ಬೆಂಗಳೂರಿನ ಕೆರೆ ಒತ್ತುವರಿ ಪರಿಶೀಲಿಸಿದ ಡಿಸಿಎಂ ಜಿ.ಪರಮೇಶ್ವರ್
ಬೆಂಗಳೂರು, ಜೂನ್ 11: ನಗರದಲ್ಲಿರುವ ಕೆರೆಗಳ ಪರಿಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಬಿಬಿಎಂಪಿ ಮೇಯರ್ ಸಂಪತ್ರಾಜ್ ಸೋಮವಾರ ಕೆರೆಗಳ ಪರಿಶೀಲನೆ ನಡೆಸಿದರು.
ಸಿವಿ ರಾಮನ್ ನಗರ ಕ್ಷೇತ್ರದ ಕಗ್ಗದಾಸನಪುರ ಕೆರೆ ತಪಾಸಣೆ ನಡೆಸಿದರು, ನಂತರ ಬೆಳ್ಳಂದೂರು ಕೆರೆ ಪರಿಶೀಲನೆ ನಡೆಸಲಿದ್ದಾರೆ, ಕೆರೆ ಅಭಿವೃದ್ಧಿ ಮಾಡುವಂತೆ, ಕೆರೆ ಉಳಿಸುವಂತೆ ಸ್ಥಳೀಯರು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಪರಿಶೀಲನಾ ಕಾರ್ಯವನ್ನು ಕೈಗೊಂಡಿದ್ದಾರೆ.
ಕೆರೆ ಹೂಳು ತೆಗೆಯುವುದು, ನೀರುಗಾಲುವೆಗಳ ಅಭಿವೃದ್ಧಿ, ಕೊಳಚೆ ನೀರು ತಡೆಗಟ್ಟುವುದು, ಒತ್ತುವರಿ ಜಾಗ ವಶಕ್ಕೆ ಪಡೆಯುವುದು ಸೇರಿದಂತೆ ಒಟ್ಟಾರೆ ಕೆರೆ ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. 48 ಎಕರೆ ಪ್ರದೇಶವಿರುವ ಕಗ್ಗದಾಸಪುರ ಕೆರೆ ಸದ್ಯ 37 ಅಕರೆಗೆ ತಲುಪಿದೆ. ಕಗ್ಗದಾಸಪುರ ಕೆರೆ 11 ಎಕರೆ ಒತ್ತುವರಿಯಾಗಿದೆ. ಇಲ್ಲಿಯವರೆಗೆ ಕಗ್ಗದಾಸಪುರ ಕೆರೆ ಅಭಿವೃದ್ಧಿಗೆ 2 ಕೋಟಿ 98 ಲಕ್ಷ ವೆಚ್ಚ ಮಾಡಲಾಗಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಪರಿಶೀಲನೆ ಮೂಲಕ ತಿಳಿದುಬಂದಿದೆ.
ಬೆಳ್ಳಂದೂರು: ಒಣ ತ್ಯಾಜ್ಯ ಕೇಂದ್ರವನ್ನು ತೆರೆಯಲು ವಿಫಲವಾದ ಬಿಬಿಎಂಪಿ
ಡಾ. ಜಿ. ಪರಮೇಶ್ವರ್ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಬಳಿಕ ಮೊದಲ ಪರಿಶೀಲನೆ ಇದಾಗಿದೆ, ಪರಿಶೀಲನೆಗೆ ಬಿಬಿಎಂಪಿ ಅಧಿಕಾರಿಗಳು, ಸಾರ್ವಜನಿಕರು ಅಲ್ಲಿನ ಶಾಸಕರು ಸಾಥ್ ನೀಡಿದರು.