ಬೆಂಗಳೂರು,ಕಾಲೇಜಿನ ಸಮೀಪವೇ ಡಿಪ್ಲೋಮಾ ವಿದ್ಯಾರ್ಥಿ ಕೊಲೆ
ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಪಿಇಎಸ್ ಕಾಲೇಜಿನ ವಿದ್ಯಾರ್ಥಿ ಹರ್ಷನನ್ನು ಕಾಲೇಜಿನ ಸಮೀಪವೇ ಇರಿದು ಕೊಲೆ ಮಾಡಲಾಗಿದೆ. ವಿದ್ಯಾರ್ಥಿಯನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.
ಬೆಂಗಳೂರು, ಡಿಸೆಂಬರ್ 21: ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಪಿಇಎಸ್ ಕಾಲೇಜಿನ ವಿದ್ಯಾರ್ಥಿಯನ್ನು ಕಾಲೇಜಿನ ಸಮೀಪವೇ ಇರಿದು ಕೊಲೆ ಮಾಡಿರುವ ಘಟನೆ ಜರುಗಿದೆ. ಘಟನೆ ಕಾರಣ ತಿಳಿದು ಬಂದಿಲ್ಲ. ಆದರೆ ಹರ್ಷನಿಗೆ ಸ್ಥಳೀಯ ಆಸ್ಪತ್ರೆಯ ವೈದ್ಯರು ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಲಿಲ್ಲ ಎಂದು ಸ್ನೇಹಿತರು ಆರೋಪಿಸಿದ್ದಾರೆ.
ಪಿಇಎಸ್ ಕಾಲೇಜಿನಲ್ಲಿ ಎರಡನೇ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಹರ್ಷ(21) ಮೂಲತಃ ಮಂಡ್ಯ ಜಿಲ್ಲೆಯವನು, ಬ್ಯಾಟರಾಯನಪುರ ಕಾಳಿದಾಸ ಲೇಔಟಿನಲ್ಲಿ ವಾಸವಾಗಿದ್ದನು. ಮಂಗಳವಾರ ಮಧ್ಯಾಹ್ನ 2.30ರ ಸಮಯದಲ್ಲಿ ಕಾಲೇಜು ಸಮೀಪ ಹರ್ಷ ಸ್ನೇಹಿತರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ 6-7 ಮಂದಿಯಿದ್ದ ಗುಂಪು ಏಕಾಏಕಿ ಈತನ ಮೇಲೆ ದಾಳಿ ಮಾಡಿ ಚಾಕುವಿನಿಂದ ಬಲವಾಗಿ ಇರಿದು ಪರಾರಿಯಾಗಿದೆ.[ಅಮೆರಿಕ: ಹೈದರಾಬಾದಿನ ವಿದ್ಯಾರ್ಥಿ ಕೊಲೆ, ರೂಂಮೇಟ್ ಬಂಧನ]
ಇರಿತದಿಂದ ಗಂಭೀರ ಗಾಯಗೊಂಡಿದ್ದ ಈತನನ್ನು ಸ್ನೇಹಿತರೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮಧ್ಯರಾತ್ರಿ 12.30ರಲ್ಲಿ ಹರ್ಷ ಸಾವಿಗೀಡಾಗಿದ್ದಾನೆ.
ಈ ಘಟನೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿದ ಡಿಸಿಪಿ ಡಾ.ಶರಣಪ್ಪ ಪರಿಶೀಲನೆ ನಡೆಸಿ, ಕೃತ್ಯ ವೆಸಗಿ ಪರಾರಿಯಾಗಿರುವ ಆರೋಪಿಗಳನ್ನು ಸದ್ಯದಲ್ಲೇ ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.[ಬೆಂಗಳೂರು : 8ನೇ ತರಗತಿ ವಿದ್ಯಾರ್ಥಿ ಅಪಹರಣ, ಕೊಲೆ]
ಹರ್ಷನನ್ನು ಸೂಕ್ತ ಸಮಯಕ್ಕೆ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಸೂಕ್ತ ಸಮಯಕ್ಕೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದ ಪರಿಣಾಮ ಹರ್ಷ ಸಾವಿಗೀಡಾಗಿದ್ದಾನೆ ಎಂದು ಸ್ನೇಹಿತರು ಆರೋಪಿಸಿದರು.