ಪರಿಹಾರಧನಕ್ಕೆ ವಿಳಂಬ: ಬಿಡಿಎ ಕಚೇರಿಯಲ್ಲೇ ಮಹಿಳೆ ಆತ್ಮಹತ್ಯೆಗೆ ಯತ್ನ
ಬೆಂಗಳೂರು, ಅಕ್ಟೋಬರ್, 24: ಪರಿಹಾರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದಿಂದ ಬೇಸತ್ತ ಮಹಿಳೆಯೊಬ್ಬರು ಇಲ್ಲಿಯ ಬಿಡಿಎ ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ.
ಮಹಾಲಕ್ಷ್ಮೀ ಲೇಔಟ್ ನಿವಾಸಿಯಾದ ಮಂಗಳ(52)ಮಹಿಳೆಯೊಬ್ಬರು ಕುಮಾರ ಕೃಪಾದಲ್ಲಿರುವ ಬಿಡಿಎ ಕಚೇರಿ ಆವರಣದಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿತ್ರಾಣಗೊಂಡಿದ್ದ ಮಹಿಳೆಯನ್ನು ಕೂಡಲೇ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮೂರು ವರ್ಷಗಳ ಹಿಂದೆ ರಿಂಗ್ ರಸ್ತೆ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಮಂಗಳಅವರ ಮನೆಯನ್ನು ಬಿಡಿಎ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದರು. ಆದರೆ ಪರಿಹಾರ ಹಣ ನೀಡುವಲ್ಲಿ ಮೂರು ವರ್ಷದಿಂದ ಬಿಡಿಎ ವಿಳಂಬ ಧೋರಣೆ ಅನುಸರಿಸಿರುವುದೇ ಮಹಿಳೆ ಆತ್ಮಹತ್ಯೆ ಯತ್ನಕ್ಕೆ ಕಾರಣ ಎನ್ನಲಾಗಿದೆ.
ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದಿರುವುದಕ್ಕೆ ನೊಂದು 'ಮೂರು ವರ್ಷಗಳಿಂದ ನಮ್ಮ ಕುಟುಂಬಕ್ಕೆ ಬಿಡಿಎ ಅಧಿಕಾರಿಗಳು ಚಿತ್ರಹಿಂಸೆ ಕೊಟ್ಟಿದ್ದಾರೆ. ಬಿಡಿಎದಿಂದ ನಮ್ಮ ಕುಟುಂಬ ಸಾಕಷ್ಟು ನೊಂದಿದೆ ಎಂದು ಮಂಗಳ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿದ ಸಂದರ್ಭದಲ್ಲಿ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಸ್ಥಳದಲ್ಲೇ ಇದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು 'ಮಹಿಳೆ ನಿತ್ರಾಣಗೊಂಡು ಕೆಳಗೆ ಬಿದ್ದ ದೃಶ್ಯ ನಾನು ಗಮನಿಸಿದ್ದೇನೆ ಎಂದು ಹೇಳಿದರು.
ಭೂಸ್ವಾಧೀನಾಧಿಕಾರಿ ನೂರ್ ಜಹರಾ ಖಾನಂ ಅವರು ಕೂಡಲೇ ಮಹಿಳೆಯ ರಕ್ಷಣೆಗೆ ಧಾವಿಸಿ ಮಹಿಳೆಯನ್ನು ಶಿವಾಜಿನಗರ ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು.
ಬಿಡಿಎ ಆಯುಕ್ತ ರಾಜ್ ಕುಮಾರ್ ಖತ್ರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆ ಆರೋಗ್ಯವನ್ನು ವಿಚಾರಿಸಿದ್ದು, ಮಹಿಳೆ ಚೇತರಿಸಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.