ದೇವೇಗೌಡ, ಕುಮಾರಸ್ವಾಮಿ ದೈವಾಂಶ ಸಂಭೂತರಂತೆ!
ಬೆಂಗಳೂರು, ಅಕ್ಟೋಬರ್ 02: ದೇವೇಗೌಡ ಹಾಗೂ ಕುಮಾರಸ್ವಾಮಿ ಇಬ್ಬರೂ ದೈವಾಂಶ ಸಂಭೂತರಂತೆ. ಜನರ ಉದ್ದಾರಕ್ಕಾಗಿ ಎಂದೇ ಅವತಾರವತ್ತೆ ಭೂಮಿಗೆ ಬಂದಿದ್ದಾರಂತೆ!
ಮೇಲಿನ ಮಾತುಗಳನ್ನು ಯಾರೋ ಬೀದಿ-ಬದಿ ಜ್ಯೋತಿಷಿ ಅಲ್ಲ ಹೇಳಿರುವುದು. ಸಮ್ಮಿಶ್ರ ಸರ್ಕಾರದ ಮಂತ್ರಿಯೇ ಒಬ್ಬರು ತಮ್ಮ ನಾಯಕರನ್ನು ಹಾಗೂ ಅವರ ನಾಯಕರನ್ನು ಹೊಗಳಿರುವುದು ಹೀಗೆ.
ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ದೈವಾಂಶ ಸಂಭೂತರೆಂದು ಹೊಗಳಿದ್ದಾರೆ. ಆದರೆ ಈ ಹೊಗಳಿಕೆಗೆ ಕಾರಣ ಈ ಮುಂಚೆ ಅವರಿಂದಲೇ ಆಗಿದ್ದ ತಪ್ಪನ್ನು ಸರಿಪಡಿಸುವುದಕ್ಕಾಗಿ ಈ ಹೊಗಳಿಕೆಯ ಸುರಿ ಮಳೆ ಸುರಿಸಿದ್ದಾರೆ.
ಯಡಿಯೂರಪ್ಪ ಅವರು ಇತ್ತೀಚೆಗಷ್ಟೆ ರಾಹು-ಕೇತು-ಶನಿಗಳು ಮೈತ್ರಿ ಸರ್ಕಾರದಲ್ಲಿವೆ ಎಂದಿದ್ದರು. ಅದಕ್ಕೆ ಮುಂಚೆ ಸಿದ್ದರಾಮಯ್ಯ ಅವರು, ರಾಹು-ಕೇತುಗಳು ಸೇರಿ ಚಾಮುಂಡೇಶ್ವರಿಯಲ್ಲಿ ನನ್ನನ್ನು ಸೋಲಿಸಿದವು. ಎಂದಿದ್ದರು. ದೇವೇಗೌಡ-ಕುಮಾರಸ್ವಾಮಿ ಅವರನ್ನೇ ರಾಹು-ಕೇತು ಎನ್ನಲಾಗಿದೆ ಎಂದು ವಿಶ್ಲೇಷಿಸಲಾಗಿತ್ತು.
ಈ ಬಗ್ಗೆ ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಚಿವ ಪುಟ್ಟರಾಜು ಅವರು, ಮಾತನಾಡುವ ಭರದಲ್ಲಿ ನಮ್ಮಲ್ಲ ದೇವೇಗೌಡ-ಕುಮಾರಸ್ವಾಮಿ ಇದ್ದಾರೆ ಹಾಗಾಗಿ ರಾಹು-ಕೇತುಗೆ ಇಲ್ಲಿ ಪ್ರವೇಶ ಇಲ್ಲ ಎಂದು ಹೇಳಿ ಪೇಚಿಗೆ ಸಿಲುಕಿದ್ದರು. ಹಾಗಾಗಿ ನಿನ್ನೆ ಮತ್ತೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಪುಟ್ಟರಾಜು ಅವರು ದೇವೇಗೌಡ-ಕುಮಾರಸ್ವಾಮಿ ದೈವಾಂಶ ಸಂಭೂತರು ಎಂದರು.