ಮಾದಿಗ ಜನಾಂಗಕ್ಕೆ ಮೋಸ ಮಾಡ್ಬಿಟ್ರು ದೇವೇಗೌಡ್ರು: ಪಿಳ್ಳಮುನಿಶಾಮಪ್ಪ
ದೇವನಹಳ್ಳಿ ಏಪ್ರಿಲ್ 25 : ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಮಾದಿಗ ಜನಾಂಗಕ್ಕೆ ಮೋಸ ಮಾಡಿದ್ದಾರೆ. ಭಾಷಣದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಎಂದು ಮಾತನಾಡುತ್ತಾರೆ ಎಂದು ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಆರೋಪಿಸಿದರು.
ಜೆಡಿಎಸ್ ನಿಂದ ಅಭ್ಯರ್ಥಿ ಸ್ಥಾನ ಕೈ ತಪ್ಪಿದ ಕಾರಣ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆಯಲ್ಲಿ ಅಭ್ಯರ್ಥಿ ಘೋಷಣೆಯಲ್ಲಿ ಮಾಡಿರುವ ಮಹಾ ಮೋಸ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ದೊಡ್ಡ ಹೊಡೆತವಾಗಲಿದೆ. ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಮಾದಿಗ ಸಮಾಜದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ಸಮಾಜದ ಶಕ್ತಿಯನ್ನು ಚುನಾವಣೆಯಲ್ಲಿ ಪ್ರದರ್ಶಿಸುತ್ತೇವೆ ಎಂದರು.
ಗೇಮ್ ಆಡುತ್ತಿದ್ದವರನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ: ಕುಮಾರಸ್ವಾಮಿ
ನಿಸರ್ಗ ನಾರಾಯಣಸ್ವಾಮಿ ಅವರನ್ನು ನಮ್ಮ ಸಮಾಜ ಸೋಲಿಸುತ್ತದೆ. ಹಾಲಿ ಶಾಸಕರಿಗೆ ಅಭ್ಯರ್ಥಿ ಸ್ಥಾನ ಕೈ ತಪ್ಪಲು ಜಿಲ್ಲಾಧ್ಯಕ್ಷ ಮುನೇಗೌಡ, ತಾಲೂಕು ಕಾರ್ಯಾಧ್ಯಕ್ಷ ಮುನೇಗೌಡ ಕಾರಣ. ದೊಡ್ಡಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮುನೇಗೌಡ ರ ವಿರುದ್ಧ ನಮ್ಮ ಸಮಾಜ ಕೆಲಸ ಮಾಡುತ್ತದೆ. ಬಿ ಫಾರಂ ನೀಡಿ ನಾಮಪತ್ರ ಸಲ್ಲಿಕೆಯಾದ ನಂತರ ಹಾಲಿ ಶಾಸಕರಿಗೆ ಈ ರೀತಿ ಅವಮಾನ ಮಾಡಿರುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಬಂಡಾಯ ಅಭ್ಯರ್ಥಿ ಡಿ.ಆರ್ ನಾರಾಯಣಸ್ವಾಮಿ ಮಾತನಾಡಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬರಿ ಜೆಡಿಎಸ್ ನಿಂದ ಮಾತ್ರ ಮಾದಿಗ ಸಮಾಜಕ್ಕೆ ಅನ್ಯಾಯವಾಗಿಲ್ಲ, ರಾಷ್ಟ್ರೀಯ ಪಕ್ಷ ಬಿಜೆಪಿಯಲ್ಲೂ ಸಹ ಆಗಿದೆ. ಮಾದಿಗ ಸಮಾಜ ಎಲ್ಲಿ ರಾಜ್ಯದಲ್ಲಿ ಬಲಿಷ್ಠವಾಗುತ್ತದೆಯೋ ಎಂಬ ಭಯದಿಂದ ಈ ರೀತಿ ಮಾಡಲಾಗುತ್ತಿದೆ. ರಾಜ್ಯದಲ್ಲಿ 60 ರಿಂದ 70 ಲಕ್ಷ ಜನ ಸಂಖ್ಯೆ ಹೊಂದಿರುವ ಮಾದಿಗ ಜನಾಂಗಕ್ಕೆ ಯಾವ ರಾಜಕೀಯ ಪಕ್ಷಗಳು ಎಷ್ಟು ಅಭ್ಯರ್ಥಿಗಳನ್ನು ನೀಡಿವೆ ಎಂದು ಪ್ರಶ್ನಿಸಿದರು.
ದೇವನಹಳ್ಳಿ ಕ್ಷೇತ್ರದಲ್ಲಿ ಕೊನೆಯವರೆಗೂ ನಾನು ಬಿಜೆಪಿ ಅಭ್ಯರ್ಥಿ ಎಂದು ಹೇಳಲಾಗಿತ್ತು. ಆದರೆ ಮಾದಿಗ ಸಮಾಜಕ್ಕೆ ಸೇರಿದವನು ಎಂದು ಅಭ್ಯರ್ಥಿ ಸ್ಥಾನ ಕೈ ತಪ್ಪಿದೆ. ಕ್ಷೇತ್ರದಲ್ಲಿ ನಮ್ಮ ಜನಾಂಗ ಒಂದಾಗಿ ಮುಂದಿನ ಚುನಾವಣೆ ಎದುರಿಸುತ್ತೇವೆ. ನಮ್ಮ ಸಮಾಜದ ಎಲ್ಲ ಮುಖಂಡರು ಸೇರಿ ನನ್ನನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧರಿಸಿದರೆ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದು ತಿಳಿಸಿದರು.
ಮಾದಿಗ ಸಮುದಾಯದ ಮುಖಂಡ ಮಾರಪ್ಪ ಮಾತನಾಡಿ, ಜೆಡಿಎಸ್ ಹಾಲಿ ಶಾಸಕ ಪಿಳ್ಳಮುನಿಶಾಮಪ್ಪ ಅವರಿಗೆ ಬಿ ಫಾರಂ ನೀಡಿ, ನಾಮಪತ್ರ ಸಲ್ಲಿಕೆಯ ಕೊನೆ ಗಳಿಗೆಯಲ್ಲಿ ರಾತ್ರೋರಾತ್ರಿ ಅಭ್ಯರ್ಥಿ ಬದಲಾವಣೆ ಮಾಡಿ ಹೊರ ಕ್ಷೇತ್ರದ ಬಲ ಸಮುದಾಯಕ್ಕೆ ಸಿ ಫಾರಂ ನೀಡಿರುವುದಕ್ಕೆ ಖಂಡಿಸಿದರು.