ಸೇರಿಸಿ 200 ಎಕರೆ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸುವುದು ಸತ್ಯಕ್ಕೆ ದೂರವಾದ ಸಂಗತಿ ಎಂದರು.[ಕುಮಾರಸ್ವಾಮಿ ಅವರಿಂದ 200 ಎಕರೆ ಭೂ ಕಬಳಿಕೆ-ಹಿರೇಮಠ]
ಒಕ್ಕಲಿಗರ ಸಂಘದ ಬಗ್ಗೆ ಮಾತನಾಡಿ ಇಲ್ಲಿ ಎಲ್ಲವೂ ಸರಿಯಿಲ್ಲ ಪದಾಧಿಕಾರಿಗಳು ಸಮಸ್ಯೆಯನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ ನನ್ನದು ಸಂಘವನ್ನು ನೋಡಿಕೊಳ್ಳುವ ಕೆಲಸವಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ವ್ಯಂಗ್ಯ ಮಾದರಿ ಉತ್ತರ ನೀಡಿದರು.
ಸಂಕ್ರಾಂತಿ ನಂತರ ಜೆಡಿಎಸ್ ನೂತನ ಕಚೇರಿ ಉದ್ಘಾಟನೆ ಮಾಡಲಿದ್ದು, ಪ್ರಾದೇಶಿಕ ಪಕ್ಷವನ್ನು ಜಾತ್ಯಾತೀತವಾಗಿ ಎಲ್ಲೆಡೆ ಸಂಘಟಿಸಲಾಗುವುದು ಎಂದರು.
ಪಕ್ಷದ ಕೋರ್ಕಮಿಟಿಗೆ ಪುನಶ್ಚೇತನಗೊಳಿಸಲಾಗುವುದು. ವಿದೇಶ ಪ್ರವಾಸದಲ್ಲಿರುವ ಕುಮಾರಸ್ವಾಮಿ ಬಂದ ನಂತರ ಸಂಘಟನೆಗೆ ಹೆಚ್ಚಿನ ಬಲ ನೀಡಲಾಗುವುದು ಎಂದರು.
ರಾಜ್ಯೋತ್ಸವ ಸಂದರ್ಭದಲ್ಲಿ ಎಲ್ಲರು ಒಗ್ಗಟ್ಟಿನ ಮಾತನಾಡಬೇಕು ಎಂದು ತಿಳಿಸಿದರು. ಶ್ರೀನಿವಾಸ್ ಪ್ರಸಾದ್ ಹಿರಿಯ ರಾಜಕೀಯ ಮುಖಂಡರು ಅವರು ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುದು ಗೊತ್ತಿಲ್ಲ ಆದರೆ ಪಕ್ಷೇತರರಾಗಿ ನಂಜನಗೂಡಿನ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿಂತರೆ ಅವರನ್ನು ಪಕ್ಷ ಬೆಂಬಲಿಸಲಿದೆ ಎಂದರು.